Afzalpur | ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಬಿಜೆಪಿ-ಜೆಡಿಎಸ್ ಬೆಂಬಲ; ಪಕ್ಷಾತೀತ ಹೋರಾಟಕ್ಕೆ ಕರೆ

Update: 2026-07-18 18:24 IST

ಅಫಜಲಪುರ: ಭೀಮಾ ನದಿಗೆ ಉಜನಿ ಜಲಾಶಯದಿಂದ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ ಅಫಜಲಪುರ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಭೇಟಿ ನೀಡಿ ಬೆಂಬಲ ಸೂಚಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್, ಬರಗಾಲದಿಂದ ಅಫಜಲಪುರ ಭಾಗದ ರೈತರು ತೀವ್ರ ಸಂಕಷ್ಟದಲ್ಲಿದ್ದು, ರಾಜ್ಯ ಸರ್ಕಾರ ಕೂಡಲೇ ಭೀಮಾ ನದಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

“ರೈತರ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಂದಾಗಿ ಹೋರಾಟ ನಡೆಸಿದಾಗ ಮಾತ್ರ ಭೀಮಾ ನದಿಗೆ ಶಾಶ್ವತವಾಗಿ ನೀರು ಹರಿಸುವಲ್ಲಿ ಯಶಸ್ಸು ಸಾಧಿಸಬಹುದು. ಇದು ಯಾವುದೇ ಪಕ್ಷದ ಹೋರಾಟವಲ್ಲ, ರೈತರ ಬದುಕಿನ ಹೋರಾಟವಾಗಿದೆ,” ಎಂದು ಹೇಳಿದರು.

ಜೆಡಿಎಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಶಿವಕುಮಾರ ನಾಟೀಕಾರ ಮಾತನಾಡಿ, “ಭೀಮಾ ನದಿ ಉಳಿದರೆ ಮಾತ್ರ ಅಫಜಲಪುರದ ರೈತರು ಉಳಿಯಲು ಸಾಧ್ಯ. ರಾಜ್ಯ ಸರ್ಕಾರ ತಕ್ಷಣ 5 ಟಿಎಂಸಿ ನೀರು ಬಿಡುಗಡೆ ಮಾಡಬೇಕು. ಅಲ್ಲದೆ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರಬೇಕಿರುವ 15 ಟಿಎಂಸಿ ನೀರನ್ನು ಪಡೆಯಲು ಸರ್ವಪಕ್ಷ ನಿಯೋಗದೊಂದಿಗೆ ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು,” ಎಂದು ಒತ್ತಾಯಿಸಿದರು.

ಅಗತ್ಯವಿದ್ದರೆ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಜಲ ಆಯೋಗದ ಮಧ್ಯಸ್ಥಿಕೆ ಪಡೆಯಬೇಕು. ನ್ಯಾಯ ದೊರೆಯದಿದ್ದರೆ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ದಾವೆ ಹೂಡಿ ಕರ್ನಾಟಕದ ಪಾಲಿನ ನೀರನ್ನು ಬಿಡುಗಡೆ ಮಾಡಿಸಬೇಕು. ಈ ಹೋರಾಟ ಪಕ್ಷಾತೀತವಾಗಿ ಸಾಗಿದರೆ ಮಾತ್ರ ಯಶಸ್ವಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮುಖಂಡರಾದ ರಮೇಶ ಪಾಟೀಲ, ಲತೀಫ್ ಪಟೇಲ್, ಪ್ರಭಾವತಿ ಮೇತ್ರಿ, ನಾಮದೇವ ,ಶ್ರೀಮಂತ ಬಿರಾದಾರ, ರಮೇಶ ಶೆಟ್ಟಿ, ಭೀಮರಾಯ ತಳವಾರ, ರಾಜಕುಮಾರ ಉಕ್ಕಲಿ, ಮಹಾಂತಗೌಡ ಪಾಟೀಲ, ಮರೆಪ್ಪ ಜಮಾದಾರ, ಗುರು ಚಾಂದಕವಟೆ, ದುಂಡು ಘಾಣೂರ, ಸಿದ್ದಪ್ಪ ಜೇವರ್ಗಿ, ಸಿದ್ದಣಗೌಡ ಮಾಲಿ ಪಾಟೀಲ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳಿಂದ ನೂರಾರು ರೈತರು ಧರಣಿಯಲ್ಲಿ ಪಾಲ್ಗೊಂಡು ಬೆಂಬಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News