ವಿದ್ಯಾರ್ಥಿಗಳಿಗೆ ನಮ್ಮ ದೇಶದ ಸೈನಿಕರ ಬಗ್ಗೆ ತಿಳಿಸುವುದು ನಮ್ಮೆಲ್ಲರ ಹೊಣೆ : ರಾಜಕುಮಾರ್ ಲದ್ದೆ
ಬೀದರ್: ವಿದ್ಯಾರ್ಥಿಗಳಿಗೆ ನಮ್ಮ ದೇಶದ ಸೈನಿಕರ ಬಗ್ಗೆ ತಿಳಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಮಾಜಿ ಸೈನಿಕ ಸಂಘದ ಜಿಲ್ಲಾಧ್ಯಕ್ಷ ರಾಜಕುಮಾರ್ ಲದ್ದೆ ಅವರು ಅಭಿಪ್ರಾಯಪಟ್ಟರು.
ಇಂದು ನಗರದ ಭೂಮರೆಡ್ಡಿ ಶಾಲಾ ಕಾಲೇಜಿನ ಆವರಣದಲ್ಲಿರುವ ಸೈನಿಕ್ ಶಾಲೆಯಲ್ಲಿ ಭಾರತೀಯ ಸೈನಿಕರು ಕಾರ್ಗಿಲ್ ಯುದ್ಧದಲ್ಲಿ ತೋರಿದ ಶೌರ್ಯದ ಸ್ಮರಣಾರ್ಥವಾಗಿ ಸೈನಿಕರಿಗೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುಮಾರು 45 ದಿನಗಳ ಕಾಲ ನಡೆದ ಕಾರ್ಗಿಲ್ ಯುದ್ಧದ ಸಮಯದಲ್ಲಿ ನಡೆದ ಘಟನೆಗಳ ಬಗ್ಗೆ ಇಂದು ಸೈನಿಕ್ ಶಾಲೆಯ ಮಕ್ಕಳಿಗೆ ತಿಳಿಸುವ ಕೆಲಸ ನಾವು ಮಾಡಿದ್ದೇವೆ. ಜಿಲ್ಲೆಯ ಮಾಜಿ ಸೈನಿಕರೆಲ್ಲರನ್ನು ಈ ಶಾಲೆಗೆ ಕರೆಸಿ ಭಾರತೀಯ ಸೈನಿಕರ ಶೌರ್ಯ ಹಾಗೂ ಸೇನೆಯ ಬಗ್ಗೆ ತಿಳಿಸುವ ಕೆಲಸವನ್ನು ನಾವು ಮಾಡಿದ್ದೇವೆ ಎಂದು ತಿಳಿಸಿದರು.
ಸೈನಿಕ ಶಾಲೆಯ ಪ್ರಾಂಶುಪಾಲೆ ಡಾ.ಶ್ರೀಲತಾ ಅವರು ಮಾತನಾಡಿ, ಇಂದು ಆರ್ಮಿ, ನೇವಿ, ಏರ್ ಫೋರ್ಸ್ ಸೇರಬೇಕೆಂದು ಬಯಸಿರುವ ನಮ್ಮ ಶಾಲೆಯ ಮಕ್ಕಳಿಗೆ ಹಿರಿಯ ಯೋಧರಿಂದ ಸಲಹೆ ಹಾಗೂ ಮಾರ್ಗದರ್ಶನ ದೊರೆತಂತಾಯಿತು ಎಂದರು.
ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ನಿವೃತ್ತ ಯೋಧರು ಮತ್ತು 12 ಜನ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾದ ಯೋಧರು ಭಾಗಿಯಾಗಿ, ಕಾರ್ಗಿಲ್ ಯುದ್ಧದಲ್ಲಿ ತಾವು ಕಣ್ಣಾರೆ ಕಂಡ ಅನುಭವಗಳನ್ನು ಸೈನಿಕ ಶಾಲೆಯ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಮಂಡಳಿಯ ಆಡಳಿತ ಮಂಡಳಿ ಸದಸ್ಯ ಡಾ.ರಜನೀಶ್ ವಾಲಿ ಹಾಗೂ ಸೈನಿಕ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.