ಪದ್ಮಾ ರಾಮಚಂದ್ರ ಶರ್ಮರಿಗೆ ಸಾಹಿತ್ಯ ಅಕಾಡಮಿ ದತ್ತಿ ಪ್ರಶಸ್ತಿ: ಮುಕುಂದರಾಜ್
Update: 2026-07-04 23:49 IST
ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡಮಿ ನೀಡುವ 2025ನೇ ಸಾಲಿನ ‘ಪದ್ಮ-ಶಾಸ್ತ್ರಿ ಗೌರವ ಅನುವಾದಕ ಪ್ರಶಸ್ತಿ'ಗೆ ಅನುವಾದಕಿ ಪದ್ಮಾ ರಾಮಚಂದ್ರ ಶರ್ಮ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ತಿಳಿಸಿದ್ದಾರೆ.
ಶನಿವಾರ ಈ ಕುರಿತು ಪ್ರಕಟನೆ ನೀಡಿರುವ ಅವರು, ಪ್ರಶಸ್ತಿಯು 50 ಸಾವಿರ ರೂ.ನಗದು ಒಳಗೊಂಡಿದೆ. ವಿಮರ್ಶಕ ಪ್ರೊ. ಸಿ.ಎನ್.ರಾಮಚಂದ್ರನ್ ಅವರು ಈ ಪ್ರಶಸ್ತಿಗೆ ದತ್ತಿನಿಧಿ ಇರಿಸಿದ್ದಾರೆ. ಸಾಹಿತ್ಯ ಕೃತಿಗಳನ್ನು ಕನ್ನಡದಿಂದ ಇಂಗ್ಲಿಷ್ ಗೆ ಅನುವಾದಿಸಿದ ಸಾಹಿತಿಗಳ ಜೀವಮಾನ ಸಾಧನೆ ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
1936ರಲ್ಲಿ ಮೈಸೂರಿನಲ್ಲಿ ಜನಿಸಿದ ಪದ್ಮಾ ಅವರು ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯ ಅವರ ತಂಗಿಯ ಮರಿಮಗಳು, ನವ್ಯ ಚಳವಳಿಯ ಪ್ರಮುಖ ಕವಿ ರಾಮಚಂದ್ರ ಶರ್ಮ ಅವರ ಪತ್ನಿ. ಅವರು ಹಲವು ಕೃತಿಗಳನ್ನು ಕನ್ನಡದಿಂದ ಇಂಗ್ಲಿಷ್ ಗೆ ಅನುವಾದಿಸಿದ್ದಾರೆ ಎಂದು ತಿಳಿಸಿದ್ದಾರೆ.