×
Ad

"ಅಂಬೇಡ್ಕರ್ ವಾಣಿಜ್ಯ ಸಂಕೀರ್ಣದಲ್ಲಿ ಪರಿಶಿಷ್ಟರಿಗೆ ಅಂಗಡಿ ಕೋಣೆ ಬಾಡಿಗೆಗೆ ಸಿಗುವುದಿಲ್ಲ"

Update: 2025-06-22 18:24 IST

ಮಂಗಳೂರು: ನಗರದ ಪಿವಿಎಸ್ ಪಕ್ಕದಲ್ಲಿರುವ ಪರಿಶಿಷ್ಟರಿಗೆ ಮೀಸಲಾದ ಡಾ.ಬಿ.ಆರ್.ಅಂಬೇಡ್ಕರ್ ವಾಣಿಜ್ಯ ಸಂಕೀರ್ಣದಲ್ಲಿ ಪರಿಶಿಷ್ಟರಿಗೆ ಅಂಗಡಿ ಕೋಣೆ ಬಾಡಿಗೆಗೆ ಕೇಳಿದರೆ ಸಿಗುವುದಿಲ್ಲ. ಆದರೆ ಅದೇ ಕಟ್ಟಡದಲ್ಲಿ ಟೂರಿಸ್ಟ್ ಬಸ್‌ಗಳ ಕಚೇರಿಗಳಿವೆ. ಪರಿಶಿಷ್ಟರಿಗೆ ಮೀಸಲಾದ ಕಟ್ಟಡವನ್ನು ಟೂರಿಸ್ಟ್ ಸಂಸ್ಥೆ ಯವರಿಗೆ ಯಾಕೆ ನೀಡಲಾಗಿದೆ ಎಂದು ಸುಧಾಕರ್ ಬೋಳೂರು ರವಿವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಜೂನ್ ತಿಂಗಳ ಎಸ್‌ಸಿ-ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ಪ್ರಶ್ನಿಸಿದರು.

ಕಟ್ಟಡವನ್ನು ಪಡೆದವರು ಬೇರೆಯವರಿಗೆ ನಡೆಸಲು ಕೊಟ್ಟಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸುರೇಶ್ ಅಡಿಗ ಸಭೆಗೆ ಮಾಹಿತಿ ನೀಡಿದರು. ಹಾಗಿದ್ದರೆ ಇದು ದುರುಪಯೋಗವಾಗವಲ್ಲವೇ ? ನಿಯಮ ಉಲ್ಲಂಘನೆ ಮಾಡಿದವರ ಪರವಾನಗಿ ರದ್ದು ಮಾಡುವಂತೆ ಮುಖಂಡರು ಆಗ್ರಹಿಸಿದರು.

ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಅಧಿಕಾರಿ ಸಭೆಗೆ ಭರವಸೆ ನೀಡಿದರು.

ಎಸ್‌ಸಿ-ಎಸ್‌ಟಿ ಜಾಗದ ಸಮೀಪ ತ್ಯಾಜ್ಯ ಘಟಕ ನಿರ್ಮಾಣಕ್ಕೆ ತಯಾರಿ: ಕಿನ್ನಿಗೋಳಿ ಪಟ್ಟಣ ಪಂಚಾ ಯತ್ ವ್ಯಾಪ್ತಿಯ ಎಳತ್ತೂರು ಗ್ರಾಮದ ಎಸ್‌ಸಿ-ಎಸ್‌ಟಿ ಕುಟುಂಬದವರು ವಾಸಿಸುವ ಜಾಗದ ಸಮೀಪ ದಲ್ಲೇ ಮುಲ್ಕಿ ಪಟ್ಟಣ ಪಂಚಾಯತ್‌ನಿಂದ ತ್ಯಾಜ್ಯ ಘಟಕ ನಿರ್ಮಿಸಲು ತಯಾರಿ ನಡೆಯುತ್ತಿದೆ. ಒಂದು ವೇಳೆ ಘಟಕ ನಿರ್ಮಾಣವಾದರೆ ಹೋರಾಟ ಅನಿವಾರ್ಯ ಎಂದು ಸ್ಥಳೀಯ ಮುಖಂಡರು ಎಚ್ಚರಿಕೆ ನೀಡಿದರು.

ಸ್ಥಳೀಯರಾದ ಗಂಗಾಧರ ಮರಾಟಿ ಅವರು ಮಾತನಾಡಿ, ತ್ಯಾಜ್ಯ ಘಟಕ ನಿರ್ಮಾಣ ಮಾಡಲು ಉದ್ದೇಶಿ ಸಿರುವ ಸ್ಥಳದ ಪಕ್ಕದಲ್ಲೇ ಬಹುಗ್ರಾಮ ಕುಡಿಯುವ ನೀರಿನ ಸಂಸ್ಕರಣೆ ಮತ್ತು ಸರಬರಾಜು ಘಟಕವಿದೆ. ಕೆಲವೇ ಮೀಟರ್‌ಗಳ ಅಂತರದಲ್ಲಿ ಸುಮಾರು ೧.೪೮ ಎಕರೆ ವಿಸ್ತೀರ್ಣದ ಕೆರೆ ಇದೆ. ಇದು ಸ್ಥಳೀಯ ಕೃಷಿಕರಿಗೂ ನೀರಿನ ಮೂಲವಾಗಿದ್ದು, ಘಟಕ ನಿರ್ಮಾಣವಾದರೆ ನೀರಿನ ಮೂಲವೂ ಕಲುಷಿತವಾಗಲಿದೆ. ಇಲ್ಲಿ 12 ಎಸ್‌ಸಿ ಕುಟುಂಬಗಳು ವಾಸವಾಗಿದ್ದು, ಇತರ ಸಮುದಾಯಗಳ ಮನೆಯೂ ಸಾಕಷ್ಟಿವೆ. 3 ಎಕರೆ ಜಾಗದಲ್ಲಿ ತ್ಯಾಜ್ಯ ಘಟಕ ನಿರ್ಮಾಣ ಮಾಡಲು ಉದ್ದೇಶಿಸಿಸಲಾಗಿದ್ದು, ಸ್ಥಳೀಯ ವ್ಯಕ್ತಿಯೊಬ್ಬರಿಗೆ ಸೇರಿದ ಜಾಗವನ್ನು ಆರ್‌ಟಿಸಿಯಲ್ಲಿ ಪಟ್ಟಣ ಪಂಚಾಯತ್ ಜಾಗ ಎಂದು ಬದಲಾಯಿಸಲಾಗಿದೆ ಎಂದು ಆರೋಪಿಸಿದರು.

2005 ರಲ್ಲಿ ಪಂಚಾಯತ್‌ನಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಶಾಸಕರು, ಆರ್‌ಐ, ವಿಎ ಎಲ್ಲರಿಗೂ ಈ ವಿಚಾರ ಗೊತ್ತಿದೆ. ಇದರ ಹೊರತಾಗಿಯೂ ಇಲ್ಲಿ ಘಟಕ ನಿರ್ಮಾಣ ಮಾಡಿದರೆ ಹೋರಾಟ ನಡೆಸಲಾಗುವುದು ಎಂದರು.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಪಿಸಿ ಸಿದ್ಧಾರ್ಥ ಗೋಯಲ್ ಉತ್ತರಿಸಿ, ವಿಚಾರವನ್ನು ಸಂಬಂಧ ಪಟ್ಟವರ ಗಮನಕ್ಕೆ ತಂದು ಸೂಕ್ತ ರೀತಿಯಲ್ಲಿ ಬಗೆ ಹರಿಸುವಂತೆ ಸೂಚಿಸಲಾಗುವುದು ಎಂದರು.

ದಲಿತ ಮುಖಂಡ ಚಂದ್ರ ಕುಮಾರ್ ಅವರು ಮಾತನಾಡಿ, ದಲಿತರ ಕಾಲನಿಗಳ ಪಕ್ಕದಲ್ಲಿ ತ್ಯಾಜ್ಯ ತಂದು ಸುರಿಯುವ ಪ್ರಕ್ರಿಯೆ ಎಲ್ಲ ಕಡೆಗಳಲ್ಲಿ ಸಾಮಾನ್ಯವಾಗಿದ್ದು, ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಂಚಾರ ವಿಭಾಗದ ಇನ್ಸ್‌ಪೆಕ್ಟರ್ ಗೋಪಾಲಕೃಷ್ಟ ಭಟ್ ಅವರು ಮಾತನಾಡಿ, ಟ್ರಾವೆಲ್ಸ್ ಸಂಸ್ಥೆ ಗಳಿಂದಾಗಿ ಪಿವಿಎಸ್ ಭಾಗದಲ್ಲಿ ವಾಹನ ಸಂಚಾರಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಅನಧಿಕೃತವಾಗಿ ಸಂಸ್ಥೆಗಳು ಕಾರ್ಯಾಚರಿಸುತ್ತಿದ್ದರೆ ಅವುಗಳನ್ನು ಪರವಾನಗಿ ರದ್ದು ಮಾಡಬೇಕು ಎಂದರು.

ಕಲ್ಲಮುಂಡ್ಕೂರು ದಲಿತ ಕಾಲಿನಿಗೆ ರುದ್ರಭೂಮಿ ನಿರ್ಮಾಣಕ್ಕೆ 4 ವರ್ಷದ ಹಿಂದೆ 10 ಸೆಂಟ್ಸ್ ಜಾಗ ಮಂಜೂರಾಗಿತ್ತು. ಆದರೆ ಶೆಡ್, ಆವರಣ ಗೋಡೆ ಯಾವುದನ್ನೂ ನಿರ್ಮಿಸಿಲ್ಲ. ಶೀಘ್ರ ಮೂಲಕ ಸೌಕರ್ಯ ಕಲ್ಪಿಸುವಂತೆ ಎಸ್‌ಪಿ ಆನಂದ ಒತ್ತಾಯಿಸಿದರು.

*ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಸಂಚಾರ: ಪಾಂಡೇಶ್ವರದಲ್ಲಿ ಹೆಲ್ಮೆಟ್ ಹಾಕದೆ 3-4 ಮಂದಿ ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಾರೆ ಜಗದೀಶ್ ಪಾಂಡೇಶ್ವರ ಅವರು ಆರೋಪಿ ಸಿದರು. ಇದಕ್ಕೆ ಧ್ವನಿಗೂಡಿಸಿದ ಗಿರೀಶ್ ಕುಮಾರ್ ಉಳ್ಳಾಲ ಭಾಗದಲ್ಲೂ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನದಲ್ಲಿ ಸಂಚರಿಸುವವರ ಸಂಖ್ಯೆ ಹೆಚ್ಚಾಗಿದೆ ಎಂದು ಆರೋಪಿಸಿದರು. ಡಿಸಿಪಿ ರವಿಶಂಕರ್ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದರು.

ಮಂಡ್ಯ ಘಟನೆಯ ಬಳಿಕ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ನಿಲ್ಲಿಸದಂತೆ ಸೂಚನೆ ಬಂದಿದೆ. ಹೀಗಾಗಿ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರು ಅಂತಹ ಸಂಚಾರ ನಿಯಮ ಉಲ್ಲಂಘನೆಯ ಫೋಟೋಗಳನ್ನು ತೆಗೆದು ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುತ್ತ್ತಾರೆ. ಡಿಸಿಪಿ ರವಿಶಂಕರ್ ಸಭೆಗೆ ಮಾಹಿತಿ ನೀಡಿದರು.

ಐಕಳ ಗ್ರಾಮದಲ್ಲಿ ಎಸ್‌ಸಿ ಎಸ್‌ಟಿ ಕಾಲನಿಗೆ ಯಾವುದೇ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ರಾಮಚಂದ್ರ ಆರೋಪಿಸಿದರು.

ಅಕ್ರಮ ಗಣಿಗಾರಿಕೆಯಿಂದ ಇಲ್ಲಿನ ಪರಿಶಿಷ್ಟರ ಮನೆಗಳಿಗೆ ಹಾನಿಯಾಗಿದ್ದು, ತಹಶೀಲ್ದಾರ್ ಭೇಟಿ ನೀಡಿದರೂ, ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿದರು.

ಉರ್ವಸ್ಟೋರ್ ಅಂಬೇಡ್ಕರ್ ಭವನದ ಬಳಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಚಂದ್ರಕುಮಾರ್ ಹಾಗೂ ಪ್ರತಿ ಮೂರನೇ ಶನಿವಾರ ಎಲ್ಲ ಠಾಣೆಗಳಲ್ಲಿ ದಲಿತ ಕಂದುಕೊರತೆ ಸಭೆ ಆಯೋಜಿಸಬೇಕು. ಜಿಲ್ಲಾಧಿಕಾರಿ ಕಚೇರಿಯಲ್ಲೂ ಸಭೆ ಆಯೋಜಿಸಬೇಕು ಎಂದು ಮುಕೇಶ್ ಆಗ್ರಹಿಸಿದರು.

*ಮೂಡುಬಿದಿರೆ ಸಂತೆಯಲ್ಲಿ ಮಟ್ಕಾ ದಂಧೆ: ಮೂಡುಬಿದಿರೆ ಸಂತೆಯಲ್ಲಿ ರಾಜರೋಷವಾಗಿ ಮಟ್ಕಾ ದಂಧೆ ಹೆಚ್ಚಾಗಿದ್ದು, ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ರಾಮಚಂದ್ರ ಆರೋಪಿಸಿದರು

ಡಿಸಿಆರ್‌ಇ ಎಸ್‌ಪಿ ಸೈಮನ್ ಅವರು ಅಹವಾಲುಗಳನ್ನು ಆಲಿಸಿದರು. ಎಸಿಪಿ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು.

ಬಾಣಂತಿ ಮೃತ್ಯು ಪ್ರಕರಣ: ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಮುಂದಿನ ಕ್ರಮ

ಮಂಗಳೂರು: ಲೇಡಿಗೋಷನ್ ಆಸ್ಪತ್ರೆಗೆ ಹೆರಿಗೆಗೆಂದು ಜೂ.14ರಂದು ಮಧ್ಯರಾತ್ರಿ 12 ಗಂಟೆಗೆ ದಾಖಲಾಗಿದ್ದ ಹಳೆಯಂಗಡಿ ಚೇಳಾರಿನ ವನಿತಾ (34) ಅವರು ಜೂ.15ರ ಮುಂಜಾನೆ 3.37ರ ವೇಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಆದರೆ ತೀವ್ರ ರಕ್ತಸ್ರಾವದ ಕಾರಣ 5.55ರ ವೇಳೆಗೆ ಮೃತಪಟ್ಟಿದ್ದಾರೆ. ಆಕೆಯನ್ನು ಐಸಿಯುಗೆ ಶಿಫ್ಟ್ ಮಾಡುವಲ್ಲಿ ವಿಳಂಬ ಮಾಡಿದ ಕಾರಣ ಘಟನೆ ಸಂಭವಿಸಿದೆ. ಮಹಿಳೆಗೆ ಈಗಾಗಲೇ ಒಂದು ಹೆಣ್ಣು ಮಗುವಿದ್ದು, ಈಗ ಮಕ್ಕಳಿಗೆ ತಾಯಿ ಇಲ್ಲದಂತಾಗಿದೆ ಎಂದು ದಲಿತ ಮುಖಂಡ ಸುಧಾಕರ ಬೊಳೂರು ಸಭೆಯ ಗಮನ ಸೆಳೆದರು.

ಮಹಿಳೆಗೆ ನಾರ್ಮಲ್ ಡೆಲಿವರಿಯಾಗಿದೆ. ಹೆರಿಗೆಯ ಬಳಿಕ ಮಗುವನ್ನು ಎನ್‌ಐಸಿಯುಗೆ ಶಿಪ್ಟ್ ಮಾಡಲಾ ಗಿದ್ದು, ಮಗು ಬದುಕಿದೆ. ಮಹಿಳೆಗೆ ತೀವ್ರ ರಕ್ತಸ್ರಾವವಾಗಿ ಸುಸ್ತಾಗಿದೆ, ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಆಕೆಯ ಪತಿಯಲ್ಲಿ ವೈದ್ಯರು ತಿಳಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಂದರು ಠಾಣೆ ಇನ್ಸ್‌ಪೆಕ್ಟರ್, ಘಟನೆಗೆ ಸಂಬಂಧಿಸಿದಂತೆ ವೈದ್ಯರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೋಸ್ಟ್‌ಮಾರ್ಟಂ ನಡೆಸಲಾಗಿದ್ದು, ಮೆಡಿಕೋ ಲೀಗಲ್ ಪ್ರಕರಣ ಆಗಿರುವುದರಿಂದ ಮೆಡಿಕಲ್ ಬೋರ್ಡ್‌ಗೆ ಮಾಹಿತಿ ನೀಡಲಾಗಿದೆ ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾ ಗುವುದು ಎಂದು ಮಾಹಿತಿ ನೀಡಿದರು.





Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News