ಧರ್ಮಸ್ಥಳ ಪ್ರಕರಣ: ಜೆಸಿಬಿ ಉಪಯೋಗಿಸಿ ಕಾರ್ಯಾಚರಣೆ
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಹಲವಾರು ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿ ಮೃತದೇಹಗಳನ್ನು ಹೂತಿರುವುದಾಗಿ ದೂರುದಾರ ತೋರಿಸಿಕೊಟ್ಟಿರುವ ನೇತ್ರಾವತಿ ಸ್ನಾನಘಟ್ಟದ ಸಮೀಪ ಎಸ್ಐಟಿ ನಡೆಸುತ್ತಿರುವ ಅಗೆಯುವಿಕೆಗೆ ಜೆಸಿಬಿ ಉಪಯೋಗಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಭಾರಿ ಮಳೆಯಿಂದ ಕಾರ್ಯಾಚರಣೆಗೆ ಅಡಚಣೆಯಾಗುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೃತದೇಹ ಹೊರತೆಗೆಯುವ ಪ್ರಕ್ರಿಯೆಯಲ್ಲಿ ಹಲವು ಅಡಚಣೆಗಳಾಗಿದ್ದು, ಇಲ್ಲಿ ಅಗೆಯುವಲ್ಲಿ ನೀರು ಬರುತ್ತಿದ್ದು ಇದರಿಂದಾಗಿ ಅಗೆಯಲು ಸಾಧ್ಯವಾಗುತ್ತಿಲ್ಲ. ಕೇವಲ ನಾಲ್ಕು ಫೀಟ್ ಮಾತ್ರ ಅಗೆಯಲಾಗಿದೆ, ಕಾರ್ಯಾಚರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಒಂದು ಸ್ಥಳದಲ್ಲಿ ಅಗೆಯುವ ಕಾರ್ಯ ನಡೆದಿದ್ದು, ಅದು ಪೂರ್ಣಗೊಂಡ ಬಳಿಕವಷ್ಟೇ ಮುಂದಿನ ಸ್ಥಳದಲ್ಲಿ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳದಲ್ಲಿ ಅಗೆಯುವ ಪ್ರಕ್ರಿಯೆಗೆ ಸಮಸ್ಯೆಯಿದೆ, ನದಿಯ ಸಮೀಪವಾದ ಕಾರಣ ಮರಳು ಜಾರುತ್ತಿದೆ ಹಾಗೂ ನೀರು ಬರುತ್ತಿದೆ ಇದರಿಂದಾಗಿ ಅಗೆಯುವ ಪ್ರಕ್ರಿಯೆಯನ್ನು ನಡೆಸಲು ಜೆಸಿಬಿ ಬಳಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಇಂದಿನ ಕಾರ್ಯಾಚರಣೆಯನ್ನು 6:15 ಗಂಟೆಗೆ ಎಸ್.ಐ.ಟಿ ಅಧಿಕಾರಿಗಳು ಅಂತ್ಯ ಮಾಡಿದ್ದಾರೆ. ನಾಳೆ ಮತ್ತೆ ಮೂರನೇ ದಿನದ ಕಾರ್ಯಾಚರಣೆ ಮುಂದುವರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮೊದಲ ದಿನದ ಕಾರ್ಯಾಚರಣೆಯಲ್ಲಿ ಯಾವುದೇ ಕುರುಹುಗಳು ಲಭ್ಯವಾಗಿರುವ ಬಗ್ಗೆ ಮಾಹಿತಿ ಲಭಿಸಿಲ್ಲ. ಗುರುತಿಸಲಾಗಿರುವ ಒಂದನೆ ಸ್ಥಳವನ್ನು ಅಗೆಯುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಮುಗಿಸಲಾಗಿದೆ ಎಂದು ತಿಳಿದುಬಂದಿದೆ.