ʼರಾಜ್ಯಕ್ಕೆ ವೈಚಾರಿಕ ನಿಲುವುಳ್ಳ ನಾಯಕರ ಅಗತ್ಯವಿದೆ, ಸತೀಶ್ ಜಾರಕಿಹೊಳಿ ಆ ಹೊಣೆ ಹೊರುವ ವ್ಯಕ್ತಿʼ : ನಾಯಕತ್ವ ಚರ್ಚೆ ಮಧ್ಯೆ ಯತೀಂದ್ರ ಹೇಳಿಕೆ
Update: 2025-10-22 18:44 IST
ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಯೊಂದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಪ್ಪಲಗುದ್ದಿಯಲ್ಲಿ ನಡೆದ ಸಂತ ಕನಕದಾಸರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಮ್ಮ ತಂದೆಯವರು ತಮ್ಮ ರಾಜಕೀಯ ಜೀವನದ ಕೊನೆಯ ಹಂತದಲ್ಲಿದ್ದಾರೆ. ರಾಜ್ಯಕ್ಕೆ ಈಗ ಪ್ರಗತಿಪರ ತತ್ವ ಮತ್ತು ವೈಚಾರಿಕ ನಿಲುವುಳ್ಳ ನಾಯಕರ ಅಗತ್ಯವಿದೆ. ಸತೀಶ್ ಜಾರಕಿಹೊಳಿಯವರು ಆ ಹೊಣೆ ಹೊರುವ ವ್ಯಕ್ತಿ. ಅವರು ಮಾದರಿಯಾಗಿ ರಾಜ್ಯದ ರಾಜಕೀಯವನ್ನು ಮುನ್ನಡೆಸಬಲ್ಲರು” ಎಂದು ಯತೀಂದ್ರ ತಿಳಿಸಿದ್ದಾರೆ.
ಈ ಮೂಲಕ ಪರೋಕ್ಷವಾಗಿ ಸತೀಶ್ ಜಾರಕಿಹೊಳಿ ಅವರು ಮುಂದಿನ ಮುಖ್ಯಮಂತ್ರಿ ಆಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.