ಔರಾದ್ | ನಾಯಿಗಳ ದಾಳಿಯಿಂದ ಜಿಂಕೆ ರಕ್ಷಣೆ
ಔರಾದ್ : ತಾಲೂಕಿನ ಡೊಂಗರಗಾಂವ್ ಗ್ರಾಮದ ಸಮೀಪ ಮಂಗಳವಾರ ಜಿಂಕೆಯೊಂದನ್ನು ನಾಯಿಗಳು ದಾಳಿ ಮಾಡುತ್ತಿದ್ದ ವೇಳೆ ಸ್ಥಳೀಯರು ಹಾಗೂ ಪೊಲೀಸರು ತಕ್ಷಣ ಧಾವಿಸಿ ರಕ್ಷಿಸಿದ ಘಟನೆ ನಡೆದಿದೆ.
ರಸ್ತೆಯಲ್ಲಿ ಸಾಗುತ್ತಿದ್ದ ಆಕಾಶ್ ಕಡೆಮನಿ ಮತ್ತು ರವಿ ದರಬಾರೆ ಅವರು ಜಿಂಕೆಯ ಮೇಲೆ ನಾಯಿಗಳು ದಾಳಿ ನಡೆಸುತ್ತಿರುವುದನ್ನು ಗಮನಿಸಿ ನಾಯಿಗಳನ್ನು ಓಡಿಸಿದ್ದಾರೆ. ಅದೇ ವೇಳೆ ಅಲ್ಲಿಂದ ತೆರಳುತ್ತಿದ್ದ ಹೊಕ್ರಾಣಾ ಪೊಲೀಸ್ ಠಾಣೆಯ ಮುಖ್ಯ ಪೆದೆ ಸಾಯಿಲು ಗೌಡ ಹಾಗೂ ಉಮಾಕಾಂತ್ ಕಾಂಬೆಳೆ ಘಟನೆ ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಇದೇವೇಳೆ ಆ ಮಾರ್ಗದಿಂದ ಸಾಗುತ್ತಿದ್ದ ವೈದ್ಯ ಡಾ.ಯುನುಸ್ ಖಾನ್ ಅವರು ತಕ್ಷಣ ಧಾವಿಸಿ ಗಾಯಗೊಂಡ ಜಿಂಕೆಯ ಕಾಲಿಗೆ ಪ್ರಥಮ ಚಿಕಿತ್ಸೆ ನೀಡಿದರು. ನಂತರ ಅರಣ್ಯ ಗಸ್ತು ಪಾಲಕ ಬಸವರಾಜ್ ಕುಂಬಾರ್ ಸ್ಥಳಕ್ಕೆ ಆಗಮಿಸಿ ಜಿಂಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ವ್ಯವಸ್ಥೆ ಮಾಡಿದರು.
ಅರಣ್ಯ ಇಲಾಖೆ ಸಿಬ್ಬಂದಿಗಳಾದ ನರಸಿಂಗ್, ಸುಭಾಷ್, ವಸಂತ್ ಸೇರಿದಂತೆ ಸ್ಥಳೀಯರು ಸಹಕರಿಸಿದರು. ಮಾನವೀಯತೆ ಮೆರೆದ ನಾಗರಿಕರು ಹಾಗೂ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.