×
Ad

ರಾಣಿ ಅಬ್ಬಕ್ಕನ ಕಾಲದಿಂದಲೂ ಮಳಲಿ ಮಸೀದಿ ಇತ್ತು: ಅಬ್ದುಲ್ ನಾಸಿರ್ ಲಕ್ಕಿಸ್ಟಾರ್

Update: 2024-02-03 17:01 IST

ಮಂಗಳೂರು: ಮಂಗಳೂರು ತಾಲೂಕಿನ ತೆಂಕ ಉಳಿಪ್ಪಾಡಿ ಗ್ರಾಮದ ಮಳಲಿ ಪೇಟೆ ಜುಮಾ ಮಸೀದಿಯು ಇತ್ತು ಎನ್ನುವುದಕ್ಕೆ ದಾಖಲೆಗಳು ನಮ್ಮ ಬಳಿ ಇದೆ. ಈ ಮಸೀದಿಯ ಆಸ್ತಿ ವಕ್ಫ್ ಆಸ್ತಿಯ ವ್ಯಾಪ್ತಿಗೆ ಒಳ ಪಡುವುದರಿಂದ ಅದರ ಬಗ್ಗೆ ವಿವಾದಗಳಿದ್ದರೆ ವಕ್ಫ್ ಟ್ರಿಬ್ಯೂನಲ್ ನಲ್ಲಿ ವಿಚಾರಣೆ ನಡೆಯಲಿ ಎನ್ನುವುದು ನಮ್ಮ ವಾದವಾಗಿತ್ತು. ಈ ಬಗ್ಗೆ ಇದೀಗ ಹೈ ಕೋರ್ಟ್ ಅದನ್ನು ಜಿಲ್ಲಾ ನ್ಯಾಯಾಲಯದಲ್ಲಿಯೂ ವಿಚಾರಣೆ ಮಾಡಬಹುದು ಎಂದು ತೀರ್ಪು ನೀಡಿದ್ದಾರೆ. ಎಲ್ಲಿ ವಿಚಾರಣೆ ನಡೆದರು ನಮಗೆ ನ್ಯಾಯ ಸಿಗಬಹುದು ಎಂಬ ನಂಬಿಕೆ ನಮಗಿದೆ. ನಮ್ಮ ಬಳಿ ಇರುವ ದಾಖಲೆಗಳೊಂದಿಗೆ ವಿಚಾರಣೆ ಎದುರಿಸುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ರಾಣಿ ಅಬ್ಬಕ್ಕನ ಕಾಲದಲ್ಲೂ ಇಲ್ಲಿ ಮಸೀದಿ ಇತ್ತು ಎನ್ನುವುದನ್ನುಖ್ಯಾತ ವಿದ್ವಾಂಸ ಡಾ.ಅಮೃತ ಸೋಮೇಶ್ವರರ ತಮ್ಮ ಅಬ್ಬಕ್ಕ ಸಂಕಥನ ಕೃತಿಯಲ್ಲಿ ವಿದೇಶಿ ಪ್ರವಾಸಿ ಕಂಡ ಅಬ್ಬಕ್ಕ ಲೇಖನದಲ್ಲಿ ದಾಖಲಿಸಿದ್ದಾರೆ. ಈ ಮಸೀದಿ ಬ್ರಿಷರ ಕಾಲ ದಲ್ಲೂ ಇತ್ತು. ಕಂದಾಯ ಇಲಾಖೆಯ ಹಳೆಯ (ಅಡಂಗಲ್)ದಾಖಲೆಯಲ್ಲಿ ಯೂ ಮಸೀದಿ ಇತ್ತು ಎನ್ನುವುದಕ್ಕೆ ದಾಖಲೆಗಳು ನಮ್ಮ ಬಳಿ ಇದೆ. ಮಸೀದಿಯ ನಿರ್ವಹಣೆಗೆ ಪ್ರಾಚೀನ ಕಾಲದಲ್ಲಿ ದೀಪದ ಎಣ್ಣೆ, ಬಳಿಕ ತಸ್ತೀಕ್, ಬ್ರಿಟಿಷ್ ಕಾಲದಲ್ಲಿ ಚಲಾವಣೆಯ ನಾಣ್ಯಗಳ ರೂಪದಲ್ಲಿ ತಸ್ತೀಕ್ ನೀಡಲಾಗಿರುವ ದಾಖಲೆಗಳಿವೆ. ಮಸೀದಿಯ ಆಸ್ತಿಯನ್ನು ವಕ್ಫ್ ನಲ್ಲಿ ನೋಂದಣಿ ಮಾಡುವಾಗ ತಹಶಿಲ್ದಾರರ ಮೂಲಕ ಪರಿಶೀಲನೆಯಾಗಿ, 2004ರಲ್ಲಿ ಸರ್ವೆ ನಡೆದು ದಾಖಲಾಗಿದೆ. ಸುಪ್ರೀಂ ಕೋರ್ಟ್ ನ ತೀರ್ಪು ಪ್ರಕಾರ ಒಮ್ಮೆ ಅದು ವಕ್ಫ್ ಆಸ್ತಿ ಎಂದು ದಾಖಲಾದ ಬಳಿ ಅದು ವಕ್ಫ್ ಸುಪರ್ದಿಗೆ ಬರುತ್ತದೆ. ಆದುದರಿಂದ ಈ ಬಗ್ಗೆ ವಿವಾದಗಳಿದ್ದರೆ ವಕ್ಫ್ ನ್ಯಾಯ ಮಂಡಳಿ ವಿಚಾರಣೆ ಮಾಡುತ್ತದೆ. ಆದರೆ ಇತ್ತೀಚೆಗೆ ಕೆಲವರು ಅದರಲ್ಲಿ ದೇವಾಲಯದ ಕುರುಹುಗಳಿವೆ ಎಂದು ವಿವಾದ ಮಾಡಿ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇದರ ವಿರುದ್ಧ ಮಸೀದಿಯ ಆಡಳಿತ ಮಂಡಳಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಇದೀಗ ಹೈಕೋರ್ಟ್ ಜಿಲ್ಲಾ ನ್ಯಾಯಾಲಯದಲ್ಲಿಯೂ ವಿಚಾರಣೆ ಮಾಡಬಹುದು ಎಂದು ತೀರ್ಪು ನೀಡಿದೆ ಹೊರತಾಗಿ ಅದು ಮಸೀದಿಯ ಜಾಗ ಅಲ್ಲ ಎಂದು ತೀರ್ಪು ನೀಡಿಲ್ಲ ಈ ಬಗ್ಗೆ ಗೊಂದಲ ಬೇಡ ಎನ್ನುವುದನ್ನು ಸಾರ್ವಜನಿಕರಿಗೆ ತಿಳಿಸುವುದಾಗಿ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ಸ್ಪಷ್ಟ ಪಡಿಸಿದರು.

ಮಳಲಿ ಹಳೆಯ ಮಸೀದಿ ಯಾಗಿರುವ ಕಾರಣ ಮತ್ತು ಈಗಿನ ಜನಸಂಖ್ಯೆ ಹೆಚ್ಚಿರುವ ಕಾರಣ ಅದರ ನವೀಕರಣ ಮಾಡಲು ಆಡಳಿತ ಸಮಿತಿ ಹೊರಟಿತ್ತು ಈ ಬಗ್ಗೆ ಕೆಲವರು ಗೊಂದಲ ನಿರ್ಮಿಸಲು ಹೊರಟ ಘಟನೆ ನಡೆದಿದೆ.ಹೊರತು ಅಲ್ಲಿನ ಸಾಕಷ್ಟು ಸ್ಥಳೀಯರು ಮಸೀದಿಯ ಬಗ್ಗೆ ಗೌರವ ಭಾವನೆ ಹೊಂದಿದ್ದಾರೆ. ಈ ಮಸೀದಿಯ ಆಸ್ತಿ ವಕ್ಫ್ ಗೆ ಸಂಬಂಧ ಪಟ್ಟಿರುವ ಕಾರಣ ಮುಂದೆ ವಕ್ಫ್ ಮಂಡಳಿಯ ಮೂಲಕವೂ ಕಾನೂನು ಹೋರಾಟ ನಡೆಸಲಾಗುವುದು ನ್ಯಾಯ ದೊರಕುವ ವಿಶ್ವಾಸವಿದೆ ಎಂದು ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿ ಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಡಾ.ಎ.ಕೆ.ಜಮಾಲ್, ಸದಸ್ಯ ಸೈದುದ್ಧೀನ್ ಬಜ್ಪೆ, ಮಳಲಿ ಪೇಟೆ ಜುಮಾ ಮಸೀದಿಯ ಆಧ್ಯಕ್ಷ ಅಬ್ದುಲ್ ರಝಾಕ್, ಉಪಾಧ್ಯಕ್ಷ ಎಂ.ಎ.ಅಬೂಬಕ್ಕರ್, ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News