×
Ad

ಗದಗ: ತುಂಗಭದ್ರಾ ನದಿ‌ಯಲ್ಲಿ ಅಕ್ರಮ‌ ಮರಳುಗಾರಿಕೆ; ಇಬ್ಬರು ವಶಕ್ಕೆ

Update: 2025-02-12 14:45 IST

ಗದಗ: ಜಿಲ್ಲೆಯ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಸಂದರ್ಭ ಗದಗ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ನೇತೃತ್ವದ ತಂಡ ಇಂದು ಬೆಳಿಗ್ಗೆ ದಿಢೀರ್ ದಾಳಿ ನಡೆಸಿದ್ದು, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಮುಂಡರಗಿ ತಾಲೂಕಿನ ಸಿಂಗಟಾಲೂರ ಗ್ರಾಮದ ಬಳಿಯ ತುಂಗಭದ್ರಾ ನದಿ ಪಾತ್ರದಲ್ಲಿ, ಕಳೆದ ಒಂದು ತಿಂಗಳಿಂದ ನದಿಯಲ್ಲಿ ಅಕ್ರಮ ಮರಳು ದಂಧೆ ಬಗ್ಗೆ ಮಾಹಿತಿ ಇದ್ದೂ ತಾಲೂಕಾಡಳಿತ ಮೌನವಹಿಸಿದೆ ಎನ್ನಲಾಗಿದೆ. ದಂಧೆಕೋರರು ಮುಂಡರಗಿ ತಾಲೂಕಿನ ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ಶಾಮೀಲಾಗಿದ್ದಾರೆ‌ ಅನ್ನೋ ಆರೋಪ ಕೇಳಿ ಬಂದಿದೆ. ಹೀಗಾಗಿ ಸ್ವತಃ ಗದಗ ಡಿಸಿ ಸಿ ಎನ್ ಶ್ರೀಧರ್ ಹಾಗೂ ಎಸಿ ಗಂಗಪ್ಪ ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ‌ನಡೆಸಿದ್ದಾರೆ.

ನಸುಕಿನ ಜಾವ 4-30 ರ ಸುಮಾರಿಗೆ ಖಾಸಗಿ ವಾಹನದಲ್ಲಿ ತೆರಳಿದ ಡಿಸಿ ಹಾಗೂ ಎಸಿ ಸ್ವತಃ ನೀರಿಗಿಳಿದಿದ್ದಾರೆ.  ಈ ವೇಳೆ, ಸುಮಾರು 20 ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳಲ್ಲಿ‌ ಮರಳುಗಳ್ಳರು ನದಿ ಮಧ್ಯದಲ್ಲಿ ಅಕ್ರಮವಾಗಿ‌ ಮರಳು ತುಂಬುತ್ತಿದ್ದರು.‌ ಅಧಿಕಾರಿಗಳನ್ನ ಕಂಡ ತಕ್ಷಣ ಎಲ್ಲರೂ ಚೆಲ್ಲಾಪಿಲ್ಲಿಯಾಗಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಬೆನ್ನು ಹತ್ತಿದ ಅಧಿಕಾರಿಗಳಿಗೆ ಎರೆಡು‌ ಟ್ರ್ಯಾಕ್ಟರ್ ಹಾಗೂ ಇಬ್ಬರು ಚಾಲಕರು,‌ ಮೊಬೈಲ್ ಸೇರಿದಂತೆ ಹಲವು‌ ಕಡೆಗಳಲ್ಲಿ ಸಂಗ್ರಹಿಸಿಟ್ಟಿದ್ದ 40 ಕ್ಕೂ‌ ಹೆಚ್ಚು ಟಿಪ್ಪರ್ ನಷ್ಟು ಅಕ್ರಮ‌ ಮರಳನ್ನ ವಶಪಡಿಸಿಕೊಂಡಿದ್ದಾರೆ.

 ಡಿಸಿ ದಾಳಿಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮುಂಡರಗಿ ತಹಶಿಲ್ದಾರ ಪಿ.ಎಸ್.ಯರ್ರಿಸ್ವಾಮಿ ಸ್ಥಳಕ್ಕೆ ತಡವಾಗಿ ದೌಡಾಯಿಸಿದ್ದಕ್ಕೆ ಡಿಸಿ ಅವರು, ಮುಂಡರಗಿ ತಹಶಿಲ್ದಾರರನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಪರಿಶೀಲನೆ ಮುಂದುವರೆಸಿದ್ದಾರೆ. ಕಂದಾಯ ಇಲಾಖೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News