Photo Credit : PTI

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ನಂತರ ಸುಮಾರು 600 ಮಕ್ಕಳು ಪತ್ತೆಯಾಗಿಲ್ಲ. ಶುಕ್ರವಾರದ ವೇಳೆಗೆ ಸಾವಿನ ಸಂಖ್ಯೆ 1,282 ಕ್ಕೆ ಏರಿದ್ದು, 4,700ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಠ್ಮಂಡುವಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸಾವನ್ನಪ್ಪುವುದರೊಂದಿಗೆ ಒಟ್ಟು ಮೃತರ ಸಂಖ್ಯೆ 1,282 ಕ್ಕೆ ತಲುಪಿದೆ. ರಸುವಾದಲ್ಲಿ ಅಂದಾಜು 280 ಮಕ್ಕಳು ಮತ್ತು ನೆರೆಯ ಮಧ್ಯ ನೇಪಾಳದ ನುವಾಕೋಟ್‍ನಲ್ಲಿ ಸುಮಾರು 350 ಮಕ್ಕಳು ಪತ್ತೆಯಾಗಿಲ್ಲ ಎಂದು `ಕಠ್ಮಂಡು ಪೋಸ್ಟ್' ಪತ್ರಿಕೆ ವರದಿ ಮಾಡಿದೆ.

ರಸುವಾದಲ್ಲಿ 16 ಶಿಕ್ಷಕರು ಹಾಗೂ ನುವಾಕೋಟ್‍ನಲ್ಲಿ ಆರು ಶಿಕ್ಷಕರು ನಾಪತ್ತೆಯಾಗಿದ್ದಾರೆ. ರಸುವಾ, ನುವಾಕೋಟ್ ಮತ್ತು ಧಾಡಿಂಗ್‍ನಾದ್ಯಂತ 22 ಶಾಲೆಗಳ ಮೇಲೆ ಪರಿಣಾಮ ಬೀರಿದ್ದು, 12 ಸಂಸ್ಥೆಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ವರದಿ ಹೇಳಿದೆ.

9 ದಿನಗಳ ನಂತರ ಸುರಂಗದಿಂದ ಇಬ್ಬರು ಕಾರ್ಮಿಕರ ರಕ್ಷಣೆ

ಆಗಸ್ಟ್ 26 ರಂದು ನೇಪಾಳದ ಕೆಲವು ಭಾಗಗಳಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹದ ಒಂಬತ್ತು ದಿನಗಳ ನಂತರ, ರಸುವಾದ ತ್ರಿಶೂಲಿ-3ಎ ಜಲವಿದ್ಯುತ್ ಯೋಜನೆಯ ಸುರಂಗದೊಳಗೆ ಸಿಲುಕಿಕೊಂಡಿದ್ದ ಇಬ್ಬರು ಕಾರ್ಮಿಕರನ್ನು ಶುಕ್ರವಾರ ಜೀವಂತವಾಗಿ ರಕ್ಷಿಸಲಾಗಿದೆ. ಇದು ಭೂಗತವಾಗಿ ಸಿಲುಕಿರುವ ಇತರರು ಇನ್ನೂ ಜೀವಂತವಾಗಿರಬಹುದು ಎಂಬ ಭರವಸೆಯನ್ನು ಮೂಡಿಸಿದೆ.

ಜಲವಿದ್ಯುತ್ ಯೋಜನೆಗಳ ಸ್ಥಳಗಳಿಂದ ಸುಮಾರು 900 ಕಾರ್ಮಿಕರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಈ ಪ್ರದೇಶದಲ್ಲಿ ಪ್ರವಾಹದ ನೀರು, ಕೆಸರು ಮತ್ತು ತ್ಯಾಜ್ಯಗಳು ಕೊಚ್ಚಿಕೊಂಡು ಬಂದಾಗ ನೂರಾರು ಜನರು ಸುರಂಗಗಳ ಒಳಗಿದ್ದರು ಎಂದು ನಂಬಲಾಗಿದೆ. ರಕ್ಷಣಾ ತಂಡಗಳು ಕುಸಿದುಬಿದ್ದ ಸುರಂಗದ ಭಾಗಗಳು, ಅಪಾರ ಪ್ರಮಾಣದ ಕೆಸರು, ಬಂಡೆಗಳು ಮತ್ತು ಹಾನಿಗೊಳಗಾದ ರಸ್ತೆಗಳನ್ನು ತೆರವುಗೊಳಿಸಲು ಹೆಣಗಾಡುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor