×
Ad

ದಾವಣಗೆರೆ| ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳ ಆರೋಪ: ಮಹಿಳೆ ಆತ್ಮಹತ್ಯೆ

Update: 2025-08-20 22:57 IST

ದಾವಣಗೆರೆ: ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳದಿಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ವರದಿಯಾಗಿದೆ.

ಹಳೆ ಕುಂದವಾಡ ಗ್ರಾಮದ ಮಹಾದೇವಿ (32)ಮೃತಪಟ್ಟವರು. ಎರಡು ವಾರಗಳಿಂದ ಕಂತಿನ ಹಣ ಕಟ್ಟದ ಹಿನ್ನೆಲೆಯಲ್ಲಿ ಫೈನಾನ್ಸ್ನ ವಸೂಲಾತಿ ಸಿಬ್ಬಂದಿ ಮರುಪಾವತಿಗೆ ಕಿರುಕುಳ ನೀಡಿದ್ದರಿಂದಾಗಿ ಮಹಿಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಮಹಿಳೆಯ ಪತಿ ಮಂಜುನಾಥ ಕೂಲಿ ಕಾರ್ಮಿಕರಾಗಿದ್ದು, ಮೈಕ್ರೋ ಫೈನಾನ್ಸ್ ಗಳಾದ ಐಡಿಎಫ್ಸಿ, ಧರ್ಮಸ್ಥಳ ಫೈನಾನ್ಸ್, ಸಗ್ರಹ ಫೈನಾನ್ಸ್, ಜನಾ ಫೈನಾನ್ಸ್ ನಿಂದ ಸುಮಾರು 4.5 ಲಕ್ಷ ರೂ.ಗಳಷ್ಟು ಸಾಲ ಪಡೆದಿದ್ದರು. ಹಣಕಾಸಿನ ಸಮಸ್ಯೆಯಿಂದಾಗಿ ವಾರದ ಕಂತನ್ನು ಮರುಪಾವತಿ ಮಾಡಿರಲಿಲ್ಲ ಎಂದು ತಿಳಿದು ಬಂದಿದೆ.

ಮೈಕ್ರೋಫೈನಾನ್ಸ್ ಸಿಬ್ಬಂದಿ ಸಾಲದ ಕಂತು ವಸೂಲಾತಿಗಾಗಿ ಪ್ರತಿನಿತ್ಯ ಮನೆ ಬಾಗಿಲಿಗೆ ಬಂದು ಗಲಾಟೆ ಮಾಡುತ್ತಿದ್ದರು ಎಂದು ಕುಟುಂಬದ ಸಂಬಂಧಿ ಮಹಾಂತೇಶ ಕುಂದುವಾಡ ಆರೋಪಿಸಿದ್ದಾರೆ. ‘ಮಂಗಳವಾರ ಮಧ್ಯಾಹ್ನ ಪತ್ನಿ ಮನೆಯಲ್ಲಿ ಒಬ್ಬಳೇ ಇದ್ದಾಗ ಫೈನಾನ್ಸ್ ನ ಸಿಬ್ಬಂದಿಯೊಬ್ಬ ಬಂದು ಸಾಲ ಕಟ್ಟುವಂತೆ ಗಲಾಟೆ ಮಾಡಿದ್ದಾನೆ. ನೀವು ಈ ರೀತಿ ಹಿಂಸೆ ನೀಡಿದರೆ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಪತ್ನಿ ಅಳಲು ತೋಡಿಕೊಂಡಿದ್ದಾಳೆ. ಆದರೂ ಫೈನಾನ್ಸ್ ಸಿಬ್ಬಂದಿ ನೀವು ಆತ್ಮಹತ್ಯೆಯಾದರೂ ಮಾಡಿಕೊಳ್ಳಿ ಏನಾದರೂ ಮಾಡಿಕೊಳ್ಳಿ, ನಮ್ಮ ಸಾಲ ಮರುಪಾವತಿ ಮಾಡಿ ಎಂದು ಮಾನಸಿಕವಾಗಿ ಹಿಂಸೆ ನೀಡಿ ಮನೆ ಮುಂದೆ ಗಲಾಟೆ ಮಾಡಿದ್ದಾನೆ. ಇದರಿಂದ ಮಾನಸಿಕವಾಗಿ ನೊಂದ ನನ್ನ ಪತ್ನಿ ನೇಣಿಗೆ ಶರಣಾಗಿದ್ದಾಳೆ’ ಎಂದು ಪತಿ ಮಂಜುನಾಥ ಆರೋಪಿಸಿದ್ದಾರೆ.

ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News