DHARAWADA | ಲ್ಯಾಬ್ ಗೆಂದು ಹೋದ ಯುವತಿಯ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ
ಪ್ಯಾರಾ ಮೆಡಿಕಲ್ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿದ್ದ ಝಕಿಯಾ
ಧಾರವಾಡ, ಜ.21: ನಿನ್ನೆ ಸಂಜೆ ಮನೆಯಿಂದ ಲ್ಯಾಬ್ ಗೆಂದು ಹೋದ ಯುವತಿಯ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ ಇಂದು ಬೆಳಗ್ಗೆ ರಸ್ತೆ ರಸ್ತೆ ಬದಿಯ ನಿರ್ಜನ ಪ್ರದೇಶದಲ್ಲಿ ಪತ್ತೆಯಾದ ಘಟನೆ ಧಾರವಾಡದ ಮನಸೂರು ಎಂಬಲ್ಲಿ ನಡೆದಿದೆ.
ಧಾರವಾಡದ ಗಾಂಧಿ ಚೌಕ್ ನಿವಾಸಿ ಯೂನುಸ್ ಮುಲ್ಲಾ ಎಂಬವರ ಪುತ್ರಿ ಝಕಿಯಾ ಮುಲ್ಲಾ (21) ಕೊಲೆಯಾದ ಯುವತಿ.
ಪ್ಯಾರಾ ಮೆಡಿಕಲ್ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿದ್ದ ಝಕಿಯಾ ಮಂಗಳವಾರ ಸಂಜೆ ಮನೆಯಿಂದ ಲ್ಯಾಬ್ ಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಮನೆಮಂದಿ ರಾತ್ರಿಯಿಡೀ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಇಂದು ಮುಂಜಾನೆ ಹುಡುಕಾಡಿದಾಗ ಧಾರವಾಡದ ಮನಸೂರು ರಸ್ತೆಯ ಸಮೀಪ ಝಕಿಯಾ ಅವರ ಮೃತದೇಹ ಪತ್ತೆಯಾಗಿದೆ.
ಬೇರೆ ಯಾವುದೋ ಸ್ಥಳದಲ್ಲಿ ಅವರನ್ನು ಕೊಲೆ ಮಾಡಿ, ಈ ಸ್ಥಳಕ್ಕೆ ತಂದು ಬಿಸಾಕಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಧಾರವಾಡ ಗ್ರಾಮೀಣ ಹಾಗೂ ವಿದ್ಯಾಗಿರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.
ತನಿಖೆ ಆರಂಭ: ಎಸ್ಪಿ ಗುಂಜನ ಆರ್ಯ
ಝಕಿಯಾ ಎಂಬ ಯುವತಿ ಮಂಗಳವಾರ ಮಧ್ಯಾಹ್ನ ಊಟದ ನಂತರ ಮನೆಯಿಂದ ಹೊರಗಡೆ ಹೋದವರು ನಾಪತ್ತೆಯಾಗಿದ್ದರು. ಈ ಬಗ್ಗೆ ಇಂದು ಮುಂಜಾನೆ ಧಾರವಾಡ ನಗರ ಠಾಣೆ ಮತ್ತು ವಿದ್ಯಾಗಿರಿ ಪೊಲೀಸ್ ಠಾಣೆಗೆ ಮಾಹಿತಿ ಬಂದಿದೆ. ಯುವತಿಯ ಮೃತದೇಹ ಪತ್ತೆಯಾಗಿದ್ದು, ಈ ನಮ್ಮ ಪೊಲೀಸ್ ಸಿಬ್ಬಂದಿ ಮಾಹಿತಿ ಕಲೆ ಹಾಕುತ್ತಿದ್ದಾರೆ, ಸೋಕೋ ಟೀಮ್ ಕೂಡ ಆಗಮಿಸಿ ಪರಿಶೀಲನೆ ನಡೆಸುತ್ತಿದೆ. ಮರಣೋತ್ತರ ಪರೀಕ್ಷೆ ಬಂದ ಬಳಿಕ ಏನಾಗಿದೆ ಎಂಬುದರ ಸ್ಪಷ್ಟ ಮಾಹಿತಿ ಸಿಗಲಿದೆ. ತನಿಖೆ ಆರಂಭಿಸಲಾಗಿದೆ ಎಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ ಆರ್ಯ ತಿಳಿಸಿದ್ದಾರೆ.