ಹುಮನಾಬಾದ್ | ಕಾರಂಜಾ ಸಂತ್ರಸ್ತರಿಗೆ ಪರಿಹಾರ ನೀಡಲು ಆಗ್ರಹಿಸಿ ಮನವಿ

Update: 2026-08-08 19:43 IST

ಹುಮನಾಬಾದ್: ಕಾರಂಜಾ ಜಲಾಶಯದ ಮುಳುಗಡೆ ಸಂತ್ರಸ್ತರಿಗೆ ಬಾಕಿ ಇರುವ ಪರಿಹಾರವನ್ನು ಶೀಘ್ರ ವಿತರಿಸುವಂತೆ ಆಗ್ರಹಿಸಿ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಹಾಗೂ ಬೀದರ್ ಸಮಗ್ರ ಅಭಿವೃದ್ಧಿ ಜಂಟಿ ಕ್ರಿಯಾ ಸಮಿತಿ ವತಿಯಿಂದ ಶಾಸಕ ಡಾ. ಸಿದ್ದು ಪಾಟೀಲ್ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ, ಕಾರಂಜಾ ಸಂತ್ರಸ್ತರ ಹೋರಾಟ ಯಾವುದೇ ರಾಜಕೀಯ ಪಕ್ಷದ ವಿರುದ್ಧದ್ದಲ್ಲ. ಕಳೆದ ನಾಲ್ಕು ದಶಕಗಳಿಂದ ನ್ಯಾಯಕ್ಕಾಗಿ ನಡೆಯುತ್ತಿರುವ ಮಾನವೀಯ ಹೋರಾಟವಾಗಿದೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜನಪರ ನಿರ್ಧಾರ ಕೈಗೊಳ್ಳಲು ಸೂಕ್ತ ಅವಕಾಶವಿದ್ದು, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಸಂತ್ರಸ್ತರ ಪರವಾಗಿ ಒಂದಾಗಿ ನಿಲ್ಲಬೇಕು ಎಂದು ಒತ್ತಾಯಿಸಲಾಗಿದೆ.

ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಕಾರಂಜಾ ಮುಳುಗಡೆ ಸಂತ್ರಸ್ತರ ಸಮಸ್ಯೆಗಳ ಕುರಿತು ವಿಶೇಷ ಚರ್ಚೆ ನಡೆಸಬೇಕು. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಸಚಿವರು, ಅಧಿಕಾರಿಗಳು ಹಾಗೂ ಸಂತ್ರಸ್ತರ ಪ್ರತಿನಿಧಿಗಳೊಂದಿಗೆ ತುರ್ತು ಸಭೆ ಕರೆಯಬೇಕು ಎಂದು ಮನವಿ ಮಾಡಲಾಗಿದೆ.

ನಾಲ್ಕು ದಶಕಗಳಿಂದ ಬಾಕಿ ಉಳಿದಿರುವ ಪರಿಹಾರವನ್ನು ಮಾನವೀಯ ದೃಷ್ಟಿಕೋನ ಹಾಗೂ ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ಮರುಪರಿಶೀಲಿಸಿ, ಸಂತ್ರಸ್ತರಿಗೆ ನ್ಯಾಯಸಮ್ಮತ ಪರಿಹಾರ ಘೋಷಿಸಬೇಕು. ಸಂತ್ರಸ್ತರ ಕುರಿತು ಸಮಗ್ರ ವರದಿ ಸಿದ್ಧಪಡಿಸಿ, ಕಾಲಬದ್ಧ ಕಾರ್ಯಯೋಜನೆ ರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.

1981ರಿಂದ 1986ರ ಅವಧಿಯಲ್ಲಿ ವಿತರಿಸಲಾದ ಪರಿಹಾರ ಮೊತ್ತದ ಮೇಲಿನ ಬಡ್ಡಿಯಲ್ಲಿ ಶೇ.12ರಷ್ಟು ಮೊತ್ತವನ್ನು ಕೆಲ ಸಂತ್ರಸ್ತರಿಗೆ ಮಾತ್ರ ನೀಡಲಾಗಿದೆ. ಬಾಕಿ ಇರುವ ಸಂತ್ರಸ್ತರಿಗೂ ನಿಗದಿತ ಕಾಲಮಿತಿಯೊಳಗೆ ಬಡ್ಡಿ ಮೊತ್ತ ವಿತರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸಚಿವ ಈಶ್ವರ ಖಂಡ್ರೆ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಕಾರಂಜಾ ಸಂತ್ರಸ್ತರ ಐತಿಹಾಸಿಕ ಹೋರಾಟಕ್ಕೆ ನೈತಿಕ ಮತ್ತು ರಾಜಕೀಯ ಬೆಂಬಲ ನೀಡಬೇಕು. ಸಾವಿರಾರು ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡಲು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಸಮಿತಿ ಮನವಿ ಮಾಡಿದೆ.

ಈ ಸಂದರ್ಭದಲ್ಲಿ ಚಂದ್ರಶೇಖರ್ ಪಾಟೀಲ್ ಹುಚಕನಳ್ಳಿ, ಲಕ್ಷ್ಮೀಬಾಯಿ ಸಂಗೋಳಗಿ, ರಾಜಕುಮಾರ್ ಕಮಲಪೂರೆ, ರಾಜಕುಮಾರ್ ಬುಸ್ಸಾ ರಂಜೋಳಖೇಣಿ, ರಾಜಕುಮಾರ್ ಕೋಸಮ್, ವೀರೇಂದ್ರ ಭತಮರ್ಗೆ, ವಿದ್ಯಾವತಿ ಔರಾದ್ (ಎಸ್), ಮಹೇಶ್ ಕಮಲಪೂರ್, ಮಹೇಶ್ ನೆಲವಾಡ್, ಯೂಸುಫ್ ಮಿಯ್ಯಾ ರೇಕುಳಗಿ, ಶಂಕರೆಪ್ಪ ಬಂಬುಳಗಿ, ಚಂದ್ರಶೇಖರ್ ಮುತ್ತಣ್ಣಾ, ಎಂ.ಡಿ.ಅಹ್ಮದ್ ಮಿಯ್ಯಾ ಬಗದಲ್, ಶಿವಕುಮಾರ್ ಸ್ವಾಮಿ ಬಾವಗಿ ಹಾಗೂ ಮಾದಪ್ಪಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News