×
Ad

ಇಎಲ್‌ಐ ಯೋಜನೆಯಲ್ಲಿ 4.1 ಕೋಟಿ ಯುವಕರಿಗೆ ಉದ್ಯೋಗ: ರಾಜೀಬ್ ಮುಖರ್ಜಿ

Update: 2025-07-07 20:03 IST

ಮಂಗಳೂರು: ಉತ್ಪಾದನಾ ವಲಯದ ಮೇಲೆ ವಿಶೇಷ ಗಮನ ಹರಿಸಿ, ಎಲ್ಲಾ ವಲಯಗಳಲ್ಲಿ ಉದ್ಯೋಗಾವಕಾಶ ಮತ್ತು ಸಾಮಾಜಿಕ ಭದ್ರತೆಯನ್ನು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟವು ಉದ್ಯೋಗ ಸಂಬಂಧಿತ ಪ್ರೋತ್ಸಾಹಕ (ಇಎಲ್‌ಐ) ಯೋಜನೆಗೆ ಅನುಮೋದನೆ ನೀಡಿದ್ದು, ಈ ಯೋಜನೆ ಯಡಿಯಲ್ಲಿ, ಹೆಚ್ಚುವರಿ ಉದ್ಯೋಗ ಸೃಷ್ಟಿಗಾಗಿ ಉದ್ಯೋಗದಾತರಿಗೆ ಎರಡು ವರ್ಷಗಳವರೆಗೆ ಪ್ರೋತ್ಸಾಹಕ ಗಳನ್ನು ನೀಡಲಾಗುವುದು ಮತ್ತು ಉತ್ಪಾದನಾ ವಲಯಕ್ಕೆ ಇನ್ನೂ ಎರಡು ವರ್ಷಗಳವರೆಗೆ ವಿಸ್ತೃತ ಪ್ರಯೋಜನಗಳನ್ನು ನೀಡಲಾಗುವುದು ಎಂದು ಮಂಗಳೂರಿನ ಕಾರ್ಮಿಕ ಭವಿಷ್ಯ ನಿಧಿ ಸಂಸ್ಥೆ, ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ರಾಜೀಬ್ ಮುಖರ್ಜಿ ತಿಳಿಸಿದ್ದಾರೆ.

ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ ಮಂಗಳೂರಿನ ಪ್ರಾದೇಶಿಕ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ ‘ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 25,000 ಹೊಸ ಉದ್ಯೋಗಿಗಳಿಗೆ ಮತ್ತು 3,000 ಸಂಸ್ಥೆಗಳಿಗೆ ಈ ಯೋಜನೆಯ ಅಡಿಯಲ್ಲಿ ಗುರಿ ಹೊಂದಲಾಗಿದೆ ಎಂದರು.

2024-25ರ ಕೇಂದ್ರ ಬಜೆಟ್‌ನಲ್ಲಿ ಪ್ರಧಾನ ಮಂತ್ರಿಯವರ 5ನೇ ಪ್ಯಾಕೇಜ್‌ನ ಭಾಗವಾಗಿ ಇಎಲ್‌ಐ ಯೋಜನೆಯಲ್ಲಿ ಒಟ್ಟು 2 ಲಕ್ಷ ಕೋಟಿ ರೂ. ವೆಚ್ಚದಲ್ಲಿ 4.1 ಕೋಟಿ ಯುವಕರಿಗೆ ಉದ್ಯೋಗ, ಕೌಶಲ್ಯ ಮತ್ತು ಇತರ ಅವಕಾಶಗಳನ್ನು ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.

99,446 ಕೋಟಿ ರೂ. ವೆಚ್ಚದೊಂದಿಗೆ ಇಎಲ್‌ಐ ಯೋಜನೆಯು ದೇಶದಲ್ಲಿ 2 ವರ್ಷಗಳ ಅವಧಿಯಲ್ಲಿ 3.5 ಕೋಟಿಗೂ ಹೆಚ್ಚು ಉದ್ಯೋಗಗಳ ಸೃಷ್ಟಿಗೆ ಪ್ರೋತ್ಸಾಹ ನೀಡುವ ಗುರಿಯನ್ನು ಹೊಂದಿದೆ. ಈ ಪೈಕಿ 1.92 ಕೋಟಿ ಫಲಾನುಭವಿಗಳು ಮೊದಲ ಬಾರಿಗೆ ಉದ್ಯೋಗಕ್ಕೆ ಪ್ರವೇಶಿಸುವವರಾಗಿರುತ್ತಾರೆ. ಈ ಯೋಜನೆಯ ಪ್ರಯೋಜನಗಳು 2025 ಆಗಸ್ಟ್ 1ರಿಂದ ಜುಲೈ 31ರ ನಡುವೆ ಸೃಷ್ಟಿಯಾದ ಉದ್ಯೋಗ ಗಳಿಗೆ ಅನ್ವಯಿಸುತ್ತವೆ ಎಂದು ಮಾಹಿತಿ ನೀಡಿದರು.

ಮೊದಲ ಬಾರಿಗೆ ಕೆಲಸ ಮಾಡುವವರಿಗೆ ಪ್ರೋತ್ಸಾಹ

ಇಪಿಎಫ್ ಭಾಗ 1ರಲ್ಲಿ ನೋಂದಾಯಿಸಲಾದ ಮೊದಲ ಬಾರಿಗೆ ಕೆಲಸ ಮಾಡುವ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು, ಈ ಭಾಗವು ಎರಡು ಕಂತುಗಳಲ್ಲಿ 15,000 ರೂ.ಗಳವರೆಗೆ ಒಂದು ತಿಂಗಳ ಇಪಿಎಫ್ ವೇತನವನ್ನು ನೀಡುತ್ತದೆ. 1 ಲಕ್ಷ ರೂ.ಗಳವರೆಗೆ ಸಂಬಳ ಪಡೆಯುವ ಉದ್ಯೋಗಿಗಳು ಇದಕ್ಕೆ ಅರ್ಹರಾಗಿರುತ್ತಾರೆ. ಮೊದಲ ಕಂತನ್ನು 6 ತಿಂಗಳ ಸೇವೆಯ ನಂತರ ಪಾವತಿಸಲಾಗುತ್ತದೆ ಮತ್ತು ಎರಡನೇ ಕಂತನ್ನು 12 ತಿಂಗಳ ಸೇವೆಯ ನಂತರ ಮತ್ತು ಉದ್ಯೋಗಿ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ವನ್ನು ಪೂರ್ಣಗೊಳಿಸಿದ ನಂತರ ಪಾವತಿಸಲಾಗುತ್ತದೆ. ಉಳಿತಾಯದ ಅಭ್ಯಾಸವನ್ನು ಉತ್ತೇಜಿಸಲು, ಪ್ರೋತ್ಸಾಹದ ಒಂದು ಭಾಗವನ್ನು ಠೇವಣಿ ಖಾತೆಯ ಉಳಿತಾಯವನ್ನು ನಿಗದಿತ ಅವಧಿಗೆ ಇಡಲಾಗು ತ್ತದೆ ಮತ್ತು ಮುಂದೆ ಉದ್ಯೋಗಿ ಅದನ್ನು ಹಿಂಪಡೆಯಬಹುದು. ಎಂದು ನುಡಿದರು.

ಸುಮಾರು 1.92 ಕೋಟಿ ರೂ.ಗಳನ್ನು ಮೊದಲ ಬಾರಿಗೆ ಕೆಲಸ ಮಾಡುವವರಿಗೆ ನೀಡಲಾಗುವುದು ಎಂದರು.

*ಉದ್ಯೋಗದಾತರಿಗೆ ಬೆಂಬಲ: ಈ ಭಾಗವು ಎಲ್ಲಾ ವಲಯಗಳಲ್ಲಿ ಹೆಚ್ಚುವರಿ ಉದ್ಯೋಗ ಸೃಷ್ಟಿಯನ್ನು ಒಳಗೊಳ್ಳುತ್ತದೆ, ವಿಶೇಷವಾಗಿ ಉತ್ಪಾದನಾ ವಲಯದ ಮೇಲೆ ಗಮನ ಹರಿಸುತ್ತದೆ. ಕನಿಷ್ಠ ಆರು ತಿಂಗಳ ಕಾಲ ನಿರಂತರ ಉದ್ಯೋಗ ಹೊಂದಿರುವ ಪ್ರತಿ ಹೆಚ್ಚುವರಿ ಉದ್ಯೋಗಿಗೆ ಸರಕಾರವು ಎರಡು ವರ್ಷಗಳವರೆಗೆ ತಿಂಗಳಿಗೆ ರೂ. 3,000 ವರೆಗೆ ಪ್ರೋತ್ಸಾಹ ಧನವನ್ನು ನೀಡುತ್ತದೆ. ಉತ್ಪಾದನಾ ವಲಯಕ್ಕೆ, ಪ್ರೋತ್ಸಾಹ ಧನವನ್ನು 3 ಮತ್ತು 4 ನೇ ವರ್ಷಗಳಿಗೂ ವಿಸ್ತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಇಪಿಎಫ್‌ಒದಲ್ಲಿ ನೋಂದಾಯಿಸಲಾದ 50 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳು ಕನಿಷ್ಠ ಆರು ತಿಂಗಳ ಕಾಲ ಗುತ್ತಿಗೆ ಆಧಾರದ ಮೇಲೆ ಕನಿಷ್ಠ ಇಬ್ಬರು ಹೆಚ್ಚುವರಿ ಉದ್ಯೋಗಿಗಳನ್ನು ಅಥವಾ 50 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಸಂಸ್ಥೆಗಳು ಐದು ಹೆಚ್ಚುವರಿ ಉದ್ಯೋಗಿ ಗಳನ್ನು ನೇಮಿಸಿಕೊಳ್ಳಲು ಅವಕಾಶ ಇದೆ ಎಂದು ಅವರು ನುಡಿದರು.

*14 ಕೋಟಿ .ರೂ. ಪಿಂಚಣಿ: ದಕ್ಷಿಣ ಕನ್ನಡದಲ್ಲಿ ಪ್ರಸ್ತುತ 1.30 ಲಕ್ಷ ಜನರಿಗೆ ಒಂದು ತಿಂಗಳಲ್ಲಿ 14 ಕೋಟಿ ರೂ.ಗಳವರೆಗೆ ಪಿಂಚಣಿ ವಿತರಿಸಲಾಗುತ್ತಿದೆ ಎಂದು ಅವರು ಹೇಳಿದರು. 3000 ಲೈವ್ ಸಂಸ್ಥೆಗಳು ಮತ್ತು 2.6 ಲಕ್ಷ ಸಕ್ರಿಯ ಸದಸ್ಯರು ಇದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಎಕೌಂಟ್ ಅಫೀಸರ್‌ಗಳಾದ ಪಾಂಡುರಂಗ ಪೈ, ನರೇಂದ್ರ ಬಾಬು ಗುಟ್ಟಿ, ಡಿಪಿಎ ಗೀತಾ, ಎಸ್‌ಎಸ್‌ಎ ತ್ರಿವೇಣಿ, ಅನಿತಾ ಆರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News