5 ವರ್ಷದ ಮಗು ಹಿಂದ್ ರಜಬ್ ಹತ್ಯೆ: ಸೈನಿಕರ ವಿರುದ್ಧ ಇಸ್ರೇಲ್ ತನಿಖೆ
► ‘ನನಗೆ ತುಂಬಾ ಭಯವಾಗುತ್ತಿದೆ, ನನ್ನನ್ನು ಕರೆದುಕೊಂಡು ಹೋಗಿ' ಎಂದು ಫೋನ್ ಕರೆಯಲ್ಲಿ ಮನವಿ ಮಾಡುತ್ತಿದ್ದಾಗಲೇ ಹತ್ಯೆ! ► ಎರಡು ವರ್ಷಗಳ ಬಳಿಕ ತನಿಖೆಗೆ ಮುಂದಾದ IDF! ► ಜೇಸನ್ ಬರ್ಕ್ - theguardian. com ವರದಿ
ಹಿಂದ್ ರಜಬ್ | Photo Credit : Family Handout/AP
ಹೊಸದಿಲ್ಲಿ: ಗಾಝಾದಲ್ಲಿ ಐದು ವರ್ಷದ ಫೆಲೆಸ್ತೀನ್ ಬಾಲಕಿ ಹಿಂದ್ ರಜಬ್ ಮತ್ತು ಆಕೆಯ ಕುಟುಂಬದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಸೇನೆ (IDF) ತನ್ನ ಸೈನಿಕರ ವಿರುದ್ಧ ಮಿಲಿಟರಿ ಕ್ರಿಮಿನಲ್ ತನಿಖೆ ಆರಂಭಿಸಿದೆ. ಎರಡು ವರ್ಷಗಳ ಹಿಂದೆ ನಡೆದಿದ್ದ ಈ ಪ್ರಕರಣದಲ್ಲಿ ತನ್ನ ಸೇನೆಯ ಪಾತ್ರವನ್ನು ಈವರೆಗೆ ನಿರಾಕರಿಸುತ್ತಿದ್ದ ಇಸ್ರೇಲ್, ಇದೀಗ ತನ್ನ ಸೈನಿಕರೇ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.
ಈ ಬೆಳವಣಿಗೆಗೆ CNN ವರದಿ ಪ್ರಮುಖ ಕಾರಣವಾಗಿದೆ. ವರದಿ ಪ್ರಕಟವಾದ ಬಳಿಕ ಇಸ್ರೇಲ್ ಸೇನೆ ತನ್ನ ಹಿಂದಿನ ನಿಲುವನ್ನು ಬದಲಿಸಿ ತನಿಖೆ ಆರಂಭಿಸಿರುವುದಾಗಿ ಹೇಳಿದೆ.
ಏನಾಗಿತ್ತು?
2024ರ ಜನವರಿಯಲ್ಲಿ ಉತ್ತರ ಗಾಝಾದ ತಲ್ ಅಲ್-ಹವಾ ಪ್ರದೇಶದಲ್ಲಿ ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳಲು ಹಿಂದ್ ರಜಬ್ ತನ್ನ ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಸೋದರಸಂಬಂಧಿಗಳೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಳು.
ಈ ವೇಳೆ ಇಸ್ರೇಲಿ ಟ್ಯಾಂಕ್ ಗಳು ನಾಗರಿಕರು ಪ್ರಯಾಣಿಸುತ್ತಿದ್ದ ಕಾರನ್ನು ಸುತ್ತುವರಿದು ಗುಂಡಿನ ದಾಳಿ ನಡೆಸಿದವು ಎಂಬ ಆರೋಪವಿದೆ. ಕಾರಿನಲ್ಲಿದ್ದ ಐವರು ವಯಸ್ಕರು ಸ್ಥಳದಲ್ಲೇ ಮೃತಪಟ್ಟರು.
15 ವರ್ಷದ ಸೋದರಸಂಬಂಧಿ ಲಯಾನ್ ಹಮಾದೆಹ್ ಹೇಗೋ ಫೋನ್ ಮಾಡಿ ಫೆಲೆಸ್ತೀನ್ ರೆಡ್ ಕ್ರೆಸೆಂಟ್ ಸಂಸ್ಥೆಯ ಸಹಾಯ ಕೋರಿದಳು. ಕರೆಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲೇ ಆಕೆಯ ಮೇಲೂ ಗುಂಡಿನ ದಾಳಿ ನಡೆದಿದ್ದು, ಲಯಾನ್ ಮೃತಪಟ್ಟಳು. ಆಕೆ ನರಳುತ್ತಾ ಜೀವಬಿಟ್ಟ ಕ್ಷಣದ ಆಡಿಯೋ ಬಳಿಕ ವ್ಯಾಪಕವಾಗಿ ಹರಿದಾಡಿತು.
ಕಾರಿನಲ್ಲಿದ್ದವರ ಪೈಕಿ ಐದು ವರ್ಷದ ಹಿಂದ್ ರಜಬ್ ಮಾತ್ರ ಜೀವಂತವಾಗಿದ್ದಳು.
‘ನನಗೆ ತುಂಬಾ ಭಯವಾಗುತ್ತಿದೆ’
ಹಿಂದ್ ರಜಬ್ ಕಾರಿನಲ್ಲಿದ್ದ ಶವಗಳ ನಡುವೆ ಒಂಟಿಯಾಗಿ ಕುಳಿತು ರೆಡ್ ಕ್ರೆಸೆಂಟ್ ಸಿಬ್ಬಂದಿಯೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ದೂರವಾಣಿಯಲ್ಲಿ ಮಾತನಾಡಿದ್ದಳು.
‘ನನಗೆ ತುಂಬಾ ಭಯವಾಗುತ್ತಿದೆ. ದಯವಿಟ್ಟು ಬಂದು ನನ್ನನ್ನು ಕರೆದುಕೊಂಡು ಹೋಗಿ’ ಎಂದು ಆಕೆ ಪದೇಪದೇ ಮನವಿ ಮಾಡಿದ್ದಳು.
ರಕ್ಷಣಾ ಸಿಬ್ಬಂದಿ ಆಕೆಗೆ ಧೈರ್ಯ ತುಂಬಿ, ಸ್ಥಳಕ್ಕೆ ಆಂಬುಲೆನ್ಸ್ ಕಳುಹಿಸಲು ಇಸ್ರೇಲ್ ಸೇನೆಯಿಂದ ಅನುಮತಿ ಪಡೆದರು ಎಂದು ವರದಿಯಾಗಿದೆ.
ಅನುಮತಿ ಪಡೆದ ಬಳಿಕ ರೆಡ್ ಕ್ರೆಸೆಂಟ್ ನ ಆಂಬುಲೆನ್ಸ್ ಹಿಂದ್ ರಜಬ್ ಳನ್ನು ರಕ್ಷಿಸಲು ಸ್ಥಳದತ್ತ ತೆರಳಿತು.
ಆದರೆ ಆಂಬುಲೆನ್ಸ್ ಮೇಲೆಯೇ ಇಸ್ರೇಲಿ ಟ್ಯಾಂಕ್ ಗಳಿಂದ ಶೆಲ್ ದಾಳಿ ನಡೆಯಿತು ಎಂಬ ಆರೋಪವಿದೆ. ರಕ್ಷಣೆಗೆ ತೆರಳಿದ್ದ ಪ್ಯಾರಾಮೆಡಿಕ್ಗಳು ಮೃತಪಟ್ಟರು. ಹಿಂದ್ ರಜಬ್ ಕೂಡ ಬದುಕುಳಿಯಲಿಲ್ಲ.
12 ದಿನಗಳ ಬಳಿಕ ಪತ್ತೆಯಾದ ಮೃತದೇಹಗಳು
ಘಟನೆ ನಡೆದ ಬಳಿಕ 12 ದಿನಗಳ ಕಾಲ ಆ ಪ್ರದೇಶಕ್ಕೆ ಯಾರಿಗೂ ತೆರಳಲು ಇಸ್ರೇಲ್ ಅವಕಾಶ ನೀಡಲಿಲ್ಲ ಎಂದು ವರದಿಯಾಗಿದೆ.
ಸೇನಾ ಟ್ಯಾಂಕ್ಗಳು ಅಲ್ಲಿಂದ ಹಿಂದಕ್ಕೆ ಸರಿದ ಬಳಿಕ ಸ್ಥಳಕ್ಕೆ ತೆರಳಿದಾಗ, ಸಂಪೂರ್ಣ ಜಖಂಗೊಂಡ ಕಾರಿನಲ್ಲಿ ಹಿಂದ್ ರಜಬ್ ಮತ್ತು ಆಕೆಯ ಕುಟುಂಬದವರ ಕೊಳೆತ ಶವಗಳು ಪತ್ತೆಯಾದವು.
ಸ್ವಲ್ಪ ದೂರದಲ್ಲಿ ಸಂಪೂರ್ಣ ಭಸ್ಮಗೊಂಡಿದ್ದ ಆಂಬುಲೆನ್ಸ್ ಹಾಗೂ ರಕ್ಷಣಾ ಕಾರ್ಯಕರ್ತರ ಛಿದ್ರಗೊಂಡ ದೇಹಗಳೂ ಪತ್ತೆಯಾದವು.
ಇಷ್ಟೆಲ್ಲ ಪುರಾವೆಗಳು ಪತ್ತೆಯಾದರೂ ಇಸ್ರೇಲ್ ಸೇನೆ, ‘ನಾವು ಆ ಪ್ರದೇಶದಲ್ಲೇ ಇರಲಿಲ್ಲ’ ಎಂದು ಹೇಳಿತ್ತು.
ಈಗ ಅದೇ ಸೇನೆ ತನ್ನ ಸೈನಿಕರ ವಿರುದ್ಧ ಮಿಲಿಟರಿ ಕ್ರಿಮಿನಲ್ ತನಿಖೆ ಆರಂಭಿಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ರಫಾದಲ್ಲೂ ಆಂಬುಲೆನ್ಸ್ಗಳ ಮೇಲೆ ದಾಳಿ
ಹಿಂದ್ ರಜಬ್ ಪ್ರಕರಣದ ಜತೆಗೆ 2025ರ ಮಾರ್ಚ್ನಲ್ಲಿ ರಫಾದಲ್ಲಿ ನಡೆದ ಮತ್ತೊಂದು ಘಟನೆಗೂ ಇಸ್ರೇಲ್ ಸೇನೆ ವಿರುದ್ಧ ಆರೋಪ ಕೇಳಿಬಂದಿತ್ತು.
ಗಾಯಾಳುಗಳನ್ನು ರಕ್ಷಿಸಲು ತೆರಳುತ್ತಿದ್ದ ಆಂಬುಲೆನ್ಸ್ಗಳ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಲಾಗಿತ್ತು. ಪ್ಯಾರಾಮೆಡಿಕ್ ಸಿಬ್ಬಂದಿ ಮೃತಪಟ್ಟಿದ್ದರು. ಆಂಬುಲೆನ್ಸ್ಗಳಲ್ಲಿದ್ದ ಶವಗಳನ್ನು ಹೊರತೆಗೆಯಲೂ ಅವಕಾಶ ನೀಡದೆ ಬುಲ್ಡೋಜರ್ಗಳ ಮೂಲಕ ಬೃಹತ್ ಹೊಂಡ ತೋಡಿ ಎಲ್ಲರನ್ನೂ ಒಟ್ಟಿಗೆ ಹೂಳಲಾಗಿತ್ತು ಎಂಬ ಆರೋಪವೂ ಕೇಳಿಬಂದಿತ್ತು.
ಈ ಪ್ರಕರಣಕ್ಕೂ ಸಂಬಂಧಿಸಿದಂತೆ ಇಸ್ರೇಲ್ ಇದೀಗ ತನಿಖೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಸಾಕ್ಷ್ಯಗಳ ದಾಖಲೀಕರಣ
ಗಾಝಾದಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಸಾಕ್ಷ್ಯಗಳನ್ನು ಫೆಲೆಸ್ತೀನ್ ಜನರು ದಾಖಲಿಸುತ್ತಿದ್ದಾರೆ. ಯುದ್ಧದ ಆರಂಭದಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮೃತರ ಸಂಖ್ಯೆಯನ್ನು ಅನುಮಾನಿಸಿದ್ದ ಸಂದರ್ಭದಲ್ಲಿ, ಫೆಲೆಸ್ತೀನ್ ಆರೋಗ್ಯ ಸಚಿವಾಲಯ ಮೃತಪಟ್ಟ ಪ್ರತಿಯೊಬ್ಬ ನಾಗರಿಕನ ಹೆಸರು, ವಯಸ್ಸು ಮತ್ತು ಗುರುತಿನ ಚೀಟಿ ಸಂಖ್ಯೆಯ ವಿವರಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.
ಹಿಂದ್ ರಜಬ್ ಸಾವಿಗೂ ಮುನ್ನ ರಕ್ಷಣಾ ಸಿಬ್ಬಂದಿಯೊಂದಿಗೆ ನಡೆಸಿದ ಸುಮಾರು ಮೂರು ಗಂಟೆಗಳ ದೂರವಾಣಿ ಸಂಭಾಷಣೆಯ ಆಡಿಯೋ ಕೂಡ ಪ್ರಕರಣದ ಪ್ರಮುಖ ಸಾಕ್ಷ್ಯವಾಗಿ ಉಳಿದಿದೆ.
‘ದ ವಾಯ್ಸ್ ಆಫ್ ಹಿಂದ್ ರಜಬ್’ ಚಿತ್ರವು ಜಾಗತಿಕ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದ್ದು, ಆಸ್ಕರ್ ಪ್ರಶಸ್ತಿ ಅಂಗಳದಲ್ಲೂ ಗಮನ ಸೆಳೆದಿದೆ.
ಯುದ್ಧಾಪರಾಧಗಳ ವಿರುದ್ಧ ಫೌಂಡೇಶನ್
ಬ್ರಸೆಲ್ಸ್ ಕೇಂದ್ರವಾಗಿ ಸ್ಥಾಪನೆಯಾದ ‘ಹಿಂದ್ ರಜಬ್ ಫೌಂಡೇಶನ್’ ಇಸ್ರೇಲಿ ಯುದ್ಧಾಪರಾಧಗಳ ಆರೋಪ ಎದುರಿಸುತ್ತಿರುವ ಸೈನಿಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ.
ಗಾಝಾದಲ್ಲಿ ಮನೆಗಳನ್ನು ಧ್ವಂಸಗೊಳಿಸಿ, ಮಕ್ಕಳ ಆಟಿಕೆಗಳನ್ನು ಒಡೆದು ಹಾಕಿ ಸಂಭ್ರಮಿಸುತ್ತಾ TikTokನಲ್ಲಿ ವಿಡಿಯೊಗಳನ್ನು ಹಂಚಿಕೊಂಡಿದ್ದ IDF ಸೈನಿಕರ ಮುಖ ಮತ್ತು ವಿವರಗಳನ್ನು ವಿಶ್ಲೇಷಿಸಿ ದಾಖಲಿಸಲಾಗಿದೆ ಎಂದು ಫೌಂಡೇಶನ್ ಹೇಳಿದೆ.
ಈ ಸೈನಿಕರು ವಿದೇಶ ಪ್ರವಾಸಕ್ಕೆ ತೆರಳಿದಾಗ ಅಲ್ಲಿನ ಸ್ಥಳೀಯ ನ್ಯಾಯಾಲಯಗಳಲ್ಲಿ ಯುದ್ಧಾಪರಾಧ ಪ್ರಕರಣ ದಾಖಲಿಸಲು ಪ್ರಯತ್ನಿಸಲಾಗುತ್ತಿದೆ. ಅರ್ಜೆಂಟೀನಾಕ್ಕೆ ಪ್ರವಾಸ ಹೋಗಿದ್ದ ಇಸ್ರೇಲಿ ಸೈನಿಕನೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದ್ದರಿಂದ ಆತ ದೇಶ ಬಿಟ್ಟು ತೆರಳಬೇಕಾಯಿತು ಎಂಬ ಉದಾಹರಣೆಯನ್ನೂ ಉಲ್ಲೇಖಿಸಲಾಗಿದೆ.
ಭಾರತವೂ ಪ್ರವಾಸ ತಾಣ?
ಯೂರೋಪ್ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಬಂಧನದ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಇಸ್ರೇಲಿ ಸೈನಿಕರಿಗೆ ಭಾರತ ಪ್ರಮುಖ ರಜಾದಿನಗಳ ತಾಣವಾಗಿ ಮಾರ್ಪಟ್ಟಿದೆ ಎಂಬ ಆರೋಪಗಳೂ ಕೇಳಿಬಂದಿವೆ.
ಹಿಮಾಚಲ ಪ್ರದೇಶ, ಗೋವಾ ಮತ್ತು ಕೇರಳದ ವರ್ಕಲಾದಂತಹ ಪ್ರವಾಸಿ ತಾಣಗಳಲ್ಲಿ ಇಸ್ರೇಲಿ ಸೈನಿಕರು ಸಂಚರಿಸುತ್ತಿದ್ದಾರೆ ಎನ್ನಲಾಗಿದೆ.
1949ರ ಜಿನೀವಾ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ. 1960ರ ಜಿನೀವಾ ಕನ್ವೆನ್ಷನ್ ಕಾಯ್ದೆಯ ಸೆಕ್ಷನ್ 3 ಮತ್ತು 4ರ ಪ್ರಕಾರ, ಜಗತ್ತಿನ ಯಾವುದೇ ಮೂಲೆಯಲ್ಲಿ ಮಾನವಕುಲದ ವಿರುದ್ಧ ಅಪರಾಧ ನಡೆದಿದ್ದರೂ, ಅದನ್ನು ಭಾರತದಲ್ಲೇ ನಡೆದ ಅಪರಾಧವೆಂದು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರವಿದೆ ಎಂಬ ವಾದವಿದೆ.
ಸಂವಿಧಾನದ 51(ಸಿ) ವಿಧಿಯು ಅಂತರರಾಷ್ಟ್ರೀಯ ಕಾನೂನುಗಳನ್ನು ಗೌರವಿಸುವಂತೆ ಸೂಚಿಸುತ್ತದೆ. ಇಂತಹ ಆರೋಪಗಳನ್ನು ಎದುರಿಸುತ್ತಿರುವ ಇಸ್ರೇಲಿ ಸೈನಿಕರಿಗೆ ಭಾರತದ ಪ್ರವಾಸಿ ತಾಣಗಳು ಆಶ್ರಯವಾಗುತ್ತಿರುವುದು ಗಂಭೀರ ವಿಪರ್ಯಾಸ ಎಂದು ಟೀಕಿಸಲಾಗಿದೆ.
ಇಸ್ರೇಲ್ನಲ್ಲಿ ದ್ವೇಷದ ಆರೋಪ
ಫೆಲೆಸ್ತೀನ್ ಜನರ ವಿರುದ್ಧದ ದ್ವೇಷ ಇಸ್ರೇಲಿ ಸಮಾಜದಲ್ಲೂ ಬೇರೂರಿದೆ ಎಂಬ ಆರೋಪಗಳಿವೆ.
ಗರ್ಭಿಣಿ ಫೆಲೆಸ್ತೀನ್ ಮಹಿಳೆಯ ಹೊಟ್ಟೆಯ ಮೇಲೆ ಬಂದೂಕು ಗುರಿಯಿಟ್ಟಿರುವ ಚಿತ್ರವನ್ನು ಮುದ್ರಿಸಿ, ‘ಒಂದು ಗುಂಡಿಗೆ ಎರಡು ಹಕ್ಕಿ’ ಎಂದು ಬರೆದ ಟಿ-ಶರ್ಟ್ಗಳನ್ನು ಅಲ್ಲಿನ ಬಲಪಂಥೀಯರು ಧರಿಸುತ್ತಾರೆ ಎಂಬ ಆರೋಪವೂ ಇದೆ.
ಇಂತಹ ಜನಾಂಗೀಯ ದ್ವೇಷದ ವಾತಾವರಣದಲ್ಲಿ ಮುಗ್ಧ ಮಕ್ಕಳ ಸಾವುಗಳು ಸಂಭ್ರಮದ ವಿಷಯಗಳಾಗುತ್ತವೆ ಎಂಬ ಟೀಕೆ ಕೇಳಿಬಂದಿದೆ.
ಕೊಲ್ಲಲ್ಪಟ್ಟವರಲ್ಲಿ ಶೇ 83ಕ್ಕೂ ಹೆಚ್ಚು ಮಂದಿ ನಿರಪರಾಧಿ ನಾಗರಿಕರು ಎಂದು ಹೇಳಲಾಗುತ್ತಿದ್ದರೂ, ಇಸ್ರೇಲ್ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸುತ್ತಲೇ ಬಂದಿದೆ ಎಂಬ ಟೀಕೆಯೂ ಇದೆ.
ತನಿಖೆಯ ವಿಶ್ವಾಸಾರ್ಹತೆ ಪ್ರಶ್ನೆ
ಇಸ್ರೇಲ್ ಸೇನೆಯ ಮಿಲಿಟರಿ ತನಿಖೆಗಳ ವಿಶ್ವಾಸಾರ್ಹತೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.
ಹತ್ತಾರು ಸಾವಿರ ಜನರ ಹತ್ಯೆಯಾದ ಪ್ರಕರಣಗಳಲ್ಲಿ ಇಸ್ರೇಲ್ ಈವರೆಗೆ ಸುಮಾರು 150 ತನಿಖೆಗಳನ್ನು ನಡೆಸಿದೆ. ಆದರೆ ಅವುಗಳಲ್ಲಿ ಒಬ್ಬನೇ ಒಬ್ಬ ಅಧಿಕಾರಿಗೆ ಕಠಿಣ ಶಿಕ್ಷೆಯಾಗಿಲ್ಲ ಎಂಬ ಆರೋಪವಿದೆ.
ಹೀಗಾಗಿ ಹಿಂದ್ ರಜಬ್ ಪ್ರಕರಣದ ತನಿಖೆಯೂ ಜಾಗತಿಕ ಆಕ್ರೋಶ ತಣಿಸುವ ಪ್ರಯತ್ನವಷ್ಟೇ ಎಂಬ ಟೀಕೆ ಕೇಳಿಬಂದಿದೆ. ಇಡೀ ಆಡಳಿತದ ವಿರುದ್ಧವೇ ಯುದ್ಧಾಪರಾಧದ ಆರೋಪಗಳಿರುವಾಗ ಒಬ್ಬ ಅಥವಾ ಕೆಲ ಸೈನಿಕರ ವಿರುದ್ಧ ತನಿಖೆ ನಡೆಸುವುದರಿಂದ ಹೊಣೆಗಾರಿಕೆ ನಿಗದಿಯಾಗುವುದಿಲ್ಲ ಎಂಬ ವಾದವೂ ಇದೆ.
ಸದ್ದಾಂ ಹುಸೇನ್ ವಿಚಾರಣೆಯಲ್ಲಿ ನ್ಯಾಯದ ಮುಖವಾಡ ತೊಟ್ಟು ಕೊನೆಗೆ ಸಂಚು ಬಯಲಾದಂತೆ, ಇಸ್ರೇಲ್ನ ತನಿಖೆಗಳೂ ಕೇವಲ ಸೋಗಲಾಡಿತನ ಎಂಬ ಟೀಕೆಯೂ ಇದೆ.
ಇತಿಹಾಸದಲ್ಲಿ ಉಳಿದ ಧ್ವನಿ
ನಾಝಿ ದೌರ್ಜನ್ಯದ ಕರಾಳತೆಯನ್ನು ಆ್ಯನ್ ಫ್ರಾಂಕ್ ಅವರ ದಿನಚರಿ ಜಗತ್ತಿಗೆ ಸಾರಿದಂತೆ, 21ನೇ ಶತಮಾನದ ಗಾಝಾದ ಕ್ರೌರ್ಯವನ್ನು ಹಿಂದ್ ರಜಬ್ನ ಕೊನೆಯ ಕ್ಷಣಗಳ ಧ್ವನಿ ಜಗತ್ತಿನ ಮುಂದಿಟ್ಟಿದೆ.
ತನ್ನನ್ನು ರಕ್ಷಿಸಲು ಯಾರಾದರೂ ಬರಲಿ ಎಂದು ಟ್ಯಾಂಕ್ಗಳ ಸದ್ದಿನ ನಡುವೆ ಆ ಪುಟ್ಟ ಮಗು ಮಾಡಿದ ಮನವಿ ಇಂದಿಗೂ ಕೇಳಿಬರುತ್ತಿದೆ.
ಹಿಂದ್ ರಜಬ್ ಪ್ರಕರಣದ ತನಿಖೆ ಇಸ್ರೇಲಿ ಸೇನೆಯ ಹೊಣೆಗಾರಿಕೆ, ಗಾಝಾದಲ್ಲಿ ನಡೆದಿರುವ ದೌರ್ಜನ್ಯಗಳು ಮತ್ತು ಯುದ್ಧಾಪರಾಧಗಳ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆ ಇದೆ.