ದಾವಣಗೆರೆ: ಬೀದಿ ನಾಯಿಗಳ ದಾಳಿ; ಐವರಿಗೆ ಗಾಯ
ಸಾಂದರ್ಭಿಕ ಚಿತ್ರ PC: shutterstock
ದಾವಣಗೆರೆ: ಬೀದಿ ನಾಯಿಗಳ ದಾಳಿಯಿಂದ ಮೂವರು ಮಕ್ಕಳ ಸಹಿತ ಐವರು ಗಾಯಗೊಂಡಿರುವ ಘಟನೆ ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಬಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸುಮಾ (30) ಶ್ರೇಯಾ (7), ಚಂದ್ರಿಕಾ (2), ಮದನ್ (2), ರುದ್ರಮ್ಮ (65) ಗಾಯಗೊಂಡವರು.
ಬುಧವಾರ ಕ್ಷೇತ್ರ ಸಂಚಾರದಲ್ಲಿ ತೊಡಗಿದ್ದ ಶಾಸಕ ಕೆ.ಎಸ್.ಬಸವಂತಪ್ಪ ಅವರು ಸುದ್ದಿ ತಿಳಿದು ಕೂಡಲೇ ಗಾಯಾಳುಗಳನ್ನು ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಕರೆದುಕೊಂಡು ಬರುವಂತೆ ಸೂಚಿಸಿ ದಾವಣಗೆರೆಗೆ ಬಂದಿದ್ದಾರೆ. ಆಸ್ಪತ್ರೆಗೆ ಬಂದ ಶಾಸಕರು ವೈದ್ಯರ ಬಳಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ನೆರವಾದರು.
ಈ ವೇಳೆ ಸಂಬಂಧಪಟ್ಟ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಶಾಸಕ ಕೆ.ಎಸ್.ಬಸವಂತಪ್ಪ, ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಅದರಂತೆ ನಮ್ಮ ಕ್ಷೇತ್ರದಲ್ಲೂ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಬೀದಿ ನಾಯಿಗಳ ಹಾವಳಿ ನಿಯಂತ್ರಿಸಬೇಕೆಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ರಂಗಪ್ಪ, ಬಸವರಾಜ್, ದಶರತ್, ರವಿ ಸೇರಿದಂತೆ ಗಾಮದ ಕೆಲವರು ಹಾಜರಿದ್ದರು.