ಬಳ್ಳಾರಿ | ಕೇಂದ್ರ ಬಜೆಟ್ ಕರ್ನಾಟಕಕ್ಕೆ ನಿರಾಶೆ ತಂದಿದೆ: ರಾಜಭಕ್ಷಿ ಟೀಕೆ
ಬಳ್ಳಾರಿ / ಕಂಪ್ಲಿ: ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ ಕರ್ನಾಟಕ ರಾಜ್ಯದ ಪಾಲಿಗೆ ಸಂಪೂರ್ಣ ನಿರಾಶಾದಾಯಕವಾಗಿದೆ. ಇದೊಂದು ಭರವಸೆ ನೀಡದ, ಜನ ವಿರೋಧಿ ಬಜೆಟ್ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ರಾಜಭಕ್ಷಿ ಅವರು ತೀವ್ರವಾಗಿ ಟೀಕಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಾತ್ಮ ಗಾಂಧಿಯವರ ಹೆಸರನ್ನು ಕೈಬಿಟ್ಟಿದ್ದಕ್ಕೆ ಕಾಂಗ್ರೆಸ್ ಪಕ್ಷ ದೇಶದಾದ್ಯಂತ ಉಗ್ರ ಹೋರಾಟ ನಡೆಸಿತ್ತು ಎಂದು ಹೇಳಿದರು.
ಆ ಹೋರಾಟದ ಫಲವಾಗಿ ಇದೀಗ ಗಾಂಧಿ ಗ್ರಾಮ ಸ್ವರಾಜ್ ಯೋಜನೆ ಜಾರಿಗೆ ತರಲಾಗುವುದಾಗಿ ಕೇಂದ್ರ ಸಚಿವೆ ಘೋಷಿಸಿರುವುದು ಸ್ವಾಗತಾರ್ಹ, ಆದರೆ ಇದು ಕೇವಲ ಚುನಾವಣಾ ಲೆಕ್ಕಾಚಾರ ಎಂದರು.
ಚುನಾವಣೆ ದೃಷ್ಟಿಯಿಂದ ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ಬಂಪರ್ ಅನುದಾನ ಘೋಷಣೆ ಮಾಡಲಾಗಿದ್ದು, ಕರ್ನಾಟಕ ರಾಜ್ಯದ ವಿರುದ್ಧ ಮಲತಾಯಿ ಧೋರಣೆ ಅನುಸರಿಸಲಾಗಿದೆ ಎಂದು ಅವರು ಆರೋಪಿಸಿದರು.
ನೀರಾವರಿ ಮತ್ತು ಕೃಷಿ ಯೋಜನೆಗಳಿಗೆ ಯಾವುದೇ ಹೊಸ ಅನುದಾನ ಘೋಷಣೆ ಮಾಡಿಲ್ಲ. ಬಳ್ಳಾರಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆಗೂ ಕೇಂದ್ರ ಬಜೆಟ್ನಲ್ಲಿ ಸ್ಥಾನವಿಲ್ಲ. ಬಿಜೆಪಿ ಸಚಿವರು ಹಾಗೂ ಸಂಸದರಿಂದ ರಾಜ್ಯದ ಮೇಲೆ ನಿರ್ಲಕ್ಷ್ಯ ಧೋರಣೆ ಮುಂದುವರೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಗೆ ಅಥವಾ ಗ್ರಾಮೀಣಾಭಿವೃದ್ಧಿ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಯಾವುದೇ ಪೂರಕ ಬೆಂಬಲ ಸಿಕ್ಕಿಲ್ಲ ಎಂದು ರಾಜಭಕ್ಷಿ ಅಸಮಾಧಾನ ವ್ಯಕ್ತಪಡಿಸಿದರು.