×
Ad

ಒಮಾನ್ ಕರಾವಳಿಯಲ್ಲಿ ಭಾರತೀಯ ನಾವಿಕರಿದ್ದ ಸರಕು ಹಡಗಿನ ಮೇಲೆ ದಾಳಿ : ಭಾರತ ಖಂಡನೆ

10 ಭಾರತೀಯ ನಾವಿಕರ ರಕ್ಷಣೆ, ಓರ್ವ ನಾಪತ್ತೆ

Update: 2026-07-12 14:34 IST

Photo | indiatoday

ಮಸ್ಕತ್: ಒಮಾನ್ ಕರಾವಳಿ ತೀರದ ಬಳಿ ಸರಕು ಸಾಗಣೆ ಹಡಗಿನ ಮೇಲೆ ಇರಾನ್ ಸೇನಾಪಡೆಗಳು ನಡೆಸಿರುವ ದಾಳಿಯನ್ನು ರವಿವಾರ ಭಾರತ ಖಂಡಿಸಿದೆ. ಈ ಹಡಗಿನಲ್ಲಿ 11 ಭಾರತೀಯ ನಾವಿಕರು ಪ್ರಯಾಣಿಸುತ್ತಿದ್ದರು ಎಂದು ಹೇಳಿರುವ ಭಾರತ, ಈ ಪೈಕಿ ಓರ್ವ ಭಾರತೀಯ ನಾವಿಕ ನಾಪತ್ತೆಯಾಗಿದ್ದಾರೆ ಎಂದು ಹೇಳಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, “ಇಂದು ಮುಂಜಾನೆ ಒಮಾನ್ ಕರಾವಳಿ ತೀರದ ಬಳಿ ಜಿಎಫ್ಎಸ್ ಗೆಲಾಕ್ಸಿ ಸರಕು ಸಾಗಣೆ ಹಡಗಿನ ಮೇಲೆ ನಡೆದಿರುವ ದಾಳಿಯನ್ನು ನಾವು ಖಂಡಿಸುತ್ತೇವೆ. ಈ ಹಗಡಿನಲ್ಲಿ 11 ಮಂದಿ ಭಾರತೀಯ ನಾವಿಕರಿದ್ದರು. ಈ ಪೈಕಿ 10 ಮಂದಿ ನಾವಿಕರನ್ನು ರಕ್ಷಿಸಲಾಗಿದ್ದು, ಓರ್ವ ಭಾರತೀಯ ನಾವಿಕ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ನಾಪತ್ತೆಯಾಗಿರುವ ಭಾರತೀಯ ನಾವಿಕನ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಮಸ್ಕತ್ ನಲ್ಲಿನ ಭಾರತೀಯ ರಾಯಭಾರಿಗಳು ಒಮಾನ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ” ಎಂದು ಹೇಳಿದೆ.

“ಒಮಾನ್ ನಲ್ಲಿರುವ ನಮ್ಮ ರಾಯಭಾರಿಗಳು ಪರಿಸ್ಥಿತಿಯ ಮೇಲೆ ನಿಕಟ ನಿಗಾ ವಹಿಸಿದ್ದಾರೆ. ಸದ್ಯ ನಡೆಯುತ್ತಿರುವ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಅವರು ಸಕ್ರಿಯವಾಗಿ ಒಮಾನ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಒಮಾನ್ ಅಧಿಕಾರಿಗಳ ಬೆಂಬಲಕ್ಕಾಗಿ ನಾವು ಧನ್ಯವಾದ ಸಲ್ಲಿಸುತ್ತೇವೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಾರ್ಮುಝ್ ಜಲಸಂಧಿಯನ್ನು ಮತ್ತೆ ಮುಚ್ಚಲಾಗಿದೆ ಎಂದು ಇರಾನ್ ಘೋಷಿಸಿದ ಬಳಿಕ, ಜಿಎಫ್ಎಕ್ಸ್ ಗೆಲಾಕ್ಸಿ ಸರಕು ಸಾಗಣೆ ಹಡಗಿನ ಮೇಲೆ ಇರಾನ್ ಎಚ್ಚರಿಕೆಯ ದಾಳಿ ನಡೆಸಿದೆ. ಸೂಕ್ಷ್ಮ ಕದನ ವಿರಾಮ ಮುರಿದು ಬಿದ್ದ ಬಳಿಕ, ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಮತ್ತೊಮ್ಮೆ ತೀವ್ರಗೊಂಡಿದೆ.

ಜಿಎಫ್ಎಕ್ಸ್ ಸರಕು ಸಾಗಣೆ ಹಡಗಿನ ಮೇಲೆ ದಾಳಿ ನಡೆಸಿದ ಬಳಿಕ, ಆ ಹಡಗು ಅನುಮತಿ ಇಲ್ಲದ ಮಾರ್ಗದಲ್ಲಿ ಸಂಚರಿಸುತ್ತಿತ್ತು ಎಂದು ಇರಾನ್ ಹೇಳಿದೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರತೀಕಾರದ ದಾಳಿ ನಡೆದರೆ, ಅದಕ್ಕೆ ಕಠೋರ ಪ್ರತಿಕ್ರಿಯೆ ನೀಡಲಾಗುವುದು ಎಂದು ಇರಾನ್ ಎಚ್ಚರಿಸಿದೆ.

ಈ ನಡುವೆ, ಮಧ್ಯಪ್ರಾಚ್ಯದಲ್ಲಿ ಸರಕು ಸಾಗಣೆ ಹಡಗುಗಳ ಮೇಲೆ ನಡೆಯುತ್ತಿರುವ ದಾಳಿಗಳ ಕುರಿತು ಭಾರತ ತನ್ನ ಕಳವಳವನ್ನು ಮತ್ತೊಮ್ಮೆ ಪುನರುಚ್ಚರಿಸಿದೆ.

“ಈ ಪ್ರಾಂತ್ಯದಲ್ಲಿ ಸರಕು ಸಾಗಣೆ ಹಡಗುಗಳ ಮೇಲಿನ ದಾಳಿ ಮುಂದುವರಿದಿರುವುದು ತೀವ್ರ ಕಳವಳಕಾರಿಯಾಗಿದೆ. ತಕ್ಷಣವೇ ಸಂಘರ್ಷವನ್ನು ಅಂತ್ಯಗೊಳಿಸಬೇಕು. ಈ ಪ್ರಾಂತ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯ ಮರುಸ್ಥಾಪನೆಗಾಗಿ ನಡೆಯುತ್ತಿರುವ ರಾಜತಾಂತ್ರಿಕ ಮಾತುಕತೆಗಳು ಮುಕ್ತಾಯಗೊಳ್ಳಬೇಕು ಎಂದು ನಾವು ಪುನರುಚ್ಚರಿಸುತ್ತೇವೆ” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

“ಈ ಪ್ರಾಂತ್ಯದಲ್ಲಿ ಸರಕು ಸಾಗಣೆ ಹಡಗುಗಳು ಹಾಗೂ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಗಳು ಕೊನೆಯಾಗಲೇಬೇಕು. ಅಂತಾರಾಷ್ಟ್ರೀಯ ಕಾನೂನುಗಳನ್ವಯ, ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಸರಕು ಸಾಗಣೆ ಹಡಗುಗಳ ಮುಕ್ತ ಹಾಗೂ ಅಡಚಣೆ ರಹಿತ ಸಂಚಾರವನ್ನು ಆದಷ್ಟೂ ಶೀಘ್ರವಾಗಿ ಮರುಸ್ಥಾಪಿಸಬೇಕು” ಎಂದು ಮನವಿ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News