ನವೆಂಬರ್ 7 ರಂದು ವಿದ್ಯುತ್ ಖಾಸಗೀಕರಣದ ವಿರುದ್ಧ ದೇಶಾದ್ಯಂತ ಪ್ರತಿಭಟನೆ
Photo: freepik
ಮಂಗಳೂರು: ಎಲ್ಲಾ ಕೈಗಾರಿಕೆಗಳ ತಾಯಿ ಮತ್ತು ಆಧುನಿಕ ನಾಗರಿಕ ಸಮಾಜದ ಕೇಂದ್ರ ನರಮಂಡಲದಂತೆ ಕೆಲಸ ನಿರ್ವಹಿಸುವ ಅತ್ಯಂತ ಪ್ರಮುಖ ಸೇವೆಯಾಗಿರುವ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರಕಾರದ ಕಾರ್ಪೊರೇಟ್ ಪರ ನೀತಿಗಳ ವಿರುದ್ಧ ನವೆಂಬರ್ 7ರಂದು ದೇಶಾದ್ಯಂತ ವಿದ್ಯುತ್ ಇಲಾಖೆ ಕಚೇರಿಗಳ ಎದುರು ಪ್ರತಿಭಟನೆ ಜರುಗಲಿದ್ದು,ಅಂದು ಬೆಳಿಗ್ಗೆ 10 ಗಂಟೆಗೆ ದ.ಕ. ಜಿಲ್ಲೆಯ ಎಲ್ಲಾ ಮೆಸ್ಕಾಂ ಕಚೇರಿಗಳ ಎದುರು ಪ್ರತಿಭಟನಾ ಪ್ರದರ್ಶನ ಜರುಗಲಿದೆ ಎಂದು ರೈತ ಕಾರ್ಮಿಕ ಹಾಗೂ ಜನಪರ ಸಂಘಟನೆಗಳ ಜಂಟಿ ವೇದಿಕೆ ಪತ್ರಿಕಾಹೇಳಿಕೆಯೊಂದರಲ್ಲಿ ತಿಳಿಸಿದೆ.
ಕೇಂದ್ರದ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೇರಿದ ಕೂಡಲೇ ಅತ್ಯಂತ ಲಾಭದಾಯಕವಾದ ವಿದ್ಯುತ್ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ವಿದ್ಯುತ್ ಕ್ಷೇತ್ರದಲ್ಲಿನ ಉತ್ಪಾದನೆ, ವಿತರಣೆ ಹಾಗೂ ಕಂದಾಯ ಸಂಗ್ರಹ ಇದ್ಯಾವುದನ್ನೂ ಸರಕಾರ ಮಾಡಬಾರದು,ಅವೆಲ್ಲವನ್ನೂ ಖಾಸಗೀಯವರಿಗೆ ವಹಿಸಿ, ಸರಕಾರ ತನ್ನ ಜವಾಬ್ದಾರಿಯಿಂದ ಮುಕ್ತವಾಗಬೇಕೆಂದು ಕೇಂದ್ರ ಸರಕಾರದ ಅಡಿಯಲ್ಲಿರುವ ನೀತಿ ಆಯೋಗ ಸ್ಪಷ್ಟಪಡಿಸಿದೆ. ಅದರಂತೆ ಹಂತಹಂತವಾಗಿ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣದ ಕಪಿಮುಷ್ಠಿಗೆ ಸಿಲುಕುವಂತೆ ವಿದ್ಯುತ್ ಮಸೂದೆಗೆ ತಿದ್ದುಪಡಿಯನ್ನು ಮಾಡಿದೆ ಎಂದು ಹೇಳಿರುವ ಜಂಟಿ ವೇದಿಕೆಯು, ಖಾಸಗೀಕರಣದ ಬಳಿಕ ವಿದ್ಯುತ್ ದರ ವಿಪರೀತವಾಗಿ ಹೆಚ್ಚಲಿದ್ದು,ಪ್ರತೀ ಮನೆಗೆ 8000 ರೂ.ಮೌಲ್ಯದ ಫ್ರೀ ಪೇಯ್ಡ್ ಸ್ಮಾರ್ಟ್ ಮೀಟರ್ ನ್ನು ಅಳವಡಿಸಿ ದಿನಕ್ಕೆ ವಿವಿಧ ಹಂತದ ದರಗಳನ್ನು ನಿಗದಿಪಡಿಸಿ ಜನಸಾಮಾನ್ಯರನ್ನು ದೋಚಲು ಕಾರ್ಪೊರೇಟ್ ಕಂಪೆನಿಗಳಿಗೆ ಕೇಂದ್ರ ಸರಕಾರವೇ ಗ್ರೀನ್ ಸಿಗ್ನಲ್ ನೀಡಿದೆ.ಮಾತ್ರವಲ್ಲದೆ ಪ್ರತ್ಯೇಕ ಪೋಲಿಸ್ ವ್ಯವಸ್ಥೆ ಮಾಡಿ ಜನತೆಯ ಮೇಲೆ ದಬ್ಬಾಳಿಕೆ ಮಾನಸಿಕ ಹಿಂಸೆಯನ್ನು ನೀಡುವ ಹುನ್ನಾರವಿದೆ.ಇಂತಹ ಕೇಂದ್ರ ಸರಕಾರದ ಜನದ್ರೋಹಿ ಕ್ರತ್ಯದಿಂದ ವಿದ್ಯುತ್ ಕ್ಷೇತ್ರವನ್ನು ರಕ್ಷಿಸಬೇಕಾಗಿದೆ.ನವೆಂಬರ್ 7 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಬಿಜೈಯಲ್ಲಿರುವ ಮೆಸ್ಕಾಂ ಪ್ರಧಾನ ಕಚೇರಿಯೆದುರು ನಡೆಯಲಿರುವ ಪ್ರತಿಭಟನೆಯಲ್ಲಿ ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಜಂಟಿ ವೇದಿಕೆಯ ಪ್ರಧಾನ ಸಂಚಾಲಕರಾದ ಸುನಿಲ್ ಕುಮಾರ್ ಬಜಾಲ್ ರವರು ಪತ್ರಿಕಾಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.