ಪತ್ತೆ ಮಾಡುವ ತನಿಖೆಯಲ್ಲಿ ಕಾಣೆಯಾದವರು..!
ಚಿತ್ರ: ಚಾರ್ಜ್ ಶೀಟ್
ನಿರ್ದೇಶನ:
ವೆಂಕಟ್ ಭಾರದ್ವಾಜ್
ತಾರಾಗಣ: ಸುಂದರ್ ರಾಜ್, ಹರ್ಷ್ ಅರ್ಜುನ್, ಸತ್ಯಶ್ರೀ ಮೊದಲಾದವರು.
ಇದು 2003ರಲ್ಲಿ ಬೆಂಗಳೂರಿನಲ್ಲಿ ನಡೆದ ನೈಜ ಘಟನೆಯನ್ನು ಆಧಾರಿಸಿರುವ ಚಿತ್ರ. ಅವರ ಹೆಸರು ರಾಮಣ್ಣ. ಪತ್ನಿ ನಿಧನಗೊಂಡು ದಶಕವಾಗಿದೆ. ಮುದ್ದಿನ ಮಗಳು ಸೌಮ್ಯಳನ್ನು ಗಗನಸಖಿ ಮಾಡಬೇಕು ಎನ್ನುವುದು ಅವರ ಬಯಕೆ. ಅದರಂತೆ ತನಗೆ ಮಲೇಶ್ಯದಲ್ಲಿ ಕೆಲಸ ದೊರಕಿದ್ದಾಗಿ ಹೇಳಿ ತಂದೆಗೆ ಮಗಳು ಗುಡ್ ಬೈ ಹೇಳುತ್ತಾಳೆ. ಮಗಳು ಅಂತರ್ರಾಷ್ಟ್ರೀಯ ವಿಮಾನದಲ್ಲಿ ಕೆಲಸ ಮಾಡುವುದು ಇಷ್ಟವಿರದ ರಾಮಣ್ಣ ಒಲ್ಲದ ಮನದಿಂದಲೇ ಕಳಿಸಿಕೊಡುತ್ತಾರೆ.
ಆರಂಭದಲ್ಲಿ ಮಲೇಶ್ಯದಿಂದ ಒಂದಷ್ಟು ಪತ್ರಗಳು ಬರುತ್ತವೆ. ಆದರೆ ಆನಂತರ ಸಂಪರ್ಕವೇ ಇಲ್ಲದಂತಾಗುತ್ತದೆ. ಕಾದು ಕಾದು ಬೇಸತ್ತ ರಾಮಣ್ಣ ಪೊಲೀಸ್ ಸ್ಟೇಷನ್ ಮೆಟ್ಟಿಲೇರುತ್ತಾರೆ. ಐದು ವರ್ಷಗಳ ಬಳಿಕ ಪ್ರಕರಣ ಕೈಗೆತ್ತಿಕೊಳ್ಳುವ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್ ಹೇಗೆಲ್ಲ ತನಿಖೆ ನಡೆಸುತ್ತಾರೆ? ಪ್ರಕರಣವನ್ನು ಹೇಗೆ ಭೇದಿಸುತ್ತಾರೆ ಎನ್ನುವುದೇ ಚಾರ್ಜ್ಶೀಟ್ನ ಕಥೆ.
ಚಿತ್ರದಲ್ಲಿ ರಾಮಣ್ಣನಾಗಿ ಸುಂದರ್ ರಾಜ್ ನಟಿಸಿದ್ದಾರೆ. ನಾಪತ್ತೆಯಾಗುವ ಮಗಳ ಪಾತ್ರದಲ್ಲಿ ನವನಟಿ ಸತ್ಯಶ್ರೀ ಇದ್ದಾರೆ. ತನಿಖಾಧಿಕಾರಿ ಉಮೇಶ್ ಪಾತ್ರವನ್ನು ಹರ್ಷ್ ಅರ್ಜುನ್ ಮಾಡಿದ್ದಾರೆ. ಪ್ರಮುಖ ಪಾತಕಿ ನರಸ ರೆಡ್ಡಿಯಾಗಿ ಖುದ್ದು ನಿರ್ದೇಶಕ ವೆಂಕಟ್ ಭಾರದ್ವಾಜ್ ಅಭಿನಯಿಸಿದ್ದಾರೆ.
ಕಥೆಯ ಪ್ರಾಮುಖ್ಯವನ್ನು ತಂದೆ, ತನಿಖಾಧಿಕಾರಿ ಮತ್ತು ಪಾತಕಿಯ ಪಾತ್ರಗಳಲ್ಲಿ ಹಂಚಲಾಗಿದೆ. ಹಾಗಾಗಿ ಇಲ್ಲಿ ಮಗಳನ್ನು ಕಳಕೊಂಡ ತಂದೆಯ ಅಳಲು, ಕೈವಾಡ ನಡೆಸಿರುವಾತನ ಕ್ರೌರ್ಯ ಮತ್ತು ಪೊಲೀಸ್ ತನಿಖೆಯ ಬುದ್ಧಿವಂತಿಕೆ ಈ ಮೂರನ್ನೂ ಸಮಾನವಾಗಿ ತೋರಿಸಲು ಪ್ರಯತ್ನಿಸಲಾಗಿದೆ. ಆದುದರಿಂದ ಸಾಮಾನ್ಯ ಪ್ರೇಕ್ಷಕನಿಗೆ ಇವುಗಳಲ್ಲಿ ಯಾವುದು ಕೂಡ ಮನಸೆಳೆಯುವ ಅನುಭವ ನೀಡುವುದಿಲ್ಲ. ಚಿತ್ರ ಮುಗಿಯುವ ಹೊತ್ತಿಗೆ ತೀರ ಒಂದು ಪೊಲೀಸ್ ಕೇಸ್ ಫೈಲ್ ಓದಿಮುಗಿಸಿದಂತೆ ಅನಿಸಿಬಿಡುತ್ತದೆ.
ತಾಂತ್ರಿಕವಾಗಿ ಹೇಳುವುದಾದರೆ ಪ್ರಮೋದ್ ಭಾರತೀಯ ಅವರ ಛಾಯಾಗ್ರಹಣ ಮೆಚ್ಚಲೇಬೇಕು. ಇರುವ ಎರಡು ಮತ್ತೊಂದು ಲೊಕೇಶನ್ಗಳನ್ನು ಆದಷ್ಟು ಚೊಕ್ಕವಾಗಿ ತೋರಿಸುವಲ್ಲಿ ಅವರು ಗೆದ್ದಿದ್ದಾರೆ. ಸಮೀರ್ ಕುಲಕರ್ಣಿ ಸಂಗೀತದಲ್ಲಿ ಎರಡನೆಯದಾಗಿ ಬರುವ ಪ್ರೇಮಗೀತೆ ಆಲಿಸುವಂತೆ ಮಾಡುತ್ತದೆ. ಆದರೆ ಹಿನ್ನೆಲೆ ಸಂಗೀತದಲ್ಲಿ ಅಂಥ ವಿಶೇಷತೆಗಳಿಲ್ಲ.
ವೆಂಕಟ್ ಭಾರದ್ವಾಜ್ ತಮ್ಮದೇ ಶೈಲಿಯ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ಸೃಜನಶೀಲ ನಿರ್ದೇಶಕ. ಈ ಬಾರಿ ಅವರು ನರಸ ರೆಡ್ಡಿ ಎನ್ನುವ ಖಳನಾಗಿ ಮಾತ್ರ ಮೆಚ್ಚುಗೆ ಪಡೆಯುತ್ತಾರೆ. ಆದರೆ ಈ ಚಿತ್ತೂರಿನ ಪಾತ್ರಗಳು ನಿರಂತರವಾಗಿ ಸುಮಾರು ಹೊತ್ತು ತೆಲುಗನ್ನಷ್ಟೇ ಮಾತನಾಡುತ್ತವೆ. ಇಂಗ್ಲಿಷ್ ಸಬ್ ಟೈಟಲ್ ಕೂಡ ಇರುವುದಿಲ್ಲ. ಅದೇ ರೀತಿ ಸಿಬಿಐ ಅಧಿಕಾರಿ ಎಂದರೆ ಒಂದು ಟೇಬಲ್ ಮುಂದೆ ಲ್ಯಾಪ್ಟಾಪ್ ಇಟ್ಟುಕೊಂಡ ವ್ಯಕ್ತಿ, ಪೂರ್ತಿ ಪ್ರಕರಣದ ಸೈಬರ್ ತನಿಖೆಗೆ ಮತ್ತೊಂದು ಲ್ಯಾಪ್ಟಾಪ್ ಮತ್ತು ಟೇಬಲ್.. ಹೀಗೆ ತೋರಿಸಿರುವುದನ್ನು ಅರಗಿಸಿಕೊಳ್ಳುವುದು ಕಷ್ಟ.
ತನಿಖೆ ಆರಂಭಗೊಂಡ ಎಷ್ಟೋ ಸಮಯದ ಬಳಿಕ ತುಸು ಚುರುಕಾಗಿ ಮುಂದುವರಿಯುವ ಸೂಚನೆ ನೀಡುತ್ತಾರೆ. ಆದರೆ ಕಾಣೆಯಾದವಳು ಬರೆದ ಪತ್ರವನ್ನು ಪೊಲೀಸರು ಆಗತಾನೇ ಪರಿಶೋಧಿಸುತ್ತಾರೆ ಎನ್ನುವುದು ತನಿಖೆಯ ಆಮೆಗತಿಯನ್ನು ಸೂಚಿಸುವಂತಿದೆ. ಇಷ್ಟಕ್ಕೂ ವಿದೇಶದಲ್ಲಿ ಕಾಣೆಯಾದಳು ಎನ್ನಲಾದ ಯುವತಿ ಹೊರಟಿದ್ದ ವಿಮಾನದ ಬಗ್ಗೆಯೇ ಯಾರೂ ಸೊಲ್ಲೆತ್ತುವುದಿಲ್ಲ ಎನ್ನುವುದು ವಿಪರ್ಯಾಸ. ಇದೊಂದು ಕಾಲ್ಪನಿಕ ಚಿತ್ರವಾಗಿದ್ದರೆ ಅಷ್ಟೆಲ್ಲ ಲಾಜಿಕ್ ಪರೀಕ್ಷಿಸಬೇಕಿರಲಿಲ್ಲ. ಆದರೆ ಖುದ್ದು ನಿವೃತ್ತ ಪೊಲೀಸ್ ಅಧಿಕಾರಿ ಉಮೇಶ್ ಅವರೇ ಬರೆದ ಕಥೆಯಾದ ಕಾರಣ ‘ಹೇಗಾಯಿತು’ ಎನ್ನುವ ಪ್ರಶ್ನೆಗಳು ಸಹಜವಾಗಿ ಕಾಡುತ್ತವೆ.
ಹಾಸ್ಯಕ್ಕೋ, ಕುತೂಹಲ ಮೂಡಲೆಂದೋ ತುರುಕಲಾಗಿರುವ ಮಿಲ್ಕ್ ಮಾಫಿಯಾ, ಕಲ್ಲುರಾಮ ಪಾತ್ರಗಳು ಅನಗತ್ಯವೆನಿಸುತ್ತವೆ. ಇವುಗಳೆಲ್ಲ ಸೇರಿ ಚಿತ್ರವನ್ನು ಎರಡೂವರೆ ಗಂಟೆ ದೀರ್ಘಾವಧಿಗೊಳಿಸಿದೆ. ತನಿಖೆ ಮಾಡುತ್ತಾ ಕಳೆದು ಹೋಗುವ ಪಾತ್ರಗಳಿಗಿಂತ ನಿಮಗೆ ಕಾಣೆಯಾದವಳು ಏನಾದಳು ಎನ್ನುವುದೇ ಮುಖ್ಯವಾದರೆ ಈ ಚಿತ್ರ ನೋಡಬಹುದು.