Basavakalyan | ಮಕ್ಕಳಲ್ಲಿನ ನೈಜ ಪ್ರತಿಭೆ ಹುಡುಕುವ ಶಿಕ್ಷಕರಾಗಬೇಕು: ಶಾಸಕ ಎಸ್. ಸುರೇಶಕುಮಾರ್
ಬಸವಕಲ್ಯಾಣ: ಮಕ್ಕಳಲ್ಲಿರುವ ನೈಜ ಪ್ರತಿಭೆಯನ್ನು ಗುರುತಿಸಿ, ಅದನ್ನು ಬೆಳೆಸುವ ಶಿಕ್ಷಕರಾಗಬೇಕು ಎಂದು ಮಾಜಿ ಸಚಿವ ಹಾಗೂ ರಾಜಾಜಿನಗರ ಶಾಸಕ ಎಸ್. ಸುರೇಶಕುಮಾರ್ ಹೇಳಿದರು.
ನಗರದ ರಥ ಮೈದಾನದ ಸಭಾಭವನದಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬ ಶಿಕ್ಷಕರು ವಿದ್ಯಾರ್ಥಿಗಳಲ್ಲಿನ ನೈಜ ಪ್ರತಿಭೆಯನ್ನು ಗುರುತಿಸಿ, ಅದನ್ನು ಬೆಳೆಸಲು ಪ್ರೋತ್ಸಾಹಿಸಬೇಕು. ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸುವ ದಿನಾಚರಣೆಗಳಲ್ಲಿ ಶಿಕ್ಷಕರ ದಿನಾಚರಣೆಯೂ ಪ್ರಮುಖವಾಗಿದೆ. ಸಮಾಜದಲ್ಲಿ ಶಿಕ್ಷಕರ ನಡೆ, ನುಡಿ ಹಾಗೂ ನಡವಳಿಕೆ ಅತ್ಯಂತ ಮಹತ್ವದ್ದಾಗಿದ್ದು, ಮಕ್ಕಳು ಶಿಕ್ಷಕರನ್ನು ಅನುಸರಿಸುತ್ತಾರೆ ಎಂದು ತಿಳಿಸಿದರು.
ನನ್ನ ತಾಯಿ ಶಾಲಾ ಶಿಕ್ಷಕಿಯಾಗಿದ್ದರು. ಶಾಲಾ ಶಿಕ್ಷಕಿಯ ಮಗನಾಗಿ ಕಾನೂನು ಸಚಿವ, ನಗರಾಭಿವೃದ್ಧಿ ಸಚಿವ ಹಾಗೂ ಶಿಕ್ಷಣ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ಸಚಿವನಾಗಿ ನಿರ್ವಹಿಸಿದ ಖಾತೆಗಳಲ್ಲಿ ಶಿಕ್ಷಣ ಖಾತೆ ನನಗೆ ಅತ್ಯಂತ ಸಂತಸ ನೀಡಿತ್ತು ಎಂದು ಹೇಳಿದರು.
ಇಡೀ ದೇಶದಲ್ಲಿ ಕೋವಿಡ್ ಆವರಿಸಿದ್ದ ಸಂದರ್ಭದಲ್ಲಿ ಕರ್ನಾಟಕದಲ್ಲಿ 10ನೇ ತರಗತಿ ಪರೀಕ್ಷೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಮಕ್ಕಳಿಗೆ ಕೋವಿಡ್ ಹರಡದಂತೆ ಶಿಕ್ಷಕರು ಮುನ್ನೆಚ್ಚರಿಕೆ ವಹಿಸಿದ್ದರು. ಇದರ ಶ್ರೇಯಸ್ಸು ಶಿಕ್ಷಕರಿಗೆ ಸಲ್ಲುತ್ತದೆ ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ಹಾಗೂ ಚಲನಚಿತ್ರ ನಟ ಜಗ್ಗೇಶ್ ಮಾತನಾಡಿ, ಗುರುವಿನ ಶಕ್ತಿ ಎಲ್ಲವನ್ನೂ ಮೀರಿಸುವ ಶಕ್ತಿಯಾಗಿದೆ. ಬ್ರಹ್ಮ, ವಿಷ್ಣು, ಮಹೇಶ್ವರರಿಗೂ ಮೀರಿಸುವಂತಹ ಶಕ್ತಿ ಗುರುಗಳಿಗಿದೆ. ಮನುಷ್ಯನ ಜೀವನದಲ್ಲಿ ‘ಮಾತೃದೇವೋಭವ’ ಹಾಗೂ ‘ಗುರುದೇವೋಭವ’ ಎಂದು ಕರೆಯುವುದು ಸುಮ್ಮನೆ ಅಲ್ಲ. ತಾಯಿ ಮತ್ತು ಗುರು ಇಬ್ಬರೂ ನಮ್ಮ ಜೀವನದ ಪ್ರಮುಖ ಶಕ್ತಿಗಳಾಗಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಹಾರಕೂಡ ಮಠದ ಡಾ. ಚನ್ನವೀರ ಶಿವಾಚಾರ್ಯ, ಹುಲಸೂರ ಮಠದ ಡಾ. ಶಿವಾನಂದ ಮಹಾಸ್ವಾಮಿ ಹಾಗೂ ಶಾಸಕ ಶರಣು ಸಲಗರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತ ಪ್ರಕಾಶ್ ಕುದುರೆ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.