"ಶೂದ್ರ ವರ್ಗ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?": ಬಿಲ್ಲವರ ವಿರುದ್ಧ ʼಬಂಟರ ಬ್ರಿಗೇಡ್ʼ ಕರಪತ್ರ ವೈರಲ್
Photo: facebook
ಮಂಗಳೂರು: ದಕ್ಷಿಣ ಕನ್ನಡದಲ್ಲಿ ಈ ಬಾರಿಯ ಲೋಕಸಭಾ ಚುನಾವಣಾ ಕಣ ಹಿಂದುತ್ವದಿಂದ ಜಾತಿ ತಿರುವು ಪಡೆದುಕೊಂಡು, ಬಿಲ್ಲವ vs ಬಂಟ ಎಂಬ ಜಿದ್ದಾಜಿದ್ದಿಗೆ ವಾತಾವರಣ ನಿರ್ಮಿಸಿಕೊಟ್ಟಿದೆ. ಒಂದೆಡೆ, ಬಿಲ್ಲವ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದರೆ, ಬಂಟ ಸಮುದಾಯದ ಬ್ರಿಜೇಶ್ ಚೌಟರನ್ನು ಬಿಜೆಪಿ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಜನಸಂಖ್ಯೆ ಬಲದಿಂದ ಬಿಲ್ಲವರಿಗೆ ಅಧಿಕಾರದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗಲಿಲ್ಲ ಎಂಬ ಆರೋಪಗಳ ನಡುವೆ ಕಾಂಗ್ರೆಸ್ ಬಿಲ್ಲವ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಈ ನಡುವೆ, ಎರಡು ಜಾತಿಗಳ ನಡುವೆ ವೈಷಮ್ಯ ಹುಟ್ಟಿಸುವಂತಹ ಕರಪತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಬಿಲ್ಲವರನ್ನು ಮತ್ತು ಇತರ ಹಿಂದುಳಿದ ವರ್ಗಗಳನ್ನು ಗುರಿಯಾಗಿಸಿ ಪ್ರಕಟಿಸಲಾದ ಈ ಕರಪತ್ರವನ್ನು ʼಬಂಟರ ಬ್ರಿಗೇಡ್, ದಕ್ಷಿಣ ಕನ್ನಡʼ ಸಂಘಟನೆ ಹೆಸರಲ್ಲಿ ವೈರಲ್ ಮಾಡಲಾಗುತ್ತಿದ್ದು, ಬಂಟರು ತಮ್ಮ ಸಮುದಾಯದ ಬ್ರಿಜೇಶ್ ಚೌಟ ಅವರನ್ನು ಬೆಂಬಲಿಸಬೇಕೆಂದು ಪತ್ರದಲ್ಲಿ ಕರೆ ನೀಡಲಾಗಿದೆ. ಈ ಪತ್ರದ ಹಿಂದೆ ಕಾಂಗ್ರೆಸ್ ಕೈವಾಡ ಇದೆಯೆಂದು ಬಿಜೆಪಿ ಆರೋಪಿಸುತ್ತಿದೆ.
ಚುನಾವಣೆಗೂ ಮುನ್ನ ಕಾಂಗ್ರೆಸ್ ನಕಲಿ ಕರಪತ್ರ ಹಂಚುತ್ತಿದೆ ಎಂದು ಬಿಜೆಪಿ ಆರೋಪಿಸಿದ್ದು, ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಮಾನಹಾನಿ ಹಾಗೂ ಬಂಟ ಸಮುದಾಯದವರನ್ನು ಕೆಣಕುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಕರಪತ್ರ ಹರಿದಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾಂಗ್ರೆಸ್ ಪಕ್ಷದ ವಿರುದ್ಧ ದೂರು ದಾಖಲಿಸಿದೆ.
ಕರಪತ್ರವನ್ನು ಬಂಟ್ ಬ್ರಿಗೇಡ್ ದಕ್ಷಿಣ ಕನ್ನಡ ಮಂಗಳೂರು ಎಂಬ ಕಾಲ್ಪನಿಕ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ. ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಚಿತ್ರವನ್ನು ಒಳಗೊಂಡಿರುವ ಈ ಕರಪತ್ರವು ಸಾಮಾಜಿಕ ಮಾಧ್ಯಮ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದೆ.
ಕಾಂಗ್ರೆಸ್ ಚುನಾವಣಾ ಲಾಭಕ್ಕಾಗಿ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಠದ ಸಹ ಸಂಚಾಲಕ ದೇವಿಪ್ರಸಾದ್ ವಿ.ಸಮಾನಿ, ಮತದಾನದ ದಿನಕ್ಕೆ ಕೇವಲ ಎರಡು ದಿನಗಳ ಮೊದಲು ಕರಪತ್ರ ವೈರಲ್ ಆಗಿರುವ ಬಗ್ಗೆ ಗಮನ ಸೆಳೆದಿದ್ದಾರೆ.
ಬಿಜೆಪಿಯು ದಕ್ಷಿಣ ಜಿಲ್ಲಾ ಚುನಾವಣಾಧಿಕಾರಿಗೆ ಔಪಚಾರಿಕವಾಗಿ ದೂರು ದಾಖಲಿಸಿದ್ದು, ನಕಲಿ ಪತ್ರ ಪ್ರಸಾರಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿದೆ.
ಪತ್ರದಲ್ಲಿ ಏನಿದೆ?
“ಪ್ರೀತಿಯ ಸ್ವಜಾತಿ ಬಾಂಧವರೇ, ಚುನಾವಣೆಯ ಅಂತಿಮ ಘಟ್ಟದಲ್ಲಿ ನಾವಿದ್ದೇವೆ. ನಮ್ಮ ಸಮಾಜಕ್ಕೆ ಸೇರಿದ ಬ್ರಿಜೇಶ್ ಚೌಟರವರು ಭಾರತೀಯ ಜನತಾ ಪಕ್ಷದಿಂದ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಎದುರಾಳಿಯಾಗಿದ್ದಾರೆ. ಒಂದು ಕಾಲದಲ್ಲಿ ಬಂಟ ನಾಯಕರನ್ನು ಮೂಲೆಗೆ ಸರಿಸಿ ಬಿಲ್ಲವರು ಮೆರೆದಾಡಿದ್ದ ಕ್ಷೇತ್ರ ನಂತರದ ದಿನದಲ್ಲಿ ನಮ್ಮ ಬಂಟರ ತೆಕ್ಕೆಗೆ ಬಂದಿದೆ. ನಳಿನ್ ಕುಮಾರ್ ಕಟೀಲ್ ಸತತ ಮೂರು ಬಾರಿ ಗೆಲ್ಲುವ ಮೂಲಕ ನಾವು ನಮ್ಮ ಒಗ್ಗಟ್ಟನ್ನು ಸಾಬೀತುಪಡಿಸಿದ್ದೇವೆ. ಆದರೆ ಒಂದು ಕಾಲದಲ್ಲಿ ನಮ್ಮ ಒಕ್ಕಲಿನಲ್ಲಿದ್ದ ಬಿಲ್ಲವರು, ಜನಾರ್ದನ ಪೂಜಾರಿಯವರು ಸಂಸದರಾದ ನಂತರ ದೊಡ್ಡ ದೊಡ್ಡ ಉದ್ಯಮದಲ್ಲಿ ತೊಡಗಿಸಿಕೊಂಡು ಊರಿಗೆ, ಜಿಲ್ಲೆಗೆ, ಪರ ಊರಿನಲ್ಲಿ ಪ್ರಭಾವಿಯಾಗಿದ್ದ ನಮ್ಮ ಸಮಾಜದವರ ಪ್ರಭಾವವನ್ನು ತಗ್ಗಿಸಿ ಮೆರೆದಾಡತೊಡಗಿದ್ದರು. ಇಂತಹ ಶೂದ್ರ ವರ್ಗದ ಜನರು ನಮ್ಮನ್ನು ಆಳಲು ಹೊರಟರೆ ಅದನ್ನು ಸ್ವಾಭಿಮಾನಿಗಳಾದ ನಾವು ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ? ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಸೇಂದಿ ತೆಗೆದು, ಕೂಲಿ ನಾಲಿ ಮಾಡಿಕೊಂಡು ಬದುಕುತ್ತಿದ್ದವರು, ಇಂದು ನಮ್ಮ ಮೇಲೆ ಅಧಿಕಾರವನ್ನು ಚಲಾಯಿಸಲು ಹೊರಟರೆ ಅವರ ಕೈಕೆಳಗೆ ಬಾಳುವುದಕ್ಕೆ ನಮಗೆ ಸಾಧ್ಯವಿದೆಯೇ ಎನ್ನುವುದನ್ನು ಸ್ವಾಭಿಮಾನಿಗಳಾದ ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಜನಾರ್ದನ ಪೂಜಾರಿಯ ನಂತರ ಮತ್ತೊಮ್ಮೆ ಅವರ ಶಿಷ್ಯನಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವ ಮೂಲಕ ನಮ್ಮ ಬಂಟ ಸಮಾಜಕ್ಕೆ ಸವಾಲನ್ನು ಎಸೆದಿದೆ. ಈ ಸವಾಲನ್ನು ನಾವು ಸ್ವೀಕರಿಸುವ ಮೂಲಕ ನಮ್ಮ ಸಮಾಜಕ್ಕೆ ಸೇರಿದ ಬ್ರಿಜೇಶ್ ಚೌಟರನ್ನು ಲಕ್ಷ ಲಕ್ಷ ಬಹುಮತದಿಂದ ಗೆಲ್ಲಿಸುವುದಕ್ಕೆ ರಾತ್ರಿ ಹಗಲೆನ್ನದೆ ದುಡಿಯಬೇಕಾಗಿದೆ. ಒಂದು ವೇಳೆ ಶೂದ್ರ ವರ್ಗಕ್ಕೆ ಸೇರಿದವ ಗೆದ್ದು ಬಂದರೆ ಮುಂದಿನ ದಿನದಲ್ಲಿ ಇತರ ಶೂದ್ರ ವರ್ಗಕ್ಕೆ ಸೇರಿದವರು ಗೌಡರು, ಕುಲಾಲ್, ಕೊಟ್ಟಾರಿ, ಗಾಣಿಗ, ಭಂಡಾರಿ, ನಾಯ್ಕ, ಎಸ್ಸಿ-ಎಸ್ಟಿಗಳು ಒಗ್ಗಟ್ಟಾಗಿ ನಮ್ಮನ್ನು ಆಳಲು ಹೊರಟರೆ, ಬೇರೆ ಬೇರೆ ಚುನಾವಣೆಗಳಲ್ಲಿ ಸ್ಪರ್ಧಿಸಿ ನಮ್ಮವರನ್ನು ಮೂಲೆಗುಂಪು ಮಾಡಿದರೆ ಅದನ್ನು ನಮಗೆ ಸಹಿಸುವುದಕ್ಕೆ ಸಾಧ್ಯವಿದೆಯೇ? ಊರಿಗೆ ಪಟೇಲರಾಗಿ ವಿವಿಧ ಸ್ಥರಗಳಲ್ಲಿ ಜನಪ್ರತಿನಿಧಿಗಳಾಗಿ ಮೆರೆದಿದ್ದ ನಮ್ಮ ಸಮಾಜ ಇಂತಹ ಸಮಾಜದ ಶೂದ್ರರ ಮುಂದೆ ಕೈಕಟ್ಟಿಕೊಂಡು ನಿಲ್ಲಬೇಕೆ..?
ಒಂದು ಕಾಲದಲ್ಲಿ ಗರಡಿಗಳಿಗೆ, ದೇವಸ್ಥಾನಗಳಿಗೆ ಪ್ರವೇಶವೇ ಇಲ್ಲದ ಇಂತಹ ಶೂದ್ರ ಜಾತಿಯವರು ಜನಾರ್ದನ ಪೂಜಾರಿಗೆ ಅಧಿಕಾರ ಸಿಕ್ಕ ಮೇಲೆ ನಮ್ಮ ಗರಡಿಗಳ ಮೇಲೆ, ನಮ್ಮ ದೇವಸ್ಥಾನಗಳ ಮೇಲೆ ಯಾವ ರೀತಿಯ ಪಾರಮ್ಯ ಮೆರೆದು ದೇವಸ್ಥಾನಗಳಿಗೆ ಪ್ರವೇಶವನ್ನು ಗಿಟ್ಟಿಸಿಕೊಂಡಿದ್ದಾರೆ ಎನ್ನುವ ಸತ್ಯವನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವನ್ನು ಮಾಡಬೇಕಾಗಿದೆ. ಜನಾರ್ದನ ಪೂಜಾರಿ ಗೆದ್ದ ನಂತರದ ಪರಿಸ್ಥಿತಿ ಅವರ ಶಿಷ್ಯ ಗೆದ್ದ ನಂತರ ನಮಗೆ ಬಾರದಿರಲಿ ಎನ್ನುವುದಾದರೆ ನಮ್ಮ ಸಮಾಜದ ಸೈನಿಕ ಬ್ರಿಜೇಶ್ ಚೌಟ ಗೆಲ್ಲಲೇಬೇಕು.
ಸತ್ಯಜಿತ್ ಸುರತ್ಕಲ್, ಬಿರುವೆರ್ ಕುಡ್ಲದ ಉದಯ ಪೂಜಾರಿ ಬಲ್ಲಾಲ್ ಭಾಗ್ ಇಂತಹವರು ವಿವಿಧ ಸಂಘಟನೆಗಳನ್ನು ಕಟ್ಟಿಕೊಂಡು ನಮ್ಮವರಿಗೆ ಯಾವ ರೀತಿಯಲ್ಲಿ ಮಗ್ಗುಲ ಮುಳ್ಳಾಗಿದ್ದಾರೆ ಎನ್ನುವುದನ್ನು ನಾವು ಮರೆಯಲಾಗುತ್ತದೆಯೇ..?
ನಮ್ಮ ಸಮಾಜದ ಒಬ್ಬ ಯುವಕನನ್ನು ಗೆಲ್ಲಿಸುವುದಕ್ಕೆ ಬೇರೆ ಬೇರೆ ರೀತಿಯಲ್ಲಿ ನಮ್ಮ ಸಮಾಜದ ಹಿರಿಯರ ಸೂಚನೆಯಂತೆ ಕೆಲಸ ಮಾಡಲಾಗಿದೆ. ನಮ್ಮ ಅಭ್ಯರ್ಥಿಯಾದ ಚೌಟರಿಗೆ ದೊಡ್ಡ ಮೊತ್ತದ ಹಣದ ನೆರವನ್ನು ಕೂಡ ನೀಡಲಾಗಿದೆ. ಇದು ಸಾಲದು. ನಮ್ಮ ಕೃಷಿ ಕಾರ್ಯದಲ್ಲಿ, ನಮ್ಮ ಮನೆಯ ಕೂಲಿ ಕೆಲಸದಲ್ಲಿ, ನಮ್ಮ ಉದ್ಯಮಗಳಲ್ಲಿ, ನಮ್ಮಲ್ಲಿ ಒಕ್ಕಲು ಇರುವವರನ್ನು ನಮ್ಮ ಪ್ರಭಾವವನ್ನು ಬಳಸಿಕೊಂಡು ಚೌಟ ಅವರಿಗೆ ಮತದಾನ ಮಾಡಿಸುವ ದೊಡ್ಡ ಜವಾಬ್ದಾರಿಯನ್ನು ನಮ್ಮ ಸಮಾಜದವರು ನಿರ್ವಹಣೆ ಮಾಡಿ, ಶೂದ್ರನೊಬ್ಬ ನಮ್ಮನ್ನು ಆಳದಂತೆ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ. ನಿಮ್ಮ ವಾರ್ಡ್, ಗ್ರಾಮ ವ್ಯಾಪ್ತಿಯಲ್ಲಿ ಮತವನ್ನು ದುಡ್ಡು ನೀಡಿ ಖರೀದಿಸುವ ಅವಕಾಶ ಸಿಕ್ಕರೆ, ಮತದಾರರಿಗೆ ಆಮಿಷ ಒಡ್ಡಿಯಾದರೂ ಕಾಂಗ್ರೆಸ್ಸಿಗೆ ಬೀಳುವ ಮತವನ್ನು ಬಿಜೆಪಿಗೆ ಹಾಕಿಸುವ ಕೆಲಸ ಮಾಡುವ ಮೂಲಕ ನಮ್ಮ ಸಮಾಜಕ್ಕೆ ಶಕ್ತಿ ತುಂಬುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿ ತಮ್ಮಲ್ಲಿ ಕಳಕಳಿಯ ವಿನಂತಿಯನ್ನು ಮಾಡುತ್ತಿದ್ದೇವೆ”