Haveri | ರೇಷನ್ ಜೊತೆಗೆ ಸಿನಿಮಾ ಟಿಕೆಟ್ ಮಾರಾಟ: ನ್ಯಾಯಬೆಲೆ ಅಂಗಡಿಗಳ ಮೇಲೆ ಹೊಸ ಹೊರೆ, ಗ್ರಾಹಕರ ಆಕ್ರೋಶ

Update: 2026-07-27 23:50 IST

ಹಾವೇರಿ : ರಾಜ್ಯ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹೊಸ ಕ್ರಮದ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯಾದ್ಯಂತ ಸರಕಾರಿ ನ್ಯಾಯಬೆಲೆ ಅಂಗಡಿಗಳ ಮೂಲಕ ಆಹಾರ ಧಾನ್ಯಗಳೊಂದಿಗೆ 'ನ್ಯಾಯಬೆಲೆ ಅಂಗಡಿ' ಎಂಬ ಶೀರ್ಷಿಕೆಯ ಕನ್ನಡ ಚಲನಚಿತ್ರದ ಟಿಕೆಟ್‌ಗಳನ್ನು ಮಾರಾಟ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಹಾವೇರಿ ಜಿಲ್ಲೆಯಲ್ಲೂ ನ್ಯಾಯಬೆಲೆ ಅಂಗಡಿಗಳಿಗೆ 50, 75 ಹಾಗೂ 100 ಟಿಕೆಟ್‌ಗಳನ್ನು ವಿತರಿಸಲಾಗಿದ್ದು, ಪ್ರತಿ ಟಿಕೆಟ್‌ಗೆ 150 ರೂ. ನಿಗದಿಪಡಿಸಲಾಗಿದೆ. ಪಡಿತರ ಅಕ್ಕಿ, ಜೋಳ ಸೇರಿದಂತೆ ಅಗತ್ಯ ಆಹಾರ ಧಾನ್ಯಗಳನ್ನು ಪಡೆಯಲು ಬರುವ ಗ್ರಾಹಕರಿಗೆ ಸಿನಿಮಾ ಟಿಕೆಟ್ ಖರೀದಿಸುವ ಒತ್ತಡ ಉಂಟಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಒಂದೆಡೆ ಬರಗಾಲದ ಪರಿಸ್ಥಿತಿ, ಒಣಗುತ್ತಿರುವ ಬೆಳೆಗಳು, ಮತ್ತೊಂದೆಡೆ ದಿನಸಿ ವಸ್ತುಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ, ರೇಷನ್ ವ್ಯವಸ್ಥೆಯನ್ನು ಸಿನಿಮಾ ಪ್ರಚಾರಕ್ಕೆ ಬಳಸುವುದು ಸರಿಯಲ್ಲ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಸಿನಿಮಾ ನೋಡಲು ಆಸಕ್ತಿ ಇರುವವರು ಸ್ವಯಂಪ್ರೇರಿತವಾಗಿ ಚಿತ್ರಮಂದಿರಕ್ಕೆ ಹೋಗಿ ಟಿಕೆಟ್ ಖರೀದಿಸುತ್ತಾರೆ. ನ್ಯಾಯಬೆಲೆ ಅಂಗಡಿಗಳ ಮೂಲಕ ಟಿಕೆಟ್ ಮಾರಾಟ ಮಾಡುವ ನಿರ್ಧಾರವನ್ನು ಸರಕಾರ ತಕ್ಷಣವೇ ಹಿಂಪಡೆಯಬೇಕು" ಎಂದು ಹಾವೇರಿ ಜಿಲ್ಲೆಯ ಗ್ರಾಹಕರು ಆಗ್ರಹಿಸಿದ್ದಾರೆ.

ಈ ಕ್ರಮದಿಂದ ನ್ಯಾಯಬೆಲೆ ಅಂಗಡಿ ಮಾಲೀಕರ ಮೇಲೂ ಅನಗತ್ಯ ಹೊರೆ ಬಿದ್ದಿದ್ದು, ಆಹಾರ ವಿತರಣಾ ವ್ಯವಸ್ಥೆಯನ್ನು ಅದರ ಮೂಲ ಉದ್ದೇಶಕ್ಕಷ್ಟೇ ಸೀಮಿತಗೊಳಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News