ವೈಯಕ್ತಿಕ ವಿಷಯ ಇಟ್ಟುಕೊಂಡು ಮಾಜಿ ಸಂಸದ ಭಗವಂತ್ ಖುಬಾ ಅವರು ನನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ : ಶಾಸಕ ಪ್ರಭು ಚೌವ್ಹಾಣ್ ಆರೋಪ
ಬೀದರ್ : ನನ್ನ ಮಗನ ಜೊತೆ ನಿಶ್ಚಿತಾರ್ಥವಾದ ಹುಡುಗಿ ಇನ್ನೊಬ್ಬ ಹುಡುಗನ ಜೊತೆ ಚಾಟ್, ವಿಡಿಯೋ ಕಾಲ್ ಮಾಡುತ್ತಿದ್ದಳು. ಇದರಿಂದ ನಿಶ್ಚಿತಾರ್ಥ ಮುರಿದು ಬಿದ್ದಿದೆ. ಆ ಹುಡುಗಿಯ ಅಪ್ಪ, ಅಮ್ಮ ಹಾಗೂ ಹಿರಿಯರೆಲ್ಲ ಸೇರಿಯೇ ನಿಶ್ಚಿತಾರ್ಥವನ್ನು ಮುರಿಯುವ ನಿರ್ಧಾರ ಮಾಡಲಾಗಿದೆ. ಆದರೆ ಇದೇ ವಿಷಯವನ್ನಿಟ್ಟುಕೊಂಡು ಮಾಜಿ ಸಂಸದ ಭಗವಂವ್ ಖುಬಾ ಅವರು ನನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಔರಾದ್ ನ ಶಾಸಕ ಪ್ರಭು ಚೌವ್ಹಾಣ್ ಅವರು ಆರೋಪಿಸಿದರು.
ಇಂದು ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ವಿರುದ್ಧ ಒಂದು ತಂಡ ಇದೆ. ಆ ತಂಡದ ನಾಯಕ ಮಾಜಿ ಸಂಸದ ಭಗವಂತ್ ಖುಬಾ ಅವರು. ಈ ತಂಡ ನನನ್ನು ರಾಜಕೀಯವಾಗಿ ಮುಗಿಸಬೇಕು ಎಂದು ನಿರ್ಧಾರ ಮಾಡಿದೆ. ಆದ್ದರಿಂದ ನನ್ನ ವೈಯಕ್ತಿಕ ವಿಷಯದಲ್ಲಿಯೂ ಕೂಡ ಭಾಗವಹಿಸಿ ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದೆ ಎಂದು ತಿಳಿಸಿದರು.
ನನ್ನ ಮಗ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿರುವುದಾಗಿ ಯುವತಿಯು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ. ಇದರ ಹಿಂದೆ ನನ್ನ ವಿರೋಧಿಯಾದ ಮಾಜಿ ಸಂಸದ ಭಗವಂತ್ ಖುಬಾ ಅವರ ಕೈವಾಡವಿದೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನ ಮಾಡಲಾಗುತ್ತಿದೆ. ಅವರ ಟಾರ್ಗೆಟ್ ನನ್ನ ಮಗ ಪ್ರತೀಕ್ ಅಲ್ಲ. ಬದಲಾಗಿ ಅವರ ಗುರಿ ನಾನಾಗಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿವಾಜಿರಾವ್ ಪಾಟೀಲ್, ಧೋಂಡಿಬಾ ನರೋಟೆ, ಅರಹಂತ್ ಸಾವಳೆ, ವಸಂತ್ ವಕೀಲ್, ಶಂಕರ್ ರಾಠೋಡ್, ಸುರೇಶ್ ಭೋಸ್ಲೆ, ಶಿವರಾಜ್ ಅಲ್ಮಾಜೆ ಹಾಗೂ ಶಂಕರ್ ಜಾಧವ್ ಸೇರಿದಂತೆ ಇತರರು ಇದ್ದರು.