×
Ad

ಬೀದರ್ | ಆರಂಭಿಕ ರೋಗ ಪತ್ತೆ, ಚಿಕಿತ್ಸೆಯಿಂದ ಬ್ರೇನ್ ಟ್ಯೂಮರ್ ನಿವಾರಣೆ ಸಾಧ್ಯ : ಡಾ.ಭರತಕುಮಾರ್

Update: 2026-06-08 20:03 IST

ಬೀದರ್ : ಬ್ರೇನ್ ಟ್ಯೂಮರ್ ರೋಗದ ಆರಂಭಿಕ ಪತ್ತೆ ಹಾಗೂ ಅದಕ್ಕೆ ತುರ್ತು ಚಿಕಿತ್ಸೆ ನೀಡುವುದರಿಂದ ಮೆದುಳಿನ ಗಡ್ಡೆ ನಿವಾರಣೆ ಮಾಡುವ ಮೂಲಕ ರೋಗಿಯ ಜೀವ ಉಳಿಸಬಹುದಾಗಿದೆ ಎಂದು ಯಶೋದಾ ಆಸ್ಪತ್ರೆಯ ಕ್ಯಾನ್ಸರ್ ರೋಗ ತಜ್ಞ ಡಾ.ಭರತಕುಮಾರ್ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇಡೀ ವಿಶ್ವಾದ್ಯಂತ ಆಚರಿಸಲಾದ ವಿಶ್ವ ಮೆದುಳು ಗಡ್ಡೆ ದಿನಾಚರಣೆ ಪ್ರಯುಕ್ತ ಮೆದುಳಿನ ಗಡ್ಡೆಯ ಲಕ್ಷಣಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಮೆದುಳಿನ ಗಡ್ಡೆಗಳು ಯಾವುದೇ ವಯಸ್ಸಿನವರಲ್ಲಿ ಕಾಣಿಸಬಹುದಾಗಿದ್ದು, ಆ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದರಿಂದ ಚಿಕಿತ್ಸೆಯ ಯಶಸ್ಸು ಹಾಗೂ ಜೀವನದ ಗುಣಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸಬಹುದು ಎಂದು ತಿಳಿಸಿದರು.

ನಿರಂತರ ತಲೆನೋವು, ಆಕಸ್ಮಿಕ ಆಘಾತಗಳು, ಕಾರಣವಿಲ್ಲದ ದೌರ್ಬಲ್ಯ, ದೃಷ್ಟಿ ಸಮಸ್ಯೆಗಳು, ಸಮತೋಲನ ಕಳೆದುಕೊಳ್ಳುವುದು, ನೆನಪಿನ ಶಕ್ತಿ ಕುಂಠಿತಗೊಳ್ಳುವುದು ಹಾಗೂ ವ್ಯಕ್ತಿತ್ವದಲ್ಲಿ ಬದಲಾವಣೆಗಳು ಮೆದುಳಿನ ಗಡ್ಡೆಯ ಪ್ರಮುಖ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ಅವರು ಸಲಹೆ ನೀಡಿದರು.

ಕ್ಯಾನ್ಸರ್ ಕ್ಷೇತ್ರದಲ್ಲಿ ಆಗಿರುವ ತಾಂತ್ರಿಕ ಪ್ರಗತಿಯಿಂದ ಮೆದುಳಿನ ಗಡ್ಡೆಗಳ ಚಿಕಿತ್ಸೆಯಲ್ಲಿ ಮಹತ್ತರ ಬದಲಾವಣೆ ಕಂಡು ಬಂದಿದೆ. ಪ್ರಸ್ತುತ ಶಸ್ತ್ರ ಚಿಕಿತ್ಸೆ, ನಿಖರ ಕಿರಣ ಚಿಕಿತ್ಸೆ (ರೇಡಿಯೇಶನ್ ಥೆರಪಿ), ಕೀಮೋಥೆರಪಿ, ಟಾರ್ಗೆಟೆಡ್ ಥೆರಪಿಗಳು ಹಾಗೂ ಇಮ್ಯುನೋ ಥೆರಪಿ ಸೇರಿದಂತೆ ರೋಗಿಯ ಅಗತ್ಯಕ್ಕೆ ಅನುಗುಣವಾದ ಚಿಕಿತ್ಸಾ ವಿಧಾನಗಳನ್ನು ಬಳಸಲಾಗುತ್ತಿದೆ ಎಂದು ಹೇಳಿದ ಅವರು, ಇತ್ತೀಚಿನ ತಂತ್ರಜ್ಞಾನವಾದ ಎಂಆರ್-ಲೈನಾಕ್ ಎನ್ನುವ ಉನ್ನತ ಮಟ್ಟದ ಎಂಆರ್‌ಐ ಚಿತ್ರಣವನ್ನು ಕಿರಣ ಚಿಕಿತ್ಸೆಯೊಂದಿಗೆ ಸಂಯೋಜಿಸುವ ಮೂಲಕ ಗಡ್ಡೆಯನ್ನು ನೈಜ ಸಮಯದಲ್ಲಿ ವೀಕ್ಷಿಸಿ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ. ಇದರಿಂದ ಆರೋಗ್ಯಕರ ಮೆದುಳಿನ ಭಾಗಗಳಿಗೆ ಹಾನಿಯಾಗದಂತೆ ಅತ್ಯಂತ ನಿಖರವಾಗಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಸುಮಾರು 30 ವರ್ಷಗಳಿಂದ ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವ ಯಶೋದಾ ಆಸ್ಪತ್ರೆಗಳ ಗುಂಪು, ಹೈದರಾಬಾದ್‌ನ ಸೋಮಾಜಿಗಡ್, ಸಿಕಂದರಾಬಾದ್, ಮಲಕ್‌ಪೇಟ್ ಹಾಗೂ ಹೈಟೆಕ್ ಸಿಟಿಗಳಲ್ಲಿ ನಾಲ್ಕು ಆಸ್ಪತ್ರೆಗಳೊಂದಿಗೆ ಸುಮಾರು 4 ಸಾವಿರ ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ಆಧುನಿಕ ತಂತ್ರಜ್ಞಾನ ಮತ್ತು ರೋಗಿ-ಕೇಂದ್ರೀಕೃತ ಸೇವೆಗಳ ಮೂಲಕ ವಿಶ್ವ ಮಟ್ಟದ ಆರೋಗ್ಯ ಸೇವೆಗಳು ಒದಗಿಸುತ್ತಿದೆ. ಇಲ್ಲಿಯ ಸಾರ್ವಜನಿಕರು ಆಸ್ಪತ್ರೆಯ ಸೌಲತ್ತು, ವಿಶೇಷವಾಗಿ ಬ್ರೇನ್ ಟ್ಯೂಮರ್ ಬಗೆಗಿನ ಚಿಕಿತ್ಸೆ ಪಡೆಯಲು ಮುಂದೆ ಬರುವಂತೆ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ಲಲಿತ್ ಶರ್ಮಾ ಹಾಗೂ ಆರೋಗ್ಯ ಮಿತ್ರ ರಾಜಕುಮಾರ್ ಇಟಕಾರಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News