ಬಿಡಾಡಿ ದನಗಳ ಮಾಲಕರು ಮನೆಯಲ್ಲಿಯೇ ಜಾನುವಾರುಗಳನ್ನು ಪೋಷಿಸಲಿ: ಬಳ್ಳಾರಿ ಮನಾಪಾ
ಬಳ್ಳಾರಿ,ಆ.23: ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬಿಡಾಡಿ ದನಗಳ ಮಾಲಕರು ತಮ್ಮ ಜಾನುವಾರುಗಳನ್ನು ಮನೆಗಳಲ್ಲಿಯೇ ಪೋಷಿಸಬೇಕು. ಇಲ್ಲದಿದ್ದಲ್ಲಿ ಗೋಶಾಲೆಗೆ ಸಾಗಿಸಲಾಗುವುದು ಎಂದು ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು(ಪರಿಸರ) ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಗರದ ರಸ್ತೆಗಳಲ್ಲಿ, ವೃತ್ತಗಳಲ್ಲಿ, ಆಟ ಮೈದಾನ, ಮಾರುಕಟ್ಟೆ, ಉದ್ಯಾನವನ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ಜಾನುವಾರುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪಾದಾಚಾರಿಗಳಿಗೆ, ಮಕ್ಕಳಿಗೆ, ವೃದ್ಧರಿಗೆ, ವಾಹನ ಚಾಲಕರಿಗೆ ಮತ್ತು ವ್ಯಾಪಾರಸ್ಥರಿಗೆ ತೊಂದರೆ ಉಂಟಾಗುತ್ತಿದ್ದು, ಪಾಲಿಕೆಗೆ ಸಾಕಷ್ಟು ದೂರುಗಳು ದಾಖಲಾಗಿವೆ. ಹಾಗಾಗಿ ಬಿಡಾಡಿ ದನದ ಮಾಲಕರಿಗೆ ಆ.25 ರೊಳಗಾಗಿ ಕಾಲಾವಕಾಶ ನೀಡಿದ್ದು, ತಮ್ಮ ಜಾನುವಾರುಗಳನ್ನು ಸ್ವಗೃಹದಲ್ಲಿ ಪೋಷಣೆ ಮಾಡಬೇಕು.
ತಪ್ಪಿದ್ದಲ್ಲಿ ಕರ್ನಾಟಕ ಜಾನುವಾರು ಸಾಗಣೆ ಕಾಯ್ದೆ 1966 ಹಾಗೂ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 125(ಬಿ) ಮತ್ತು ಕರ್ನಾಟಕ ಮಹಾನಗರಪಾಲಿಕೆ ಕಾಯ್ದೆ 1976ರ ನಿಯಮ 344, 345 ಮತ್ತು 346ರ ಪ್ರಕಾರ ಕ್ರಮ ಕಾನೂನು ಕ್ರಮ ಜರಗಿಸಲಾಗುವುದು ಎಂದು ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.