×
Ad

ರಂಭಾಪುರಿ ಶ್ರೀಗಳ ಹೇಳಿಕೆಗೆ ಹಿಂದುಳಿದ, ದಲಿತ ಮಠಾಧೀಶರ ಖಂಡನೆ

Update: 2025-07-28 22:53 IST

ದಾವಣಗೆರೆ : ‘ಜಾತಿಗೊಂದು ಮಠ’ಗಳಿಂದ ಸಮಾಜ ಕಲುಷಿತಗೊಂಡಿದೆ ಎಂದು ಬಾಳೆಹೊನ್ನೂರು ಪೀಠದ ರಂಭಾಪುರಿ ಶ್ರೀಗಳು ನೀಡಿರುವ ಹೇಳಿಕೆಗೆ ಹಿಂದುಳಿದ ಮತ್ತು ದಲಿತ ಮಠಾಧೀಶರು ಖಂಡನೆ ವ್ಯಕ್ತಪಡಿಸಿದ್ದು, ಈ ಕೂಡಲೇ ತಮ್ಮ ಹೇಳಿಕೆ ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.

ನಗರದ ಹಳೇ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ ಅಹಿಂದ ಮಠಾಧೀಶರ ಒಕ್ಕೂಟದ ಅಧ್ಯಕ್ಷ ಹಾಗೂ ಕನಕಗುರುಪೀಠದ ನಿರಂಜನಾನಂದಪುರಿ ಶ್ರೀ, ಶನಿವಾರ ಭದ್ರಾವತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾತಿಗೊಂದು ಮಠದಿಂದ ಸಮಾಜ ಸಂಪೂರ್ಣ ಕಲುಷಿತಗೊಳ್ಳುತ್ತಿದೆ ಎಂದು ರಂಭಾಪುರಿ ಶ್ರೀ ನೀಡಿದ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಹಿರಿಯರಾದ ಶ್ರೀಗಳು ಗಾಜಿನ ಮನೆಯಲ್ಲಿದ್ದುಕೊಂಡು ಮತ್ತೊಬ್ಬರಿಗೆ ಕಲ್ಲು ಹೊಡೆಯುವ ಕೆಲಸ ಮಾಡಿದ್ದಾರೆ. ತಾವು ಸಂಕುಚಿತ ಭಾವನೆಯಿಂದ ಹೊರಬಂದು ವಿಶಾಲಮನೋಭಾವನೆ ಬೆಳೆಸಿಕೊಳ್ಳಬೇಕು. ತಮ್ಮಿಂದ ಇಂತಹ ಕ್ಷುಲ್ಲಕ ಹೇಳಿಕೆಗಳು ಪುನರಾವರ್ತನೆಯಾದರೆ ಉಗ್ರಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.

ಇತ್ತೀಚೆಗಷ್ಟೇ ಶೃಂಗಸಭೆ ಆಯೋಜಿಸುವ ಮೂಲಕ ಜಾತಿ ವ್ಯವಸ್ಥೆಗೆ ಪುರಸ್ಕಾರ ನೀಡಿದ ತಾವು, ಈಗ ಮತ್ತೊಬ್ಬರ ವಿರುದ್ಧ ದೂರುವುದು ತಮಗೆ ಶೋಭೆ ತರುವುದಿಲ್ಲ ಎಂದು ಕುಟುಕಿದರು.

ಹೊಸದುರ್ಗ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮಿ ಮಾತನಾಡಿ, ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ಘೋಷಣೆ ಮಾಡುವ ರಂಭಾಪುರಿ ಶ್ರೀಗಳು ಎಂದಾದರೂ ಕೆಳವರ್ಗದ ಜನರನ್ನು ಹತ್ತಿರ ಸೇರಿಸಿಕೊಂಡಿದ್ದಾರೆಯೇ?. ನಮ್ಮನ್ನು ತಮ್ಮ ಜೊತೆ ಕೂರಿಸಿಕೊಂಡಿದ್ದಾರೆಯೇ? ಎಂಬುದನ್ನು ತಿಳಿಸಲಿ ಎಂದರು.

ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಮಾತನಾಡಿ, ಶೋಷಿತ ಸಮುದಾಯಗಳಿಗೆ ಸಾಮಾಜಿಕ ವ್ಯವಸ್ಥೆಯಲ್ಲಿ ನಿರಂತರ ಶೋಷಣೆಯಾದಾಗ ಆಯಾ ಸಮುದಾಯದ ಭಕ್ತರೇ ಮಠ ಕಟ್ಟಿದ್ದಾರೆ ವಿನಾ ಮಠಾಧೀಶರು ಬಂದು ಮಠ ಕಟ್ಟಿಲ್ಲ ಎಂಬುದನ್ನು ಶ್ರೀಗಳು ಅರಿತು ನಡೆಯಲಿ ಎಂದ ಅವರು, ರಂಭಾಪುರಿ ಶ್ರೀಗಳು ಮೊದಲು ತಮ್ಮ ಮನಸ್ಸನ್ನು ಶುದ್ಧಗೊಳಿಸಿಕೊಂಡು ಇತರರಿಗೆ ಅರಿವು ಮೂಡಿಸುವ ಕಾರ್ಯ ಮಾಡಲಿ ಎಂದು ತಿರುಗೇಟು ನೀಡಿದರು.

ನಾವು ನೇರವಾಗಿ ಜಾತಿ ಹೆಸರಲ್ಲಿ ಮಠ ನಡೆಸುತ್ತಿದ್ದೇವಾದರೂ ನಮ್ಮ ಗುರಿ ಜಾತ್ಯತೀತ ಸಮಾಜ ನಿರ್ಮಾಣವಾಗಿದೆ. ಆದರೆ, ತಾವು ಜಾತಿ ಹೆಸರಿನಲ್ಲಿ ಮಾಡುತ್ತಿರುವ ಕಾರ್ಯಗಳಾದರೂ ಏನು ಸ್ಪಷ್ಟಪಡಿಸಿ ಎಂದು ರಂಭಾಪುರಿ ಶ್ರೀಗಳಿಗೆ ಅನೇಕ ಸವಾಲುಗಳನ್ನು ಮುಂದಿಟ್ಟರು.

ಸುದ್ದಿಗೋಷ್ಠಿಯಲ್ಲಿ ಯಾದವ ಗುರುಪೀಠದ ಶ್ರೀಕೃಷ್ಣಯಾದವ ಶ್ರೀ, ತೀರ್ಥಹಳ್ಳಿ ಈಡಿಗರ ಪೀಠದ ಆರ್ಯ ರೇಣುಕಾನಂದ ಶ್ರೀ, ಯಳವ ಗುರುಪೀಠದ ಬಸವಭೃಂಗೇಶ್ವರ ಶ್ರೀ, ವೇಮನಮಠದ ವೇಮನಾನಂದ ಶ್ರೀ, ಕುಂಬಾರ ಪೀಠದ ಕುಂಬಾರಗುಂಡಯ್ಯಶ್ರೀ, ಹಡಪದ ಅನ್ನದಾನಿ ಭಾರತೀ ಹಪ್ಪಣ್ಣ ಶ್ರೀ, ಹೊಸದುರ್ಗ ಕನಕಗುರು ಶಾಖಾಪೀಠದ ಈಶ್ವರಾನಂದಪುರಿ ಶ್ರೀ, ಮೇದಾರ ಪೀಠದ ಬಸವಕೇತೇಶ್ವರ ಶ್ರೀ, ಬೋವಿ ಗುರುಪೀಠದ ಸಿಇಒ ಗೋನಳ್ಳಿ ಗೋವಿಂದಪ್ಪ, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಎಸ್‌ಜೆಎಸ್ ಜ್ಞಾನಪೀಠದ ನಿರ್ದೇಶಕ ಕಾಳಗಟ್ಟ ಹನುಮಂತಪ್ಪ ಮತ್ತಿತರರಿದ್ದರು.

ರಂಭಾಪುರಿ ಶ್ರೀ ಸ್ಪಷ್ಟನೆ

‘ಭದ್ರಾವತಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಭದ್ರಾವತಿ ತಾಲೂಕು ಘಟಕದಿಂದ ಜರುಗಿದ ಸಮಾರಂಭದಲ್ಲಿ ‘ಜಾತಿಯ ಮಠಗಳಿಂದ ಕಲುಷಿತ ವಾತಾವರಣ’ ಎಂಬ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ದಲಿತ ಹಿಂದುಳಿದ ಮಠಾಧೀಶರು ಸುದ್ದಿಗೋಷ್ಠಿ ಮಾಡಿರುವುದು ನೋವಿನ ಸಂಗತಿ. ವೀರಶೈವ ಲಿಂಗಾಯತ ಸಮುದಾಯದ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಕೃತಿ ಪರಂಪರೆ ಆದರ್ಶಗಳ ಬಗ್ಗೆ ಮಾತನಾಡಿದ್ದೇನೇ ಹೊರತು ಅನ್ಯ ಬೇರೆ ಯಾವುದೇ ಜಾತಿ ಕುರಿತು ಯಾವುದೇ ಹೇಳಿಕೆ ಕೊಟ್ಟಿರುವುದಿಲ್ಲ’ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಪತ್ರಿಕೆ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಭಾರತದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆಯಿದ್ದು, ಆಯಾ ಸಮುದಾಯದ ಸಾಂಸ್ಕೃತಿಕ ನಾಯಕರ ಹೆಸರಿನಲ್ಲಿ ಮಠ ರಚನೆಗೊಂಡು ಸಮುದಾಯದ ಏಳ್ಗೆ, ಸಾಮರಸ್ಯ, ಬಾಂಧವ್ಯ ಹಾಗೂ ಆರೋಗ್ಯಪೂರ್ಣ ಸಮಾಜ ಸೃಷ್ಟಿಸುವ ಕಾರ್ಯದಲ್ಲಿ ಎಲ್ಲ ಮಠಗಳು ಸಾಗುತ್ತಿವೆ. ಆದರೆ, ರಂಭಾಪುರಿ ಶ್ರೀಗಳ ಹೇಳಿಕೆ ಖಂಡನೀಯ.

-ವಾಲ್ಮೀಕಿ ಪ್ರಸನ್ನಾನಂದಪುರಿ ಶ್ರೀ

ರಂಭಾಪುರಿ ಶ್ರೀಗಳು ‘ಮಾನವ ಧರ್ಮಕ್ಕೆ ಜಯವಾಗಲಿ’ ಎನ್ನುವ ಘೋಷಣೆಯಲ್ಲಿ ಎಲ್ಲ ಮಾನವರು ಇದ್ದಾರೆಂಬುದನ್ನು ಮೊದಲು ಅರಿಯಬೇಕು. ಹಿಂದುಳಿದ,ದಲಿತ ಮಠಗಳ ಬಗ್ಗೆ ಅವಹೇಳನ ಮಾಡುವ ಮೂಲಕ ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ಹೇಳಿಕೆಗೆ ಅವರು ವಿರುದ್ಧವಾಗಿದ್ದಾರೆ. ತಮ್ಮ ಈ ಹೇಳಿಕೆ ಸಮಾಜಕ್ಕೆ ತಪ್ಪುಸಂದೇಶ ನೀಡಿದಂತಾಗಿದೆ. ಕೂಡಲೇ ಹೇಳಿಕೆ ಹಿಂಪಡೆಯಬೇಕು. ಇಲ್ಲದಿದ್ದರೆ ಹಿಂದುಳಿದ ಮಠಾಧೀಶರಿಂದ ಪ್ರಬಲ ಹೋರಾಟಕ್ಕೆ ಚಿಂತನೆ ನಡೆಸಲಾಗುವುದು.

-ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಚಿತ್ರದುರ್ಗ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News