Bidar | ಚಿತ್ರಕಲೆ ಭಾವನೆ, ಚಿಂತನೆ ಹಾಗೂ ಸೃಜನಶೀಲತೆಯ ಅಭಿವ್ಯಕ್ತಿ: ಡಾ. ಬಾಲಾಜಿ ಸೋಪುರೆ

ಪ್ರದೀಪಕುಮಾರ್ ಕಾಂಬ್ಳೆ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

Update: 2026-08-08 18:31 IST

ಬೀದರ್: ಚಿತ್ರಕಲೆ ಮನುಷ್ಯನ ಭಾವನೆಗಳು, ಚಿಂತನೆಗಳು ಹಾಗೂ ಸೃಜನಶೀಲತೆಯನ್ನು ಅಭಿವ್ಯಕ್ತಿಸುವ ಪ್ರಮುಖ ಕಲಾಮಾಧ್ಯಮವಾಗಿದೆ ಎಂದು ಶಿಕ್ಷಕ ಡಾ. ಬಾಲಾಜಿ ಸೋಪುರೆ ಹೇಳಿದರು.

ನಗರದ ಡಾ. ಎಸ್.ಎಂ. ಪಂಡಿತ್ ಫೈನ್ ಆರ್ಟ್ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಕಲಾವಿದ ಪ್ರದೀಪಕುಮಾರ್ ಕಾಂಬ್ಳೆ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂತಹ ಕಲಾ ಪ್ರದರ್ಶನಗಳು ಯುವ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಉತ್ತಮ ವೇದಿಕೆ ಒದಗಿಸುತ್ತವೆ. ಕಲಾವಿದ ಪ್ರದೀಪಕುಮಾರ್ ಕಾಂಬ್ಳೆ ಅವರು ವಿಭಿನ್ನ ಕಲ್ಪನೆ, ಬಣ್ಣ ಸಂಯೋಜನೆ ಹಾಗೂ ಸೃಜನಶೀಲತೆಯಿಂದ ವಿವಿಧ ಚಿತ್ರಕೃತಿಗಳನ್ನು ರಚಿಸಿದ್ದು, ಅವುಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನ ಮಾಡಿದ್ದಾರೆ ಎಂದರು.

ಪ್ರದರ್ಶನದಲ್ಲಿ ವಿಶೇಷವಾಗಿ ಬುದ್ಧನ ವಿವಿಧ ರೂಪಗಳು ಹಾಗೂ ಪ್ರಕೃತಿ ಹಿನ್ನೆಲೆಯ ಚಿತ್ರಕೃತಿಗಳು ಕಲಾಸಕ್ತರ ಗಮನ ಸೆಳೆದವು. ಚಿತ್ರಕಲಾ ಪ್ರದರ್ಶನದಲ್ಲಿ ಕಲಾವಿದರು, ಕಲಾ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಕಲಾಸಕ್ತರು ಭಾಗವಹಿಸಿ ಕಲಾಕೃತಿಗಳನ್ನು ವೀಕ್ಷಿಸಿ ಕಲಾವಿದರ ಕಲಾ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಿಲಿಂದ್ ಶಿಂಧೆ, ಕವಿತಾ ಬಿ. ಪಂಚಾಕ್ಷರೆ, ಸುರೇಖಾ ಮರೂರಕರ್ ಹಾಗೂ ಚಂದ್ರಕಾಂತ್ ದರ್ಗಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News