ಬಳ್ಳಾರಿ | ಯಶಸ್ವಿಯಾಗಿ ನಡೆದ ʼತೆರಿಗೆʼ ಕಾರ್ಯಾಗಾರ
ಬಳ್ಳಾರಿ : ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಟ್ಯಾಕ್ಸ್ ಪ್ರಾಕ್ಟೀಷನರ್ಸ್ ಆಫ್ ಇಂಡಿಯಾ, ಬಳ್ಳಾರಿ ಟ್ಯಾಕ್ಸ್ ಪ್ರಾಕ್ಟೀಷನರ್ಸ್ ಅಸೋಸಿಯೇಷನ್, ಕರ್ನಾಟಕ ಪ್ರೊಫೆಷನಲ್ ಸಿವಿಲ್ ಇಂಜಿನಿಯರ್ಸ್ ಸ್ಟೀರಿಂಗ್ ಕೌನ್ಸಿಲ್ ಮತ್ತು ಚೇತನ್ ಇನ್ಸ್ಟಿಟ್ಯೂಟ್ ಆಫ್ ಬಿಸಿನೆಸ್ ಸೊಲ್ಯೂಷನ್ಸ್ಗಳ ಜಂಟಿ ಆಶ್ರಯದಲ್ಲಿ “ತೆರಿಗೆ” ಕುರಿತ ಕಾರ್ಯಾಗಾರವು ಬುಧವಾರ ಬಳ್ಳಾರಿ ಡಿಸಿಸಿಐ ಆಡಿಟೋರಿಯಂನಲ್ಲಿ ನಡೆಯಿತು.
ಕಾರ್ಯಾಗಾರವನ್ನು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ, ವಾಣಿಜ್ಯ ತೆರಿಗೆ ಜಾರಿ ಇಲಾಖೆಯ ಜಂಟಿ ಆಯುಕ್ತ ಡಾ.ಕುಮಾರ್ ನಾಯಕ್ ಜಿ, ಕೇಂದ್ರ ತೆರಿಗೆ ಮತ್ತು ಕಸ್ಟಮ್ಸ್ ಸಹಾಯಕ ಆಯುಕ್ತ ಎನ್.ಎಂ. ಗಣೇಶ್ ಕುಮಾರ್, ಆಲ್ ಇಂಡಿಯಾ ಟ್ಯಾಕ್ಸ್ ಪೇಯರ್ಸ್ ಒಕ್ಕೂಟದ ಅಧ್ಯಕ್ಷ ಎಸ್.ಆರ್. ಮಠಪತಿ, ಕೆಪಿಸಿಇಎಸ್ಸಿಯ ಕಲಬುರ್ಗಿ ವಿಭಾಗದ ಉಪಾಧ್ಯಕ್ಷ ಕೆ.ಬಿ. ಸಂಜೀವ ಪ್ರಸಾದ್, ಹಾಗೂ ಟ್ಯಾಲಿ ಸೊಲ್ಯೂಷನ್ಸ್ನ ರವಿ ತಾಳಿಕೋಟೆ ಅವರು ಜಂಟಿಯಾಗಿ ಉದ್ಘಾಟಿಸಿದರು.
ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು ಸ್ವಾಗತ ಭಾಷಣದಲ್ಲಿ, ನಮ್ಮ ಸಂಸ್ಥೆಯು ಜನಪರ ಸೇವಾ ಚಟುವಟಿಕೆಗಳಿಗೆ ಬದ್ಧವಾಗಿದ್ದು, ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಭವಿಷ್ಯದ ಉದ್ಯಮಿಗಳಿಗೆ ಮಾರ್ಗದರ್ಶನ ನೀಡಲು ಇಂಕ್ಯುಬೇಷನ್ ಸೆಂಟರ್ ಆರಂಭಿಸಲಾಗಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಜಸ್ಟಿನ್ ಕ್ರಿಸ್ಟಫರ್ ಅವರು ಸ್ಪಾಂಜ್ ಐರನ್, ಮೆಡಿಕಲ್, ಕಿರಾಣಿ, ಕೋಲ್ಡ್ ಸ್ಟೋರೇಜ್ ಮತ್ತು ಕಾಟನ್ ಮಿಲ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೆರಿಗೆ ವ್ಯವಸ್ಥೆಯ ಕುರಿತು ವಿವರಿಸಿದರು.
ಶ್ರೀಧರ ಪಾರ್ಥಸಾರಥಿ ಅವರು ತೆರಿಗೆ ಪಾವತಿ ಪ್ರಕ್ರಿಯೆ, ತಾಂತ್ರಿಕ ಗೊಂದಲಗಳು ಹಾಗೂ ಸಮಸ್ಯೆಗಳ ಪರಿಹಾರ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮವನ್ನು ಟ್ಯಾಕ್ಸೇಷನ್ ಸಮಿತಿ ಅಧ್ಯಕ್ಷ ಸಿಎ.ಕೆ.ರಾಜಶೇಖರ ಅವರು ನಿರೂಪಿಸಿದರು. ವೆಂಕಟೇಶ ಕುಲಕರ್ಣಿ ಅವರು ವಂದನಾರ್ಪಣೆ ಮಾಡಿದರು.
ವೇದಿಕೆಯಲ್ಲಿ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು, ಜಂಟಿ ಕಾರ್ಯದರ್ಶಿಗಳು ಡಾ. ಮರ್ಚೆಡ್ ಮಲ್ಲಿಕಾರ್ಜುನಗೌಡ, ವಿ. ರಾಮಚಂದ್ರ, ಕಾರ್ಯಕಾರಿ ಸಮಿತಿ ಸದಸ್ಯರು, ಹಿರಿಯ ವಕೀಲ ಅಪ್ಪಯ್ಯ ಭಟ್, ಟ್ಯಾಕ್ಸ್ ಪ್ರಾಕ್ಟೀಷನರ್ ಉಸ್ಮಾನ್ ಶರೀಫ್, ಚೇತನ್ ಇನ್ಸಿಟ್ಯೂಟ್ನ ಚೌವ್ಹಾಣ ಮನೋಹರ, ಹಾಗೂ ಬೆಳಗಾವಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಉದ್ಯಮಿಗಳು, ವೃತ್ತಿಪರರು ಹಾಗೂ ವಿವಿಧ ಸಂಘ–ಸಂಸ್ಥೆಗಳ ಸದಸ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿ ಚರ್ಚೆ ನಡೆಸಿದರು.