ಡಾ.ಬಸವಲಿಂಗ ಪಟ್ಟದ್ದೇವರು ತನ್ನ ಜೀವನದ ಉಸಿರು ಬಸವ ತತ್ವಕ್ಕೆ ಸಮರ್ಪಿತವಾಗಿಸಿಕೊಂಡಿದ್ದಾರೆ : ಶಿವಕುಮಾರ್ ಘಾಟೆ
ಔರಾದ್ : ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ತನ್ನ ಜೀವನದ ಉಸಿರು ಹಾಗೂ ರಕ್ತ ಬಸವ ತತ್ವಕ್ಕೆ ಸಮರ್ಪಿತವಾಗಿಸಿಕೊಂಡಿದ್ದಾರೆ ಎಂದು ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ ಅವರು ಹೇಳಿದರು.
ಇಂದು ಔರಾದ್ ಪಟ್ಟಣ ರಮಾಬಾಯಿ ಅಂಬೇಡ್ಕರ್ ವೃದ್ಧಾಶ್ರಮದಲ್ಲಿ ಕರ್ನಾಟಕ ದಲಿತ ಸಂಸರ್ಷ ಸಮಿತಿ (ಪ್ರೋ.ಬಿ.ಕೃಷ್ಣಪ್ಪ ಬಣ) ಸಂಘಟನೆ ಆಯೋಜಿಸಿದ್ದ ಅಕ್ಷರ ಸಂತ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ 75ನೇ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ.ಬಸವಲಿಂಗ ಪಟ್ಟದ್ದೇವರ ಉಸಿರಿನಲ್ಲಿ ಬಸವ ತತ್ವ ಪ್ರಸಾರ, ಶಿಕ್ಷಣ, ಅನಾಥ ಮಕ್ಕಳ ಆಶ್ರಯ ನೀಡುವುದಾಗಿದೆ. ಅವರು ಗಡಿ ಭಾಗದಲ್ಲಿ ಸಲ್ಲಿಸುತ್ತಿರುವ ಸಮಾಜ ಸೇವೆ ಮಾದರಿಯಾಗಿದೆ. ಡಾ.ಬಸವಲಿಂಗ ಪಟ್ಟದ್ದೇವರು ಬಸವಣ್ಣನವರ ಆದರ್ಶದಲ್ಲಿ, ಡಾ.ಚನ್ನಬಸವ ಪಟ್ಟದ್ದೇವರು ಹಾಕಿದ ಮಾರ್ಗದಲ್ಲಿ ಸಾಗುತ್ತಿದ್ದಾರೆ. ಧರ್ಮ ಪ್ರಚಾರದ ಜತೆಗೆ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಜಿಲ್ಲಾದ್ಯಂತ ಶಿಕ್ಷಣ ಸಂಸ್ಥೆ ಆರಂಭಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸಂಸ್ಕಾರ ನೀಡುತ್ತಿದ್ದಾರೆ ಎಂದರು.
ದಸಂಸ ಜಿಲ್ಲಾ ಸಂಚಾಲಕ ಧನರಾಜ್ ಮುಸ್ತಾಪೂರ್ ಅವರು ಮಾತನಾಡಿ, ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ವಿವಿಧ ಕಾರಣಗಳಿಂದ ತಂದೆ ತಾಯಿ ತಮಗೆ ಬೇಡವೆಂದು ತಿಪ್ಪೆಯಲ್ಲಿ ಬಿಸಾಡಿದ ಸಾಕಷ್ಟು ಮಕ್ಕಳನ್ನು ರಕ್ಷಿಸಿ, ಮಾತೃ ಪಿತೃ ವಾತ್ಸಲ್ಯ ನೀಡಿ ಬೆಳೆಸುತ್ತಿದ್ದಾರೆ. ಅವರ ಕಾರ್ಯ ಮಾದರಿಯಾಗಿದೆ ಎಂದು ನುಡಿದರು.
ಡಾ. ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ನಿಮಿತ್ಯ ದಸಂಸ ವತಿಯಿಂದ ಮುಸ್ತಾಪೂರ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಸಂತಪೂರ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಸಂಜುಕುಮಾರ್ ಲಾಧಾ, ಘಾಳೆಪ್ಪ ಶೆಂಬೆಳ್ಳಿ, ಮಲ್ಲಿಕಾರ್ಜುನ್ ಜೊನ್ನೇಕೆರಿ, ಶಿವಕುಮಾರ್ ಸಾದುರೆ, ಅಂಬಾದಾಸ್ ಪಾಟೀಲ್ ಹಾಗೂ ನರಸಿಂಗ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.