ಸಿರುಗುಪ್ಪ | ತೆಕ್ಕಲಕೋಟೆಯಲ್ಲಿ 1992–93ರ ಎಸೆಸೆಲ್ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ : ನಿವೃತ್ತ ಶಿಕ್ಷಕರಿಗೆ ಸನ್ಮಾನ
ಸಿರುಗುಪ್ಪ: ಜೀವನದಲ್ಲಿ ಅನೇಕ ಸಂಗತಿಗಳನ್ನು ಮರೆಯಬಹುದು. ಆದರೆ ಕಲಿತ ಶಾಲೆ, ಕಲಿಸಿದ ಶಿಕ್ಷಕರು ಹಾಗೂ ಹುಟ್ಟಿದ ಊರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಸಾರುವ ಅಪರೂಪದ ಕ್ಷಣಕ್ಕೆ ತಾಲೂಕಿನ ತೆಕ್ಕಲಕೋಟೆ ಪಟ್ಟಣ ಭಾನುವಾರ ಸಾಕ್ಷಿಯಾಯಿತು.
1992–93ನೇ ಸಾಲಿನ ಎಸ್ಎಸ್ಎಲ್ಸಿ ಹಳೆಯ ವಿದ್ಯಾರ್ಥಿಗಳು ಅಯ್ಯಪ್ಪಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಿ, ಸುಮಾರು ಮೂರು ದಶಕಗಳ ಬಳಿಕ ಒಂದಾಗಿ ತಮ್ಮನ್ನು ರೂಪಿಸಿದ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಲ್ಲಿಸಿ ಕೃತಜ್ಞತೆ ವ್ಯಕ್ತಪಡಿಸಿದರು.
ಶಾಲಾ ದಿನಗಳ ಸಿಹಿ-ಕಹಿ ನೆನಪುಗಳು, ಶಿಕ್ಷಕರ ಶಿಸ್ತು, ಮಾರ್ಗದರ್ಶನ ಹಾಗೂ ಜೀವನ ಮೌಲ್ಯಗಳನ್ನು ಮೆಲುಕು ಹಾಕಿದ ವಿದ್ಯಾರ್ಥಿಗಳು ಕೆಲಕಾಲ ಬಾಲ್ಯದ ದಿನಗಳಿಗೆ ಮರಳಿದಂತಾಯಿತು.
ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ವಿ. ನರಸಿಂಹಪ್ಪ ಮಾತನಾಡಿ, “ದಶಕಗಳ ಬಳಿಕವೂ ವಿದ್ಯಾರ್ಥಿಗಳು ಶಿಕ್ಷಕರನ್ನು ನೆನಪಿಸಿಕೊಂಡು ಗೌರವಿಸುವುದು ಶಿಕ್ಷಕ ವೃತ್ತಿಗೆ ಸಂದ ಅತ್ಯುನ್ನತ ಗೌರವ. ಇದಕ್ಕಿಂತ ದೊಡ್ಡ ಪ್ರಶಸ್ತಿ ಶಿಕ್ಷಕರಿಗೆ ಮತ್ತೊಂದಿಲ್ಲ” ಎಂದು ಹೇಳಿದರು.
ನಿವೃತ್ತ ಶಿಕ್ಷಕ ಚಂದ್ರಮೋಹನ್ ಮಾತನಾಡಿ, “ಶಿಕ್ಷಣವು ಉದ್ಯೋಗ ಪಡೆಯುವ ಸಾಧನ ಮಾತ್ರವಲ್ಲ; ಉತ್ತಮ ವ್ಯಕ್ತಿತ್ವ ರೂಪಿಸುವ ಜೀವನ ಮೌಲ್ಯವಾಗಿದೆ. ಹಳೆಯ ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸ ಮತ್ತು ಗೌರವವೇ ಶಿಕ್ಷಕರ ಬದುಕಿನ ನಿಜವಾದ ಸಂಪತ್ತು” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬಳ್ಳಾರಿ ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಎ. ಗಾದಿಲಿಂಗಪ್ಪ, ವಾಸವಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ. ಮಾರುತಿ, ಅಬ್ದುಲ್ ಖಾದರ್ ಜೀಲಾನಿ, ಸಯ್ಯದ್ ಅಬ್ದುಲ್ ರಜಾಕ್ ಖಾದ್ರಿ, ಚಂದ್ರಕಲಾ, ಮನೋಹರ, ಬಿರಿಯಾನಿ ಮೌಲಾಲಿ, ಯು. ನಾಗೇಂದ್ರ, ನೂರ್ ಅಹ್ಮದ್, ಸುಬಾನ್ ಸೇರಿದಂತೆ ಹಳೆಯ ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು ಹಾಗೂ ಸ್ನೇಹಿತರು ಉಪಸ್ಥಿತರಿದ್ದರು.