×
Ad

ಬೀದರ್‌ | ಸಮಾಜ ಸೇವೆಗೆ ಪಟ್ಟದೇವರ ಬದುಕು ಮುಡಿಪು : ಶಾಸಕ ಶರಣಗೌಡ ಕಂದಕೂರ್

Update: 2026-06-08 20:09 IST

ಭಾಲ್ಕಿ : ಗಡಿಭಾಗದಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದೇವರು ಸಮಾಜ ಸೇವೆಗೆ ಬದುಕು ಮುಡಿಪಾಗಿಟ್ಟಿದ್ದಾರೆ. ಬಡ ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜತೆಗೆ ಅನಾಥ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಮಕ್ಕಳ ಸೇವೆಯಲ್ಲಿ ನಿಜವಾದ ದೇವರನ್ನು ಕಾಣುತ್ತಿದ್ದಾರೆ ಎಂದು ಯಾದಗಿರಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ್ ಅಭಿಪ್ರಾಯಪಟ್ಟರು.

ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ್ ಗುರುಕುಲದ ಅನುಭವ ಮಂಟಪದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ ವತಿಯಿಂದ ಸೋಮವಾರ ಆಯೋಜಿಸಿದ್ದ ಚನ್ನಬಸವೇಶ್ವರ ಗುರುಕುಲ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಠದ ಆಸ್ತಿ, ಅಂತಸ್ತು, ಅಧಿಕಾರಕ್ಕಾಗಿ ಜಗಳವಾಡುವ ಮಠಾಧೀಶರು ನಮ್ಮ ಮಧ್ಯೆ ಸಾಕಷ್ಟಿದ್ದಾರೆ. ಆದರೆ, ಅನಾಥ ಮಕ್ಕಳ ಆಶ್ರಯ ಮತ್ತು ಸೇವೆಗೈಯಲು ಡಾ.ಬಸವಲಿಂಗ ಪಟ್ಟದೇವರು ನ್ಯಾಯಾಲಯದ ಕಟಕಟೆ ಹತ್ತಿದ್ದು ಮಾದರಿ ಎನಸಿದೆ. ಇಂತಹ ಸ್ವಾಮೀಜಿ ಸಮಾಜದಲ್ಲಿ ಸಿಗುವುದು ಅಪರೂಪ. ಹೆತ್ತವರಿಗೆ ಬೇಡವಾದ ಮಕ್ಕಳನ್ನು ಕರೆತಂದು ಶಿಕ್ಷಣ, ಸಂಸ್ಕಾರ ಕಲ್ಪಿಸಿ ಇದುವರೆಗೂ ಮಕ್ಕಳಿಲ್ಲದ 107 ಕುಟುಂಬಗಳಿಗೆ ಮಕ್ಕಳನ್ನು ಹಸ್ತಾಂತರಿಸಿ ಅವರ ಬಾಳು ಬೆಳಗಿಸಿ ನಿಜವಾದ ಸಮಾಜ ಸೇವೆಗೈಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಂದೆ ತಾಯಿಂದರು ಮಕ್ಕಳ ಕೈಗೆ ಹೆಚ್ಚಾಗಿ ಮೊಬೈಲ್ ನೀಡುವುದನ್ನು ನಿಷೇಧಿಸಿ, ಪುಸ್ತಕ ಓದುವ ಸಂಸ್ಕೃತಿ ಬೆಳೆಸಬೇಕು. ಮಕ್ಕಳನ್ನು ಬೇರೆಯವರ ಜತೆಗೆ ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಬಾರದು. ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿ ಮಕ್ಕಳಿಗೆ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ನಾಡೋಜ ಡಾ.ಬಸವಲಿಂಗ ಪಟ್ಟದೇವರು ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು ಎನ್ನುವ ಧ್ಯೇಯೋದ್ದೇಶದೊಂದಿಗೆ ತೆರೆದ ವಿದ್ಯಾ ದೇಗುಲ ಇಂದು ಈ ಭಾಗದ ಮಕ್ಕಳ ಆಶಾಕಿರಣವಾಗಿ ಬೆಳೆದು ನಿಂತಿದೆ. ಈ ಸಂಸ್ಥೆಯ ಯಶಸ್ಸಿನ ಹಿಂದೆ ಆಡಳಿತ, ಶಿಕ್ಷಕರು, ಸಿಬ್ಬಂದಿ ವರ್ಗದವರ ಪರಿಶ್ರಮ ಅಪಾರವಾಗಿದೆ ಎಂದರು.

ಈ ವೇಳೆ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಅಗ್ರಶ್ರೇಣಿಯಲ್ಲಿ ಪಾಸಾದ 137 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉದ್ಯಮಿ ಸಂತೋಷ್ ತಾಳಂಪಳ್ಳಿ ಬಸವ ಗುರುವಿನ ಪೂಜೆ ನೆರವೇರಿಸಿದರು. ಪ್ರಾಚಾರ್ಯ ಬಸವರಾಜ್ ಮೊಳಕೀರೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ನ ಆದೀಶ್ ವಾಲಿ, ಹಾವಶೆಟ್ಟಿ ಪಾಟೀಲ್, ಸಂತೋಷ್ ತಾಳಂಪಳ್ಳಿ,, ಮೋಹನ್ ರೆಡ್ಡಿ, ಬಸವರಾಜ್ ಮೊಳಕೀರೆ, ಮಹೇಶ್ ಮಹಾರಾಜ್, ಪ್ರವೀಣ್ ಖಂಡಾಳೆ, ಭಾವೇಶ್ ಪಟೇಲ್, ಗುರು ಸಿಂಧೋಲ್, ಅರವಿಂದ್ ಪಾಟೀಲ್, ಸಹನಾ ಪಾಟೀಲ್ ಹಾಗೂ ಮಹೇಶ್ ಚಿಮಕೋಡೆ ಸೇರಿದಂತೆ ಇತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News