Photo Credit : youtube 



ತೆಲುಗಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಮತ್ತು ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್ ಜಂಟಿಯಾಗಿ ‘ದೇವರಾಯ’ ಸಿನಿಮಾದ ನಿರ್ಮಾಣದ ಹೊಣೆ ಹೊತ್ತಿವೆ.

ಸೆಪ್ಟಂಬರ್ 2ರಂದು ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಹೊಸ ಸಿನಿಮಾದ ಘೋಷಣೆ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಟೀಸರ್ ಬಿಡುಗಡೆ ಮಾಡಿದ ಅವರು ಐತಿಹಾಸಿಕ ‘ದೇವರಾಯ’ ಸಿನಿಮಾದ ವಿವರ ಹಂಚಿಕೊಂಡಿದ್ದಾರೆ. ಈ ಸಿನಿಮಾವನ್ನು ತೆಲುಗಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಮತ್ತು ಪ್ರಿಯಾ ಸುದೀಪ್ ಅವರ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸುತ್ತಿವೆ. ಸಿನಿಮಾದಲ್ಲಿ ಸುದೀಪ್ ‘ಕೃಷ್ಣದೇವರಾಯ’ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಟೀಸರ್‌ನಲ್ಲಿ ತೋರಿಸಲಾಗಿದೆ.

ಸುದೀಪ್ ಅವರು ಹಾಕಿರುವ ಪೋಸ್ಟ್‌ನಲ್ಲಿ “ದೇವರಾಯ ಅವರ ಏಳಿಗೆಯನ್ನು ಆನಂದಿಸಿ. ಪ್ರೀತಿ ತುಂಬಿದ ದಿನದಂದು ನಾನು ಬಹಳ ವಿಶೇಷವಾದ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ. ಇತಿಹಾಸದಲ್ಲಿ ಬೇರೂರಿದ ಒಂದು ಪಾತ್ರ. ಕಾಲದ ಜೊತೆಗೆ ಪ್ರತಿಧ್ವನಿಸುವ ದಂತಕತೆಯಾದ ಒಬ್ಬ ರಾಜ. ಈ ಪ್ರಯಾಣದ ಜೊತೆಗೆ ಶ್ರೀ ಕೃಷ್ಣದೇವರಾಯರ ಪಾತ್ರದ ಭಾಗವಾಗಲು ಬಹಳ ಹೆಮ್ಮೆ ಎನಿಸುತ್ತಿದೆ” ಎಂದು ಅವರು ಬರೆದಿದ್ದಾರೆ.

ಸುದೀಪ್ ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ಚಕ್ರವರ್ತಿ ಶ್ರೀ ಕೃಷ್ಣದೇವರಾಯದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೃಷ್ಣದೇವರಾಯರು ವಿಜಯನಗರ ಸಾಮ್ರಾಜ್ಯದ ಅತ್ಯಂತ ಪ್ರಭಾವಶಾಲಿ ದೊರೆಗಳಲ್ಲಿ ಒಬ್ಬರಾಗಿದ್ದು, 1509ರಿಂದ 1529ರವರೆಗೆ ವಿಜಯನಗರದ ಸುವರ್ಣಯುಗದಲ್ಲಿ ಆಡಳಿತ ನಡೆಸಿದ ಅವರು ತಮ್ಮ ಶೌರ್ಯ, ಆಡಳಿತ ಸಾಮರ್ಥ್ಯ ಮಾತ್ರವಲ್ಲದೆ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ನೀಡಿದ ಪ್ರೋತ್ಸಾಹದಿಂದಲೂ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.

ದೊಡ್ಡ ಬ್ಯಾನರ್‌ನಡಿ ಸಿನಿಮಾ ಬರುತ್ತಿರುವ ಕಾರಣದಿಂದ ಇದು ಪ್ಯಾನ್ ಇಂಡಿಯಾ ಸಿನಿಮಾವಾಗುವ ನಿರೀಕ್ಷೆಯಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಈಗಾಗಲೇ ‘ಕಾರ್ತಿಕೇಯ 2’, ‘ಧಮಾಕ’, ಮತ್ತು ‘ಬ್ರೋ’ ಸೇರಿದಂತೆ ಅನೇಕ ದೊಡ್ಡ ಸಿನಿಮಾಗಳನ್ನು ನಿರ್ಮಿಸಿದೆ. ಪ್ರಬಾಸ್ ಅಭಿನಯದ ‘ದಿ ರಾಜಾ ಸಾಬ್’ ಸಿನಿಮಾದ ಜೊತೆಗೂ ಗುರುತಿಸಿಕೊಂಡಿದೆ.

Full Viewವಿಜಯನಗರ ಸಾಮ್ರಾಜ್ಯದ ವೈಭವ, ಯುದ್ಧಗಳು, ರಾಜಕೀಯ ತಂತ್ರಗಳು ಮತ್ತು ಕಾಲಘಟ್ಟದ ಸಂಸ್ಕೃತಿಯನ್ನು ಅದ್ದೂರಿಯಾಗಿ ತೆರೆಗೆ ತರುವ ಸಾಧ್ಯತೆಯಿದೆ. ಹೀಗಾಗಿ ಇದು ಸುದೀಪ್ ಅವರ ವೃತ್ತಿಜೀವನದ ಅತ್ಯಂತ ಮಹತ್ವಾಕಾಂಕ್ಷೆಯ ಸಿನಿಮಾಗಳಲ್ಲಿ ಒಂದಾಗುವ ಸಾಧ್ಯತೆಯೂ ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor