ಹುಬ್ಬಳ್ಳಿ | ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಕೊಲೆ
ಅಹ್ಮದ್ ರಜಾಕ್
ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ ನಡೆಸಿರುವ ಘಟನೆ ನಗರದ ಗೌಶಿಯಾ ಟೌನ್ನಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಮೃತರನ್ನು ಅಹ್ಮದ್ ರಜಾಕ್ ಶಹಪೂರ್ (48) ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೆಲೆ :
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಅಹ್ಮದ್ ರಜಾಕ್ ಅವರ ಸಹೋದರ ಮತ್ತು ಅವರ ಅಳಿಯನ ನಡುವೆ ಗಲಾಟೆ ನಡೆದಿದೆ. ಅಹ್ಮದ್ ರಜಾಕ್ ಅವರ ಸಹೋದರನ ಮಗಳ ಪತಿ ಸದ್ದಾಂ, ತನ್ನ ಪತ್ನಿಯನ್ನು ಕರೆದುಕೊಂಡು ಹೋಗಲು ಮಾವನ ಮನೆಗೆ ಆಗಮಿಸಿದ್ದನು. ಈ ವೇಳೆ ಮನೆ ಹೊರಗಡೆ ನಿಂತು ಗಲಾಟೆ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.
ಗಲಾಟೆ ಹೆಚ್ಚಾಗುತ್ತಿದ್ದುದನ್ನು ಗಮನಿಸಿದ ಅಹ್ಮದ್ ರಜಾಕ್, ಅಳಿಯನಾದ ಸದ್ದಾಂಗೆ ಬುದ್ದಿವಾದ ಹೇಳಲು ಮುಂದಾದಾಗ, ದಿಢೀರನೆ ಸದ್ದಾಂ ಕಲ್ಲಿನಿಂದ ರಜಾಕ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ರಜಾಕ್ ಅವರನ್ನು ತಕ್ಷಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸದ್ದಾಂನನ್ನು ಪೊಲೀಸರು ಬಂಧಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.