"ನನ್ನನ್ನು ರಕ್ಷಿಸಲಾಗದಿದ್ದರೆ ಒಂದು ಹನಿ ನೀರಾದರೂ ಕೊಟ್ಟು ಹೋಗಿ"
ಮಂಗಳೂರು: "ಅಂದು ಬೆಳಗ್ಗೆ ನಾವು ಮಸೀದಿಯಿಂದ ಹೊರಬರುತ್ತಿದ್ದ ವೇಳೆ ವಿಮಾನ ಅಪಘಾತಕ್ಕೀಡಾಗುವುದನ್ನು ಕಣ್ಣಾರೆ ಕಂಡೆವು. ದಿಗ್ಭ್ರಮೆಗೊಂಡ ನಾವು ತಕ್ಷಣ ಸ್ಥಳಕ್ಕೆ ಧಾವಿಸಿದೆವು. ಅಲ್ಲಿ ಎರಡು ಹೋಳಾಗಿ ಬಿದ್ದಿದ್ದ ವಿಮಾನವೊಂದರ ಮುಂಭಾಗ ಸಂಪೂರ್ಣವಾಗಿ ಹೊತ್ತಿ ಉರಿಯುತ್ತಿದ್ದರೆ ಒಳಗಡೆಯಿಂದ ಜನರ ಆರ್ತನಾದ, ಮಕ್ಕಳು ಜೋರಾದ ಅಳು ಕೇಳಿಸುತ್ತಿತ್ತು. ಆ ದೃಶ್ಯ ಭೀಕರವಾಗಿತ್ತು..."
15 ವರ್ಷಗಳ ಹಿಂದೆ ಅಂದರೆ 2010ರ ಮೇ 22ರಂದು ಕರಾವಳಿಯನ್ನೇ ಬೆಚ್ಚಿ ಬೀಳಿಸಿದ್ದ, ಏಕಕಾಲಕ್ಕೆ 158 ಮಂದಿ ಸುಟ್ಟು ಕರಕಲಾಗಿದ್ದ ಮಂಗಳೂರು ವಿಮಾನ ದುರಂತವನ್ನು ಪ್ರತ್ಯಕ್ಷವಾಗಿ ಕಂಡ ಸ್ಥಳೀಯ ನಿವಾಸಿ ಮುಹಮ್ಮದ್ ಸಮೀರ್ ಆ ಕರಾಳ ನೆನಪನ್ನು 'ವಾರ್ತಾಭಾರತಿ' ಜೊತೆ ಬಿಚ್ಚಿಟ್ಟಿದ್ದು ಹೀಗೆ...
''ನಾವು ಸ್ಥಳವನ್ನು ತಲುಪಿದಾಗ ಎರಡು ಹೋಳಾಗಿದ್ದ ವಿಮಾನದ ಒಂದು ಪಾರ್ಶ್ವ ಭಾರೀ ಬೆಂಕಿಯಿಂದ ಹೊತ್ತಿ ಉರಿಯುತ್ತಿತ್ತು. ಇನ್ನೊಂದು ಪಾರ್ಶ್ವದ ಒಳಗಿನಿಂದ ಜನರ ಕಿರುಚಾಟ ಜೋರಾಗಿ ಕೇಳಿಸುತ್ತಿತ್ತು. ಕೆಲವೇ ಹೊತ್ತಿನಲ್ಲಿ ಆ ಭಾಗಕ್ಕೂ ಬೆಂಕಿ ವ್ಯಾಪಿಸಿತು, ಎಲ್ಲವೂ ನಿಶ್ಯಬ್ಧವಾಯಿತು'' ಎಂದು ಸಮೀರ್ ಆ ಹೃದಯವಿದ್ರಾವಕ ಕ್ಷಣವನ್ನು ಬೇಸರಿದಿಂದಲೇ ವಿವರಿಸಿದರು.
ನನ್ನ ಬಾಯಿಗೆ ಸ್ವಲ್ಪ ನೀರು ಕೊಟ್ಟು ಹೋಗಿ
"ದುರಂತ ಸ್ಥಳದಿಂದ ಸುಮಾರು 200 ಮೀಟರ್ ದೂರದಲ್ಲಿ ನಮ್ಮ ಮನೆ ಇದೆ. ಅಂದು ಬೆಳಗ್ಗೆ ಹಟ್ಟಿಗೆ ಹೋಗಿದ್ದ ನಮ್ಮ ತಂದೆ, ಅಲ್ಲೇನೋ ಭಾರೀ ಸದ್ದು ಕೇಳಿಸಿತು. ರೈಲೇನಾದರೂ ದುರಂತಕ್ಕೀಡಾದಂತಿದೆ ಹೋಗಿ ನೋಡಿ ಎಂದು ಹೇಳಿದರು. ತಕ್ಷಣ ನಾವು ಶಬ್ದ ಕೇಳಿದ ಕಡೆ ಓಡಿಕೊಂಡು ಹೋದೆವು. ದೂರದಿಂದಲೇ ದೊಡ್ಡ ಪ್ರಮಾಣದಲ್ಲಿ ಹೊಗೆ ಆವರಿಸಿದ್ದು ಕಂಡೆವು" ಎನ್ನುತ್ತಾರೆ ಸ್ಥಳೀಯ ನಿವಾಸಿಯಾದ ಸತೀಶ್ ದೇವಾಡಿಗ.
"ತಕ್ಷಣ ದಾರಿ ಮಾಡಿಕೊಂಡು ದುರಂತ ಸ್ಥಳಕ್ಕೆ ಧಾವಿಸಿದೆವು. ಅಲ್ಲಿ ವಿಮಾನ ಪ್ರಪಾತಕ್ಕೆ ಬೀಳುವ ಸಂದರ್ಭ ಹೊರಕ್ಕೆ ಎಸೆಯಲ್ಪಟ್ಟಿದ್ದ ಮೂರು, ನಾಲ್ಕು ಮಂದಿಯನ್ನು ಕಂಡೆವು. ಒಂದಿಬ್ಬರನ್ನು ನಾವು ರಕ್ಷಿಸಿದೆವು. ದುರಂತಕ್ಕೀಡಾದ ವಿಮಾನದೆಡೆಯಿಂದ ಒಬ್ಬರು ನನ್ನನ್ನು ರಕ್ಷಿಸಿ ಎಂದು ಕೂಗುತ್ತಿದ್ದರು. ನಾವು ಅವರನ್ನು ರಕ್ಷಿಸಲು ಮುಂದಾದೆವು. ಆದರೆ ಅವರ ಅರ್ಧ ದೇಹ ವಿಮಾನದ ರೆಕ್ಕೆಯಡಿ ಸಿಲುಕಿಕೊಂಡಿತ್ತು. 3-4 ಮಂದಿ ಸೇರಿ ಅವರ ಕೈ ಹಿಡಿದು ಎಳೆಯುವ ಮೂಲಕ ರಕ್ಷಿಸಲು ಪ್ರಯತ್ನಿಸಿದೆವು. ಆದರೆ ಬೆಂಕಿಯ ಕೆನ್ನಾಲಗೆಯಿಂದ ಅದು ಸಾಧ್ಯವಾಗಲಿಲ್ಲ. ಈ ವೇಳೆ ಆ ವ್ಯಕ್ತಿ 'ನನ್ನನ್ನು ರಕ್ಷಿಸಲು ಸಾಧ್ಯವಾಗದಿದ್ದರೂ ಪರವಾಗಿಲ್ಲ, ನನಗೆ ಕುಡಿಯಲು ಸ್ವಲ್ಪ ನೀರು ಕೊಡಿ' ಎಂದು ಕೇಳಿದರು. ಬಳಿಕ ನಮ್ಮ ಕೈಯನ್ನು ಹಿಡಿದ ಸ್ಥಿತಿಯಲ್ಲೇ ಅವರು ಕೊನೆಯುಸಿರೆಳೆದರು. ಆ ಕ್ಷಣ ಇಂದಿಗೂ ಮರೆಯಲಾಗದ ನೋವಾಗಿ ಕಾಡುತ್ತಿದೆ" ಎಂದು ಸತೀಶ್ ಸ್ಮರಿಸಿದರು.
ರಕ್ಷಣೆಗಾಗಿ ಬಿದ್ದಿದ್ದ ವಿಮಾನದ ಅವಶೇಷಗಳ ನಾವು ಧಾವಿಸಲು ಮುಂದಾಗುವಷ್ಟರಲ್ಲಿ ಅದು ಸ್ಫೋಟಗೊಂಡಿತು. 158 ಮಂದಿ ನಮ್ಮ ಕಣ್ಣೆದುರೇ ಸುಟ್ಟು ಕರಕಲಾದರು ಎಂದು ಸತೀಶ್ ನೋವಿನಿಂದ ಹೇಳುತ್ತಾರೆ.
ವಿಮಾನದ ಒಳಗಿನಿಂದ ಕೇಳಿಸಿದ ಆ ಚೀರಾಟ, ಅಳುತ್ತಿದ್ದ ಮಗು ಮತ್ತು ಬಚಾವ್ ಮಾಡಲಾಗದಿದ್ದರೂ ನನಗೆ ಸ್ವಲ್ಪ ನೀರು ಕೊಡಿ ಎಂದು ಕೇಳಿದ್ದ ಆ ವ್ಯಕ್ತಿಯ ಕೊನೆಯ ಮಾತುಗಳನ್ನು ನಾವ್ಯಾರೂ ಮರೆಯಲಾಗದು. ಅದು ಕಾಡುವ ನೋವಾಗಿ ನಮ್ಮ ಜೀವನದಲ್ಲಿ ಉಳಿಯಲಿದೆ ಎನ್ನುತ್ತಾರೆ ಸತೀಶ್ ದೇವಾಡಿಗ.
ಮಗುವೊಂದು ಉಮ್ಮಾ... ಉಮ್ಮಾ.. ಎಂದು ಅಳುತ್ತಿತ್ತು
ಇನ್ನೊಂದು ಮನಕಲಕುವ ದೃಶ್ಯ ಈಗಲೂ ಕಣ್ಣೆದುರು ಬರುತ್ತದೆ. ವಿಮಾನದಿಂದ ಹೊರಗೆ ಎಸೆಯಲ್ಪಟ್ಟಿದ್ದ ಸಣ್ಣ ಮಗುವೊಂದು ಜೋರಾಗಿ ಅಳುತ್ತಿತ್ತು. ಉಮ್ಮಾ... ಉಮ್ಮಾ ಎಂದು ಕೂಗುತ್ತಿತ್ತು. ಆದರೆ ಮಗುವಿದ್ದಲ್ಲಿಗೆ ಹೋಗಲು ಸಾಧ್ಯವಾಗದ ಕಾರಣ ರಕ್ಷಿಸಲು ನಮಗೆ ಸಾಧ್ಯವಾಗಿಲ್ಲ. ಇದು ನೋವಾಗಿ ಕಾಡುತ್ತಿದೆ ಎನ್ನುತ್ತಾರೆ ಸತೀಶ್ ದೇವಾಡಿಗ.
ಕಿತ್ತುಬಂದಿದ್ದ ಗಾಯಾಳುವಿನ ಚರ್ಮ ನನ್ನ ಮೈಮೇಲೆ ಬಿದ್ದಿತ್ತು
"ನಾನು ಘಟನಾ ಸ್ಥಳವನ್ನು ಬೈಕಿನಲ್ಲಿ ತಲುಪಿದಾಗ ದುರಂತಕ್ಕೀಡಾದ ವಿಮಾನದಿಂದ ಹೊರಗೆ ಎಸೆಯಲ್ಪಟ್ಟಿದ್ದ ವ್ಯಕ್ತಿಯೋರ್ವ ಅಲ್ಲಿ ನಿಂತಿದ್ದ. ತೀವ್ರ ಸುಟ್ಟ ಗಾಯಗೊಂಡಿದ್ದ ಆತ ಕಪ್ಪಗೆ ಆಗಿದ್ದ. ತಕ್ಷಣ ಆತನನ್ನು ನನ್ನ ಬೈಕಿನಲ್ಲಿ ಕುಳ್ಳಿರಿಸಿ ಬೇರೊಬ್ಬರ ಸಹಾಯದಿಂದ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದೆವು. ಸಾಗಾಟದ ವೇಳೆ ಬೆಂಕಿಯಿಂದ ಕಿತ್ತು ಬಂದಿದ್ದ ಆತನ ಮೈಮೇಲಿನ ಚರ್ಮ ನನ್ನ ಮೈಮೇಲೆ ಬಿದ್ದಿತ್ತು ಎಂದು ಆ ಕ್ಷಣದ ಭಯಾನಕ ಕ್ಷಣವನ್ನು ಸ್ಥಳೀಯ ನಿವಾಸಿಯಾದ ಹುಸೈನ್ ಶರೀಫ್ ಎಂಬವರು ನೆನಪಿಸಿಕೊಂಡರು.
ಈಂದ್ ಮರದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಿದೆವು
ವಿಮಾನದಿಂದ ಹೊರಗೆ ಎಸೆಯಲ್ಪಟ್ಟಿದ್ದ ಕೊಲ್ಕತ್ತಾ ಮೂಲದ ವೈದ್ಯರೊಬ್ಬರು ಈಂದ್ ಮರದಲ್ಲಿ ಸಿಲುಕಿಕೊಂಡಿದ್ದರು. ಅವರನ್ನು ತುಂಬಾ ಕಷ್ಟಪಟ್ಟು ಕೆಳಗಿಳಿಸಿ ರಕ್ಷಿಸಿದೆವು. ಬಸವಳಿದಿದ್ದ ಅವರು ತುಂಬಾ ಕಷ್ಟದಲ್ಲಿ ನಡೆದುಕೊಂಡು ಅಲ್ಲಿಂದ ಈ ಕಡೆ ಬಂದ್ರು ಎಂದು ಘಟನಾ ಸ್ಥಳಕ್ಕೆ ತಕ್ಷಣ ಧಾವಿಸಿದವರಲ್ಲಿ ಒಬ್ಬರಾದ ಸ್ಥಳೀಯ ನಿವಾಸಿ ಮುಹಮ್ಮದ್ ಬಾವಾ ಅಂದಿನ ಆ ಕ್ಷಣವನ್ನು ವಾರ್ತಾಭಾರತಿ ಹಂಚಿಕೊಂಡರು.
ವಿಮಾನದೊಳಗಿನಿಂದ ಪಾರಾಗುವ ಯತ್ನದಲ್ಲಿ ವ್ಯಕ್ತಿಯೋರ್ವ ಫ್ಯಾನಿನ ಎಡೆಯಲ್ಲಿ ನುಸುಳಿ ಸಿಲುಕಿಕೊಂಡಿರುವುದನ್ನು ನಾವು ಗಮನಿಸಿದೆವು. ಅತನನ್ನು 13 ಮಂದಿ ಸೇರಿ ಹೊರಗೆ ಎಳೆಯಲು ಯತ್ನಿಸಿದೆವು. ಆದರೆ ಅದು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ಮುಹಮ್ಮದ್ ಬಾವಾ ಬೇಸರದಿಂದ ಹೇಳಿದರು.
ದುರಂತದ ವಿವರ:
2010ರ ಮೇ 22ರಂದು ಮುಂಜಾನೆ ಸುಮಾರು 6:20ಕ್ಕೆ ದುಬೈಯಿಂದ ಕೆಂಜಾರು ವಿಮಾನ ನಿಲ್ದಾಣಕ್ಕೆ ಬಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಲ್ಯಾಂಡ್ ಆಗುವ ಸಂದರ್ಭ ರನ್ವೇಯಿಂದ ಜಾರಿ ಪ್ರಪಾತಕ್ಕೆ ಉರುಳಿಬಿದ್ದು ದುರಂತಕ್ಕೀಡಾಗಿತ್ತು.
ಈ ದುರ್ಘಟನೆಯಲ್ಲಿ ವಿಮಾನದ ಪೈಲಟ್, 8 ಸಿಬ್ಬಂದಿ ಸಹಿತ 166 ಮಂದಿಯ ಪೈಕಿ 158 ಮಂದಿ ಸುಟ್ಟು ಕರಕಲಾಗಿದ್ದರು. ಮೃತರಲ್ಲಿ ಕೇರಳದ ಕಾಸರಗೋಡು, ಕರ್ನಾಟಕದ ದಕ್ಷಿಣ, ಉಡುಪಿ, ಉತ್ತರ ಕನ್ನಡ ಜಿಲ್ಲೆಯವರಿದ್ದರು.
ದುರಂತದಲ್ಲಿ ಮಡಿದವರ ಪೈಕಿ 22 ಮಂದಿಯ ಗುರುತು ಪತ್ತೆ ಸಾಧ್ಯವಾಗಿರಲಿಲ್ಲ. ಆ ಮೃತದೇಹಗಳನ್ನು ದ.ಕ. ಜಿಲ್ಲಾಡಳಿತವು ಕೂಳೂರಿನ ಫಲ್ಗುಣಿ ನದಿ ಕಿನಾರೆಯಲ್ಲಿ ದಫನ ಮಾಡಲಾಗಿತ್ತು. ಅದೇ ಜಾಗದಲ್ಲಿ ಸಂತ್ರಸ್ತರ ನೆನಪಿನ ಪಾರ್ಕ್ ನಿರ್ಮಿಸಲಾಗಿದೆ. ಪ್ರತಿವರ್ಷ ವಿಮಾನ ದುರಂತದ ಸ್ಮಾರಕದಲ್ಲಿ ಜಿಲ್ಲಾಡಳಿತದಿಂದ ಸಂಸ್ಮರಣೆ ನಡೆಯುತ್ತದೆ.