×
Ad

590 ಕೋಟಿ ರೂ. ವಂಚನೆಗೆ ಸಿಲುಕಿದ IDFC First Bank; ಷೇರುಗಳು ಶೇ 20ರಷ್ಟು ಕುಸಿತ

Update: 2026-02-23 15:44 IST

Photo Credit : NDTV 

ನಿರ್ದಿಷ್ಟ ಸಾಲಗಾರ ಅಥವಾ ಸಾಲಗಾರರ ತಂಡವು ಬ್ಯಾಂಕಿನ ನಿಯಮಗಳನ್ನು ಉಲ್ಲಂಘಿಸಿ ತಪ್ಪು ಮಾಹಿತಿ ನೀಡಿ ಸುಮಾರು 500 ಕೋಟಿ ರೂ.ಗಳನ್ನು ಪಡೆದಿರುವುದು ಆಂತರಿಕ ತನಿಖೆಯ ವೇಳೆ ಪತ್ತೆಯಾಗಿದೆ.

ಹರ್ಯಾಣ ಸರ್ಕಾರಿ ಇಲಾಖೆಯಿಂದ ಬಂದ ನಿಯಮಿತವಾದ ಖಾತೆ ಮುಚ್ಚಬೇಕೆನ್ನುವ ವಿನಂತಿಯು ಖಾಸಗಿ ವಲಯದ ಬ್ಯಾಂಕ್ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಇತಿಹಾಸದಲ್ಲೇ ಕಂಡರಿಯದ ಗಂಭೀರ ವಂಚನೆಯ ತನಿಖೆಗೆ ಕಾರಣವಾಗಿದೆ. ಸರಳವಾದ ಬ್ಯಾಲೆನ್ಸ್ ಪರಿಶೀಲನೆಯಿಂದಾಗಿ ಪ್ರಾರಂಭವಾಗಿರುವುದು 590 ಕೋಟಿ ರೂ. ಮೌಲ್ಯದ ವ್ಯತ್ಯಾಸವಾಗಿ ಬದಲಾಗಿದೆ. ನಿರ್ದಿಷ್ಟ ಸಾಲಗಾರ ಅಥವಾ ಸಾಲಗಾರರ ತಂಡವು ಬ್ಯಾಂಕಿನ ನಿಯಮಗಳನ್ನು ಉಲ್ಲಂಘಿಸಿ ತಪ್ಪು ಮಾಹಿತಿ ನೀಡಿ ಸುಮಾರು 500 ಕೋಟಿ ರೂ.ಗಳನ್ನು ಪಡೆದಿರುವುದು ಆಂತರಿಕ ತನಿಖೆಯ ವೇಳೆ ಪತ್ತೆಯಾಗಿದೆ.

ಅಭೂತಪೂರ್ವ ವಂಚನೆ ಪ್ರಕರಣ

ಐಡಿಎಫ್ಸಿ ಫಸ್ಟ್ ಬ್ಯಾಂಕ್ ಈ ಮೊತ್ತವನ್ನು ‘ವಂಚನೆ’ ಎಂದು ವರ್ಗೀಕರಿಸಿದ್ದು, ಈ ಕುರಿತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಸಂಬಂಧಪಟ್ಟ ತನಿಖಾ ಸಂಸ್ಥೆಗಳಿಗೆ ವರದಿ ಮಾಡಿದೆ. “ತನಿಖಾ ಸಂಸ್ಥೆಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ ಮತ್ತು ವಂಚನೆಯ ಮೊತ್ತವನ್ನು ವಸೂಲಿ ಮಾಡಲು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ” ಎಂದು ಬ್ಯಾಂಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಹರ್ಯಾಣ ಸರ್ಕಾರವು ತನ್ನ ಖಾತೆಯನ್ನು ಮುಚ್ಚುವಂತೆ ಮತ್ತು ಹಣವನ್ನು ಬೇರೆಡೆಗೆ ವರ್ಗಾಯಿಸುವಂತೆ ತಿಳಿಸಿದಾಗ ಮೊದಲ ಬಾರಿಗೆ ವಂಚನೆಯ ಸುಳಿವು ಸಿಕ್ಕಿತ್ತು. ಸರ್ಕಾರದ ಬೇಡಿಕೆಯನ್ನು ಈಡೇರಿಸುವಾಗ ಇಲಾಖೆಯು ಉಲ್ಲೇಖಿಸಿದ ಮೊತ್ತವು ತನ್ನದೇ ದಾಖಲೆ ಪುಸ್ತಕಗಳಲ್ಲಿರುವ ಬ್ಯಾಲೆನ್ಸ್ಗೆ ಸರಿಹೊಂದದೆ ಇರುವುದನ್ನು ಬ್ಯಾಂಕ್ ಪತ್ತೆ ಮಾಡಿತು. ಈ ವ್ಯತ್ಯಾಸವು ದೀರ್ಘವಾದ ಆಂತರಿಕ ಪರಿಶೀಲನೆಗೆ ಕಾರಣವಾಯಿತು. ಫೆಬ್ರವರಿ 18ರಿಂದ ಆರಂಭಿಸಿ ನಂತರದ ದಿನಗಳಲ್ಲಿ ಹರ್ಯಾಣ ಸರ್ಕಾರದ ಇತರ ವಿಭಾಗಗಳು ತಮ್ಮ ಖಾತೆಯನ್ನು ಮುಚ್ಚಿ ಹಣವನ್ನು ಬೇರೆಡೆಗೆ ವರ್ಗಾಯಿಸುವಂತೆ ಬೇಡಿಕೆ ಸಲ್ಲಿಸಲಾರಂಭಿಸಿದವು. ಪ್ರತಿಯೊಬ್ಬರ ಬೇಡಿಕೆಗೂ ಮತ್ತು ಬ್ಯಾಂಕ್ನ ವ್ಯವಸ್ಥೆಯಲ್ಲಿರುವ ಮೊತ್ತಕ್ಕೂ ಹೊಂದಿಕೆಯಾಗುತ್ತಿರಲಿಲ್ಲ.

ಪ್ರಾಥಮಿಕ ಆಂತರಿಕ ಪರಿಶೀಲನೆಯಲ್ಲಿ ಬ್ಯಾಂಕಿನ ಚಂಡೀಗಢದ ಶಾಖೆಯಲ್ಲಿ ಹರ್ಯಾಣ ಸರ್ಕಾರ- ಸಂಬಂಧಿತ ಖಾತೆಗಳ ನಿರ್ದಿಷ್ಟ ಸಮೂಹದಲ್ಲಿ ಅಕ್ರಮಗಳು ಕೇಂದ್ರೀಕೃತವಾಗಿರುವುದು ಬಹಿರಂಗವಾಗಿದೆ.

ಷೇರು ಮಾರುಕಟ್ಟೆಯಲ್ಲಿ ತಲ್ಲಣ

ಸ್ಟಾಕ್ ಎಕ್ಸ್ಚೇಂಜ್ಗಳಲ್ಲಿ ಸಲ್ಲಿಸಲಾದ ಅಧಿಕೃತ ವಿವರಗಳಲ್ಲಿ ಈ ಸಮಸ್ಯೆ ಶಾಖೆಯ ಇತರ ಗ್ರಾಹಕರಿಗೆ ವಿಸ್ತರಿಸುವುದಿಲ್ಲ ಎಂದು ಬ್ಯಾಂಕ್ ವಿಶ್ವಾಸ ವ್ಯಕ್ತಪಡಿಸಿದೆ. ಬ್ಯಾಂಕ್ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ ಬ್ಯಾಂಕಿನ ಕಾರ್ಪೋರೇಟ್ ಸಾಲದ ವಿಭಾಗದಲ್ಲಿ ವಂಚನೆಯಾಗಿದೆ.

ಪರಿಣಾಮವಾಗಿ ಐಡಿಎಫ್ಸಿ ಫಸ್ಟ್ ಬ್ಯಾಂಕ್ ಷೇರು ಸೋಮವಾರ ಆರಂಭಿಕ ವಹಿವಾಟಿನಲ್ಲಿ ನೆಲಕಚ್ಚಿದೆ. ಷೇರುಗಳು ಶೇ 20ರಷ್ಟು ಕುಸಿದಿವೆ.

ಆಂತರಿಕ ಖಾತೆಗಳು ಮತ್ತು ಬಾಹ್ಯ ಹೇಳಿಕೆಗಳ ನಡುವಿನ ವ್ಯತ್ಯಾಸದ ಶಂಕಿತ ಮೊತ್ತವು ಸರಿಸುಮಾರು 590 ಕೋಟಿ ರೂ.ಗಳಷ್ಟು ಇದೆ ಎಂದು ಹೇಳಲಾಗಿದೆ. ಹಾಗಿದ್ದರೂ ಅಂತಿಮ ಪರಿಣಾಮವು ವಸೂಲಿ, ವಿಮೆ, ಹಕ್ಕುಗಳ ದೃಢೀಕರಣ ಮತ್ತು ಕಾನೂನು ಪ್ರಕ್ರಿಯೆಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಬ್ಯಾಂಕ್ ಹೇಳಿದೆ.

ಬ್ಯಾಂಕ್ನ ಹಣಕಾಸು ಸ್ಥಿತಿಯ ಮೇಲೆ ಪರಿಣಾಮ

590 ಕೋಟಿ ರೂ. ವಂಚನೆಯು ಬ್ಯಾಂಕಿನ ನಿವ್ವಳ ಲಾಭದ ಮೇಲೆ ನೇರ ಪರಿಣಾಮ ಬೀರಲಿದೆ. ನಿಯಮಗಳ ಪ್ರಕಾರ ಯಾವುದೇ ಸಾಲವನ್ನು ವಂಚನೆ ಎಂದು ಘೋಷಿಸಿದಾಗ ಬ್ಯಾಂಕ್ ಆ ಪೂರ್ಣ ಮೊತ್ತಕ್ಕೆ ‘ಪ್ರಾವಿಶನಿಂಗ್’ ಕೊಡಬೇಕಾಗುತ್ತದೆ. ಅಂದರೆ ತನ್ನ ಲಾಭದ ಹಣದಿಂದ ಈ ನಷ್ಟವನ್ನು ಸರಿದೂಗಿಸಲು ಹಣವನ್ನು ಮೀಸಲಿಡಬೇಕಾಗುತ್ತದೆ. ಇದರಿಂದ ಮುಂಬರುವ ತ್ರೈಮಾಸಿಕದ ಫಲಿತಾಂಶಗಳಲ್ಲಿ ಬ್ಯಾಂಕಿನ ಲಾಭಾಂಶ ಗಣನೀಯವಾಗಿ ಕುಸಿಯುವ ಸಾಧ್ಯತೆಯಿದೆ.

ಏನು ಕ್ರಮ ಕೈಗೊಳ್ಳಲಾಗಿದೆ?

ಪ್ರತಿಕ್ರಿಯೆಯಾಗಿ ಬ್ಯಾಂಕ್ ನಾಲ್ವರು ಉದ್ಯೋಗಿಗಳನ್ನು ಅಮಾನತುಗೊಳಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ವಂಚನೆಯ ವಿವರ ಸಲ್ಲಿಸಿದೆ. ಕಾನೂನು ಜಾರಿ ಸಂಸ್ಥೆಗಳು ಮತ್ತು ಶಾಸನಬದ್ಧ ಅಧಿಕಾರಿಗಳಿಗೆ ವರದಿ ಮಾಡಿದೆ.

ವಂಚನೆಗಳ ಬಗ್ಗೆ ತನಿಖೆ ಮತ್ತು ಮೇಲ್ವಿಚಾರಣೆಗೆ ಫೆಬ್ರವರಿ 20ರಂದು ವಿಶೇಷ ಸಮಿತಿ ರಚಿಸಿದೆ. ಮರುದಿನ ಆಡಿಟ್ ಸಮಿತಿ ಮತ್ತು ಪೂರ್ಣ ಮಂಡಳಿಯ ಸಭೆ ನಡೆಸಲಾಗಿದೆ. ಸ್ವತಂತ್ರ ಫಾರೆನ್ಸಿಕ್ ಆಡಿಟ್ಗಾಗಿ ಕೆಪಿಎಂಜಿಯನ್ನು (KPMG) ನೇಮಿಸಿರುವುದಾಗಿ ಬ್ಯಾಂಕ್ ಹೇಳಿದೆ. ಇತರ ಬ್ಯಾಂಕ್ಗಳಲ್ಲಿ ಅನುಮಾನಾಸ್ಪದ ಶಂಕಿತ ಫಲಾನುಭವಿ ಖಾತೆಗಳನ್ನು ಗುರುತಿಸಲು ಮಾಹಿತಿ ವಿನಿಮಯದ ಬೇಡಿಕೆಯನ್ನು ಸಲ್ಲಿಸಿದೆ.

ಹಿರಿಯ ವಿಶ್ಲೇಷಕರ ಜೊತೆಗಿನ ಮಾತುಕತೆಯಲ್ಲಿ ಹಿರಿಯ ಆಡಳಿತ ಮಂಡಳಿಯು ಇದನ್ನು ಕೆಲವು ಉದ್ಯೋಗಿಗಳು ಹೊರಗಿನ ವ್ಯಕ್ತಿಗಳ ಜೊತೆಗೂಡಿ ನಡೆಸಿದ ಅನಧಿಕೃತ ಚಟುವಟಿಕೆ ಎಂದು ವಿವರಿಸಿದೆ. ಬ್ಯಾಂಕ್ ಬಳಿ ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸಾಕಷ್ಟು ಬಂಡವಾಳವಿದೆ ಎಂದು ಹೇಳಿಕೊಂಡಿದೆ. ಆದರೆ ಅಂತಿಮ ಆರ್ಥಿಕ ಹೊಡೆತ ಹೇಗಿರಬಹುದು ಎನ್ನುವುದು ಎಷ್ಟು ಹಣ ಹಿಂಪಡೆಯಬಹುದು ಮತ್ತು ಯಾವ ವಿಮಾ ರಕ್ಷಣೆ ಒಳಗೊಂಡಿದೆ ಎಂಬುದರ ಆಧಾರದಲ್ಲಿ ಪರಿಹಾರವಾಗಲಿದೆ.

ಹರ್ಯಾಣ ಸರ್ಕಾರ ಬ್ಯಾಂಕ್ ಜೊತೆಗಿನ ಎಲ್ಲಾ ವ್ಯವಹಾರಗಳನ್ನು ನಿಲ್ಲಿಸಿದೆ. ಐಡಿಎಫ್ಸಿ ಫಸ್ಟ್ ಬ್ಯಾಂಕ್ ಬಲಿಷ್ಠವಾದ ಬಂಡವಾಳದ ಅಡಿಪಾಯ ಹೊಂದಿರುವ ಕಾರಣದಿಂದ ಈ ಒಂದು ಪ್ರಕರಣದಿಂದ ಬ್ಯಾಂಕ್ ಸಂಪೂರ್ಣವಾಗಿ ಕುಸಿಯದೆ ಇರಬಹುದು, ಆದರೆ ಅಲ್ಪಾವಧಿಯಲ್ಲಿ ಏರಳಿತಗಳು ಮುಂದುವರಿಯಲಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News