ವೀರಶೈವ ಲಿಂಗಾಯತರ ಅವನತಿಗೆ ಹುಟ್ಟಿರುವ ಪ್ರಹ್ಲಾದ್ ಜೋಶಿಯನ್ನು ಸೋಲಿಸುವುದೇ ನನ್ನ ಗುರಿ: ದಿಂಗಾಲೇಶ್ವರ ಸ್ವಾಮೀಜಿ

Update: 2024-04-27 10:24 GMT

ಹುಬ್ಬಳ್ಳಿ:  ಧಾರವಾಡ ಲೋಕಸಭಾ ಚುನಾವಣಾ ಕಾವು ಏರುತ್ತಿರುವ ಮಧ್ಯೆಯೇ ಲೋಕಸಭೆ ಸ್ಪರ್ಧೆಯಿಂದ ಹಿಂದೆ ಸರಿದು ನಾಮಪತ್ರ ವಾಪಸ್ಸು ಪಡೆದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ವೀರಶೈವ ಲಿಂಗಾಯತರ ಅವನತಿಗೆ ಹುಟ್ಟಿರುವ ಶಕ್ತಿಯಾದ ಪ್ರಹ್ಲಾದ್ ಜೋಶಿಯನ್ನು ಸೋಲಿಸುವುದೇ ನಮ್ಮ ಧರ್ಮ ಯುದ್ಧ ಎಂದು ಶಿರಹಟ್ಟಿಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೋಶಿ ಅವರು ಬೆಳೆಸಿದ ನಾಯಕರನ್ನು ತುಳಿಯುವ ಕೆಲಸ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ. ಇಪ್ಪತ್ತು ವರ್ಷಗಳ ಕಾಲ ಇವರು ಏನು ಕೆಲಸ ಮಾಡಿದ್ದಾರೆ ಎಂದು‌ ವಾಗ್ದಾಳಿ ನಡೆಸಿದರು.

ಕೇಂದ್ರದಲ್ಲಿ ನಾಮನಿರ್ದೇಶನವನ್ನ ಎಷ್ಟು ಜನರಿಗೆ ಕೊಡಿಸಿದ್ದಾರೆಂಬುದು ಜೋಶಿ ಹಿಂಬಾಲಕರು ಹೇಳಲಿ. ಜೋಶಿಯವರು ತಂದಿರುವ ಅನುದಾನವನ್ನ ಎಲ್ಲಿ ಹಂಚಿಕೆ ಮಾಡಿದ್ದಾರೆಂಬುದು ಸರ್ವೇ ಮಾಡಲಿ. ಕಳೆದ 15 ವರ್ಷಗಳಿಂದ ಒಂದೇ ಒಂದು ಮಠ ಮಂದಿರಗಳಿಗೆ ಅನುದಾನ ಕೊಟ್ಟಿಲ್ಲ. ಜೋಶಿ ಅವರಿಗೆ ಮಾನ ಮರ್ಯಾದೆ ಇದೆಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಹಣೆಯ ಮೇಲೆ ಭಸ್ಮ ಹಚ್ಚೋ ಕೆಲಸ ನಾವು ಸಹಿಸಲ್ಲ. ಜೋಶಿ ಅವರು ಸಂಸದರಾದ ನಂತರ ಮಠಗಳು, ನಮ್ಮ ಸಮುದಾಯದವರು ಅದಃಫತನವಾಗಿದ್ದಾರೆ. ಮಠಗಳ ನಡುವೆ ಜೋಶಿ ಒಡೆದಾಳೋ ನೀತಿ ಅನುಸರಿಸುತ್ತಿದ್ದಾರೆ. ಮಠಗಳನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದಾರೆ. ಜೋಶಿ ಅವರ ಸೋಲು ಖಚಿತ. ಸರ್ವೆಯಲ್ಲಿ ಇದು ಬಹಿರಂಗವಾಗಿದೆ ಎಂದರು.

ಭದ್ರಾಪುರದಲ್ಲಿ ನಮ್ಮ ಹಿರಿಯ ಸ್ವಾಮೀಜಿ ಶಿರಹಟ್ಟಿ ಮಠದ ಫಕೀರ ಸಿದ್ದರಾಮ ಸ್ವಾಮೀಜಿಯವರನ್ನು ಭೇಟಿ ಮಾಡಿದ ಜೋಶಿ, ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ನಮ್ಮ ಹಿರಿಯ ಸ್ವಾಮೀಜಿಗಳಿಂದ ನನ್ನ ಮೇಲೆ ಒತ್ತಡ ಹಾಕಿದ್ದಾರೆ. ನಮ್ಮ ಹಿರಿಯ ಸ್ವಾಮೀಜಿ ಶಿವಯೋಗಿ ಸಿದ್ದರಾಮ ಮಹಾಸ್ವಾಮಿಗಳನ್ನು ಪದೆ ಪದೇ ಭೇಟಿ ಮಾಡುತ್ತಿದ್ದಾರೆ. ಗುರು ಶಿಷ್ಯರಾದ ನಮ್ಮನ್ನು ಅಗಲಿಸೋ ಕೆಲಸ ಮಾಡುತ್ತಿದ್ದಾರೆ. ಗುರು ಶಿಷ್ಯರಾದ ನಮ್ಮನ್ನು ನೀವು ಅಗಲಿಸಿದ್ರೆ, ದಂಪತಿಗಳಾಗಿರುವ ನಿಮ್ಮನ್ನು ಅಗಲಿಸುವ ಕಾಲ ಬಂದೀತು ಎಂದು ಎಚ್ಚರಿಕೆ ನೀಡಿದರು.

ಅನೇಕ ಸ್ವಾಮೀಜಿಗಳನ್ನು ಭೇಟಿ ಮಾಡಿ ಸ್ವಾಮೀಜಿಗಳಿಗೆ ಆಮಿಷ ಒಡ್ಡುವ ಕೆಲಸವನ್ನ ಜೋಶಿ ಮಾಡ್ತಾ ಇದ್ದಾರೆ. ನನ್ನ ಕಡೆ ವಿಡಿಯೋ ಇದೆ.‌ ಅವರಿಗೆ ಜನ ಹಾಕಿರೋ ಶಾಲು ಸ್ವಾಮೀಗಳಿಗೆ ಹಾಕುತ್ತಿದ್ದಾರೆ. ‌ ಚುನಾವಣೆ ಬಂದಾಗ ಮಾತ್ರ ಸ್ವಾಮೀಜಿಗಳು ಬೇಕು. ನಿಮಗೆ ಆತ್ಮಸಾಕ್ಷಿ, ಮಾನ ಮರ್ಯಾದೆ ಇದ್ರೆ, ಯಾಕೆ ನಮ್ಮ ಹಿರಿಯ ಸ್ವಾಮೀಜಿಗಳ ಬಳಿ ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಜೋಶಿಯವರು ನೇಹಾ ರಕ್ತದ ಮೇಲೆ ಚುನಾವಣೆ ಮಾಡುತ್ತಿದ್ದಾರೆ. ಜೋಶಿ ಸ್ವಾರ್ಥಿ. ಇದನ್ನು ಜನರು ಗಮನಿಸಬೇಕು. ಜೋಶಿ ಅವರು ಲಿಂಗಾಯತರ ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಲಿಂಗಾಯತರು, ಹಿಂದುಳಿದವರುನ್ನು ತುಳಿದಿರುವುದೇ ಪ್ರಹ್ಲಾದ್ ಜೋಶಿ 20 ವರ್ಷದಲ್ಲಿ ಮಾಡಿದ ದೊಡ್ಡ ಸಾಧನೆ. ತಮ್ಮ ಅಧಿಕಾರದ ಅವಧಿಯಲ್ಲಿ ಜೋಶಿ ಅವರು ಸಮಾಜದ ಎಷ್ಟು ಜನರನ್ನು ಕೆಲಸಕ್ಕೆ ಸೇರಿಸಿದ್ದಾರೆ. ಇದನ್ನು ಬಹಿರಂಗ ಮಾಡಲಿ ಎಂದು ಸವಾಲೆಸೆದರು.

ಹುಚ್ಚು ಸಾಹಸ ಕೈ ಬಿಡಬೇಕು. ಜೋಶಿ ಸಂಸದರಾದ ಮೇಲೆ‌ ನಮ್ಮ‌ ಸಂಸ್ಕೃತಿ, ಪರಂಪರೆ ನಾಶ ಆಗಿದೆ. ಮಠಗಳ ಪರಂಪರೆಯ ನಾಶ ಆಗಿದೆ. ನಾನು ಯಾವ ಪಕ್ಷದ ಪರ ಇಲ್ಲ. ನನ್ನ ಗುರಿ ಜೋಶಿಯನ್ನು ಸೋಲಿಸೋದು ಮಾತ್ರ ಎಂದು ಹೇಳಿದರು.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News