ಬಳ್ಳಾರಿ | ಕೇಂದ್ರ ಸರಕಾರದ ʼನಶಮುಕ್ತ ಭಾರತʼ ಅಭಿಯಾನ ಯೋಜನೆಯ 5ನೇ ವಾರ್ಷಿಕೋತ್ಸವ
ಜಿಲ್ಲಾ ಕೇಂದ್ರದಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜನೆ
ಬಳ್ಳಾರಿ : ಕೇಂದ್ರ ಸರ್ಕಾರದ ನಶಮುಕ್ತ ಭಾರತ ಅಭಿಯಾನ ಯೋಜನೆಯು ಪ್ರಾರಂಭವಾಗಿ 5 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ 5ನೇ ವಾರ್ಷಿಕೋತ್ಸವದ ಅಂಗವಾಗಿ ಜಿಲ್ಲಾ ಕೇಂದ್ರದಲ್ಲಿ ಆ.31 ರವರೆಗೆ ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳ ಕುರಿತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋವಿಂದಪ್ಪ ಅವರು ತಿಳಿಸಿದ್ದಾರೆ.
ಕಾಲೇಜು ಮತ್ತು ಅಂತರ್ ಕಾಲೇಜುಗಳಲ್ಲಿ ಸ್ಫರ್ಧೆ, ಸೆಮಿನಾರ್, ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು. ಮಾದಕ ದ್ರವ್ಯ ವಿರೋಧಿ ಮಾನವ ಸರಪಳಿ ರಚನೆ, ವಿದ್ಯಾರ್ಥಿಗಳ ಮತ್ತು ಜನಸಮೂಹದ ಜಾಥಾ, ಬೀದಿ ನಾಟಕ, ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳಾದ ಮ್ಯಾರಥಾನ್, ವಾಕಥಾನ್, ಮಾದಕ ದ್ರವ್ಯ ಸೇವೆನೆ ವಿರುದ್ದ ಓಟ, ಕ್ರೀಡಾ ಪಂದ್ಯಾವಳಿಗಳನ್ನು ಆಯೋಜಿಸಲಾಗುವುದು.
ಎಲ್ಲಾ ಶಾಲೆ ಮತ್ತು ಕಾಲೇಜು ಆವರಣದಲ್ಲಿ ಸಸಿ ನೆಡುವುದು, ಅವುಗಳನ್ನು ನಶಾ ಮುಕ್ತ ಭಾರತ ಅಭಿಯಾನಕ್ಕೆ ಅರ್ಪಿಸುವುದು. ಎಲ್ಲಾ ವಿದ್ಯಾರ್ಥಿಗಳು, ಯುವತಿಯರು, ಉದ್ಯೋಗಿಗಳು ಮತ್ತು ಇತರರು ಜಾಲತಾಣ, https://nmba.dosje.govt.in/content/-a-pledge?type=e-pledge ಈ ಮೂಲಕ ಪ್ರತಿಜ್ಞಾವಿಧಿ ತೆಗೆದುಕೊಂಡು ಪ್ರಮಾಣ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು ಹಾಗೂ ಈ ಎಲ್ಲಾ ಕಾರ್ಯಕ್ರಮ ಮತ್ತು ಚಟುವಟಿಕೆಗಳನ್ನು ಎನ್ಎಂಬಿಎ ಮೊಬೈಲ್ ಆಪ್ ನಲ್ಲಿ ಕಡ್ಡಾಯವಾಗಿ ಅಪ್ ಲೋಡ್ ಮಾಡಬೇಕು. ಭಾವಚಿತ್ರಗಳನ್ನು ddwballari01@gmail.com ಇ-ಮೇಲ್ಗೆ ಕಳುಹಿಸಬೇಕು.
ನಶಾ ಮುಕ್ತ ಭಾರತ ಅಭಿಯಾನದ ಎಲ್ಲಾ ಕಾರ್ಯಕ್ರಮಗಳ ಜೊತೆಗೆ ಆ.13 ರಂದು ಮಾದಕ ವಸ್ತು ಸೇವನೆ ಮಾಡದೇ ಇರುವುದಾಗಿ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ, ಕಚೇರಿಗಳಲ್ಲಿ, ವಿಶ್ವವಿದ್ಯಾನಿಲಯಗಳು, ವಸತಿ ನಿಲಯಗಳಲ್ಲಿ, ಸಮುದಾಯದಲ್ಲಿ ಹಾಗೂ ಸಂಘಸಂಸ್ಥೆಗಳಲ್ಲಿ ಸಾಮೂಹಿಕ ಪತಿಜ್ಞೆಯನ್ನು ಕೈಗೊಳ್ಳುವುದರ ಮೂಲಕ ಕೇಂದ್ರ ಸರ್ಕಾರದ ನಶಾ ಮುಕ್ತ ಭಾರತ ಅಭಿಯಾನ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.