×
Ad

ಬಳ್ಳಾರಿ | ಉದ್ಯೋಗ ಆಧಾರಿತ ಪ್ರೋತ್ಸಾಹಧನ ಯೋಜನೆಗೆ ಅನುಮೋದನೆ

Update: 2025-07-08 16:42 IST

ಬಳ್ಳಾರಿ :ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಉದ್ಯೋಗ ಆಧಾರಿತ ಪ್ರೋತ್ಸಾಹಧನ (ಇಎಲ್‌ಐ) ಯೋಜನೆಗೆ ಅನುಮೋದನೆ ನೀಡಿದ್ದು, ಉದ್ಯೋಗ ಸೃಷ್ಠಿ ಮತ್ತು ಎಲ್ಲಾ ಉತ್ಪಾದನಾ ವಲಯಗಳಲ್ಲಿ ಉದ್ಯೋಗಾವಕಾಶ ಮತ್ತು ಸಾಮಾಜಿಕ ಭದ್ರತೆ ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಓ) ಬಳ್ಳಾರಿ ಪ್ರಾದೇಶಿಕ ಕಚೇರಿಯ ಆಯುಕ್ತ ಕೆ.ವಿ.ಪ್ರವೀಣ್ ಅವರು ಹೇಳಿದರು.

ಮಂಗಳವಾರ ನಗರದ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಓ) ಬಳ್ಳಾರಿ ಪ್ರಾದೇಶಿಕ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಓ) ಬಳ್ಳಾರಿ ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ಕೊಪ್ಪಳ ಸೇರಿ ನಾಲ್ಕು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವ ಕೈಗಾರಿಕಾ ವಲಯ ಮತ್ತು ಇತರೆ ವಲಯಗಳ ಹೊಸ ಉದ್ಯೋಗಿಗಳು ಹಾಗೂ ಉದ್ಯೋಗಿಗಳಿಗೆ ಕೆಲಸ ನೀಡಿದ ಉದ್ಯೋಗದಾತರು ಇಬ್ಬರಿಗೂ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ ಎಂದರು.

ಉದ್ಯೋಗ ಆಧಾರಿತ ಪ್ರೋತ್ಸಾಹಧನ ಯೋಜನೆಯ ಭಾಗವಾಗಿ ಹೊಸದಾಗಿ ಉದ್ಯೋಗದಲ್ಲಿರುವ ವ್ಯಕ್ತಿಗಳು ಹಾಗೂ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಉದ್ಯೋಗದಾತರು ಕೇಂದ್ರ ಸರ್ಕಾರದ ಪ್ರೋತ್ಸಾಹಕಗಳಿಂದ ಪ್ರಯೋಜನ ಪಡೆಯುತ್ತಾರೆ ಎಂದು ತಿಳಿಸಿದರು.

ಈ ಯೋಜನೆಯು ಎರಡು ಭಾಗಗಳನ್ನು ಒಳಗೊಂಡಿದ್ದು, ʻಭಾಗ-ಎʼ ಮೊದಲ ಬಾರಿಗೆ ಕೆಲಸ ಮಾಡುವವರ ಮೇಲೆ ಗಮನ ಕೇಂದ್ರೀಕರಿಸಿದರೆ ʻಭಾಗ-ಬಿʼ ಉದ್ಯೋಗದಾತರ ಮೇಲೆ ಗಮನ ಕೇಂದ್ರೀಕರಿಸಿದೆ ಎಂದರು.

ಭಾಗ ಎ: ಮೊದಲ ಬಾರಿಯ ಉದ್ಯೋಗಿಗಳಿಗೆ ಪ್ರೋತ್ಸಾಹ:

ಈ ಭಾಗವು ʻಇಪಿಎಫ್‌ಒ’ ನಲ್ಲಿ ನೋಂದಾಯಿತರಾದ ಮೊದಲ ಬಾರಿಯ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡಿದ್ದು, ಈ ಯೋಜನೆಯ ಸಾಮಾಜಿಕ ಭದ್ರತೆಯ ಮೂಲಕ ಸುರಕ್ಷತಾ ಜಾಲವನ್ನು ಒದಗಿಸುತ್ತದೆ ಮತ್ತು ಔಪಚಾರಿಕ ಆರ್ಥಿಕತೆಗೆ ಸಂಯೋಜಿಸಲು ಅವರಿಗೆ ಸಹಾಯ ಮಾಡುತ್ತದೆ. 1 ಲಕ್ಷ ರೂ. ವರೆಗೆ ಮಾಸಿಕ ವೇತನ ಪಡೆಯುವ ಉದ್ಯೋಗಿಗಳು ಅರ್ಹರಾಗಿರುತ್ತಾರೆ.

ಪ್ರತಿಯೊಬ್ಬ ಅರ್ಹ ಉದ್ಯೋಗಿಗೆ ಒಂದು ತಿಂಗಳ ಇಪಿಎಫ್ ವೇತನ (15,000 ರೂ. ವರೆಗೆ) ಎರಡು ಕಂತುಗಳಲ್ಲಿ ಲಭಿಸಲಿದೆ. ಆರು ತಿಂಗಳ ನಿರಂತರ ಸೇವೆಯ ನಂತರ ಮೊದಲ ಕಂತನ್ನು ವಿತರಿಸಲಾಗುತ್ತದೆ. 12 ತಿಂಗಳ ನಂತರ ಮತ್ತು ಕಡ್ಡಾಯ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ಪೂರ್ಣಗೊಂಡ ನಂತರ ಎರಡನೇ ಕಂತನ್ನು ಬಿಡುಗಡೆ ಮಾಡಲಾಗುತ್ತದೆ. ದೀರ್ಘಕಾಲೀನ ಹಣಕಾಸು ಯೋಜನೆಯನ್ನು ಉತ್ತೇಜಿಸಲು ಪ್ರೋತ್ಸಾಹದ ಒಂದು ಭಾಗವನ್ನು ಉಳಿತಾಯ ಸಾಧನ ಅಥವಾ ಠೇವಣಿ ಖಾತೆಯಲ್ಲಿ ಇಡಲಾಗುತ್ತದೆ.

ಭಾಗ ಬಿ: ಉದ್ಯೋಗದಾತರಿಗೆ ಬೆಂಬಲ:

ಈ ಭಾಗವು ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚುವರಿ ಉದ್ಯೋಗ ಸೃಷ್ಟಿಯತ್ತ ಗಮನ ಹರಿಸುತ್ತದೆಯಾದರೂ, ಉತ್ಪಾದನಾ ವಲಯದ ಮೇಲೆ ವಿಶೇಷವಾಗಿ ಗಮನ ಕೇಂದ್ರೀಕರಿಸುತ್ತದೆ. ಗರಿಷ್ಟ 1 ಲಕ್ಷ ರೂ. ವರೆಗಿನ ವೇತನ ಹೊಂದಿರುವ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಉದ್ಯೋಗದಾತರು ಈ ಪ್ರೋತ್ಸಾಹಧನವನ್ನು ಪಡೆಯುತ್ತಾರೆ. ಕನಿಷ್ಠ ಆರು ತಿಂಗಳವರೆಗೆ ನಿರಂತರ ಉದ್ಯೋಗ ಹೊಂದಿರುವ ಪ್ರತಿ ಹೆಚ್ಚುವರಿ ಉದ್ಯೋಗಿಗೆ ಸರ್ಕಾರವು ಎರಡು ವರ್ಷಗಳವರೆಗೆ ತಿಂಗಳಿಗೆ 3,000 ರೂ. ಗಳವರೆಗೆ ಪ್ರೋತ್ಸಾಹಧನ ನೀಡುವ ಮೂಲಕ ಉದ್ಯೋಗದಾತರನ್ನು ಪ್ರೋತ್ಸಾಹಿಸುತ್ತದೆ. ಉತ್ಪಾದನಾ ವಲಯಕ್ಕೆ, ಪ್ರೋತ್ಸಾಹಕಗಳನ್ನು 3 ಮತ್ತು 4 ನೇ ವರ್ಷಗಳಿಗೂ ವಿಸ್ತರಿಸಲಾಗುವುದು.

ಯೋಜನೆಯ ಅನುಷ್ಠಾನ:

ಉದ್ಯೋಗ ಆಧಾರಿತ ಪ್ರೋತ್ಸಾಹಧನ ಯೋಜನೆಯಡಿ ಎಲ್ಲಾ ವಿತರಣೆಗಳು ಪಾರದರ್ಶಕತೆ ಮತ್ತು ದಕ್ಷತೆಗಾಗಿ ನೇರ ನಗದು ವರ್ಗಾವಣೆ (ಡಿಬಿಟಿ) ಮಾದರಿ ಅನುಸರಿಸುತ್ತದೆ. ಉದ್ಯೋಗಿಗಳಿಗೆ ಪಾವತಿಗಳನ್ನು (ಭಾಗ ಎ) ಆಧಾರ್ ಸಂಯೋಜಿತ ಪಾವತಿ ವ್ಯವಸ್ಥೆ (ಎಬಿಪಿಎಸ್) ಮೂಲಕ ರವಾನಿಸಲಾಗುತ್ತದೆ. ಉದ್ಯೋಗಿ ಪ್ರೋತ್ಸಾಹಕಗಳನ್ನು (ಭಾಗ ಬಿ) ನೇರವಾಗಿ ಪಾನ್-ಸಂಬಂಧಿತ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಉದ್ಯೋಗದಾತ ಮತ್ತು ಉದ್ಯೋಗಿ ಪ್ರಯೋಜನಗಳು ಎರಡೂ ನಿರಂತರತೆ ಮತ್ತು ಅನುಸರಣೆಗೆ ಸಂಬಂಧಿಸಿರುವುದರಿಂದ, ಪ್ರೋತ್ಸಾಹಕ-ಸಂಬಂಧಿತ ಮಾದರಿಯು ನಿರಂತರ ಉದ್ಯೋಗವನ್ನು ಪ್ರೋತ್ಸಾಹಿಸುತ್ತದೆ ಮತ್ತು ದುರುಪಯೋಗವನ್ನು ಕಡಿಮೆ ಮಾಡುತ್ತದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಭವಿಷ್ಯ ನಿಧಿ ಪ್ರಾದೇಶಿಕ ಕಚೇರಿಯ ಸಹಾಯಕ ಆಯುಕ್ತ ಟಿ.ನಂದನ್ ಸಿಂಗ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News