ಬೀದರ್: ಡಾ. ಕೆ.ಎಲ್. ಕೃಷ್ಣಮೂರ್ತಿ ಸ್ಮರಣಾರ್ಥ ಉಚಿತ ವೈದ್ಯಕೀಯ ಶಿಬಿರ
ಬೀದರ್ : ಡಾ. ಕೃಷ್ಣಮೂರ್ತಿ ಆಸ್ಪತ್ರೆ ವತಿಯಿಂದ ದಿವಂಗತ ಡಾ. ಕೆ.ಎಲ್. ಕೃಷ್ಣಮೂರ್ತಿ ಅವರ ಸ್ಮರಣಾರ್ಥವಾಗಿ ರವಿವಾರ ನಗರದ ಜೆಪಿ ನಗರದಲ್ಲಿರುವ ಬ್ರಹ್ಮಕುಮಾರೀಸ್ ಸೆಂಟರ್ ಪಾವನ್ ಧಾಮ್ನಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಯಿತು.
ಪಾವನ್ ಧಾಮ್ ಕೇಂದ್ರದ ಸಂಚಾಲಕಿ ಬಿ.ಕೆ. ಪ್ರತಿಮಾ ಬಹೆನಜಿ ಅವರು ಶಿಬಿರದ ಉದ್ಘಾಟನೆ ನೆರವೇರಿಸಿದರು.
ಶಿಬಿರದಲ್ಲಿ ನಾಡಿ ಆಮ್ಲಜನಕದ ಶುದ್ಧತ್ವ, ರಕ್ತದೊತ್ತಡ, ರಕ್ತದ ಗ್ಲೂಕೋಸ್, ರಕ್ತದ ಗುಂಪು, ಮೂಳೆ ಖನಿಜ ಸಾಂದ್ರತೆ, ಮಧುಮೇಹ ನ್ಯೂರೋಪಥಿ ಪರೀಕ್ಷೆ, ತೂಕ ಹಾಗೂ ಬಿಎಂಐ ಸೇರಿದಂತೆ ವಿವಿಧ ಸಾಮಾನ್ಯ ಆರೋಗ್ಯ ತಪಾಸಣೆಗಳನ್ನು ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಉಚಿತವಾಗಿ ನಡೆಸಲಾಯಿತು.
ಶಿಬಿರಕ್ಕೆ ಆಗಮಿಸಿದ ರೋಗಿಗಳಿಗೆ ವೈದ್ಯರು ಅಗತ್ಯ ಆರೋಗ್ಯ ಸಲಹೆಗಳನ್ನು ನೀಡಿ, ಮಧುಮೇಹ, ರಕ್ತದೊತ್ತಡ ಸೇರಿದಂತೆ ಇತರ ದೀರ್ಘಕಾಲಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸಿದರು. ಸಾರ್ವಜನಿಕ ಆರೋಗ್ಯ ಕಾಪಾಡುವ ಉದ್ದೇಶದಿಂದ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಸಹ ಇಂತಹ ಸೇವಾ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಡಾ. ಕೆ.ಎಲ್. ಕೃಷ್ಣಮೂರ್ತಿ ಆಸ್ಪತ್ರೆಯ ಡಾ. ರಘು ಕೃಷ್ಣಮೂರ್ತಿ ಅವರು ತಿಳಿಸಿದರು.
ಈ ಉಚಿತ ವೈದ್ಯಕೀಯ ಶಿಬಿರದಲ್ಲಿ ಜಿಲ್ಲೆಯ ಸುಮಾರು 200 ಜನರು ಸದುಪಯೋಗ ಪಡೆದುಕೊಂಡರು. ಕಾರ್ಯಕ್ರಮದ ನಿರೂಪಣೆಯನ್ನು ಬಿ.ಕೆ ಗುರುದೇವಿ ಬಹೆನಜಿ ಮಾಡಿದರು. ಬಿ.ಕೆ ಮಂಗಲಾ ಬಹೆನಜಿ ಅವರು ಸ್ವಾಗತ ಕೋರಿದರು.