ಹುಲಸೂರ್ | ಜಮೀನು ವಿವಾದದ ಹಿನ್ನಲೆ ಬೆದರಿಕೆ ಆರೋಪ : ರೈತ ಆತ್ಮಹತ್ಯೆ
ಹುಲಸೂರ್ : ಜಮೀನು ವಿವಾದದ ಹಿನ್ನೆಲೆಯಲ್ಲಿ ಎದುರಾಳಿ ವ್ಯಕ್ತಿಗಳಿಂದ ನಿರಂತರ ಜೀವ ಬೆದರಿಕೆ ಎದುರಿಸುತ್ತಿದ್ದ ರೈತರೊಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಮೇಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇಹಕರ್ ಗ್ರಾಮದ ನಿವಾಸಿ ಮಧುಕರ್ ಹಿಲಾಲಪೂರೆ ಆತ್ಮಹತ್ಯೆ ಮಾಡಿಕೊಂಡ ರೈತರಾಗಿದ್ದಾರೆ.
ಮೃತರ ಪತ್ನಿ ಸರಸ್ವತಿ ಹಿಲಾಲಪೂರೆ ನೀಡಿದ ದೂರಿನ ಪ್ರಕಾರ, ಗ್ರಾಮದ ಸರ್ವೆ ನಂ. 40ರಲ್ಲಿರುವ ಜಮೀನಿನ ವಿಚಾರವಾಗಿ ಕೆಲವರೊಂದಿಗೆ ದೀರ್ಘಕಾಲದಿಂದ ವಿವಾದ ನಡೆಯುತ್ತಿತ್ತು. ಜಮೀನು ಬಿಟ್ಟುಕೊಡದಿದ್ದರೆ ಪತಿ ಹಾಗೂ ಮಕ್ಕಳನ್ನು ಕೊಲ್ಲುವುದಾಗಿ ಆರೋಪಿಗಳು ನೇರವಾಗಿ ಹಾಗೂ ದೂರವಾಣಿ ಮೂಲಕ ಜೀವ ಬೆದರಿಕೆ ಹಾಕುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಬೆದರಿಕೆಗಳಿಂದ ಮನನೊಂದ ಮಧುಕರ್ ಅವರು ಶುಕ್ರವಾರ ರಾತ್ರಿ ತಮ್ಮ ಜಮೀನಿನ ಶೆಡ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಮೇಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.