×
Ad

ಆಳಂದ | ಅವ್ಯವಹಾರ ಆರೋಪ : ಕೇಂದ್ರದ ತನಿಖಾ ತಂಡದಿಂದ ಪರಿಶೀಲನೆ

Update: 2025-08-28 15:00 IST

ಕಲಬುರಗಿ: ಆಳಂದ ತಾಲೂಕಿನಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಭಾರೀ ಅವ್ಯವಹಾರ ಆಗಿದೆ ಎನ್ನುವ ದೂರಿಗೆ ಸಂಬಂಧಿಸಿದಂತೆ ಕೇಂದ್ರದ ತನಿಖಾ ತಂಡ ಆಳಂದ ತಾಲೂಕಿನಲ್ಲಿ 2 ದಿನಗಳ ಕಾಲ ಒಡಾಡಿ ಪರಿಶೀಲನೆ ನಡೆಸಿತು.

ಆಳಂದ ತಾಲೂಕಿನಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಕೈಗೊಂಡಿದ್ದ 426 ತೆರೆದ ಬಾವಿಗಳ ಕಾಮಗಾರಿಯಲ್ಲಿ ಕಾರ್ಮಿಕರನ್ನು ಬಳಸದೇ ಯಂತ್ರಗಳನ್ನು ಬಳಸಿ ಕಾಮಗಾರಿ ಮಾಡಲಾಗಿದೆಯೆಂದು, ಕಾರ್ಮಿಕರಲ್ಲದೇ ಇರುವವರ ಹೆಸರಿನ ಮೇಲೆ ಎನ್‍ಎಂಆರ್ ತೆಗೆದು ಹಣ ಲೂಟಿ ಹೊಡೆಯಲಾಗಿದೆಯೆಂದು ಹಾಗೂ ಸತ್ತವರ ಹೆಸರಿನ ಮೇಲೆ ಕಾಮಗಾರಿ ಮಂಜೂರಿ ಮಾಡಲಾಗಿದೆಯೆಂದು ಸೇರಿದಂತೆ ಅನೇಕ ಆರೋಪಗಳನ್ನು ದಾಖಲಿಸಿ ಮಾಜಿ ಶಾಸಕ ಸುಭಾಷ ಆರ್.ಗುತ್ತೇದಾರ ಅವರು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ದೂರು ಸಲ್ಲಿಸಿದ್ದರು.

ದೂರಿಗೆ ಸಂಬಂಧಿಸಿದಂತೆ ತನಿಖಾ ತಂಡವು ಆಳಂದ ತಾಲೂಕಿನ ಕಡಗಂಚಿ, ಧರ್ಮವಾಡಿ, ಜಿಡಗಾ, ದೇಗಾಂವ, ನಸೀರವಾಡಿ, ಹಾಳ ತಡಕಲ ಗ್ರಾಮಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಪರಿಶೀಲನೆ ನಡೆಸಿತು.

ಆಳಂದ ತಾಲೂಕಿನ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ಕೈಗೊಂಡಿರುವ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ನಿಯಮಾವಳಿಗಳನ್ನು ಮೀರಿ ವ್ಯಾಪಕ ಭ್ರಷ್ಟಾಚಾರ ಎಸಗಲಾಗಿದೆ. ಕಾರ್ಮಿಕರನ್ನು ಬಳಸದೇ ಯಂತ್ರಗಳನ್ನು ಬಳಸಿ ನರೇಗಾ ಅಡಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಗ್ರಾಮದಲ್ಲಿ ವಾಸ ಆಗದೆ ಇರುವವರ ಹೆಸರನ್ನು, ವಿದ್ಯಾರ್ಥಿಗಳ ಹೆಸರನ್ನು, ಅರೆ ಸರ್ಕಾರಿ ನೌಕರರ ಹೆಸರನ್ನು, ಹೊರ ರಾಜ್ಯದಲ್ಲಿ ವಾಸವಾಗಿರುವವರ ಹೆಸರನ್ನು, ವಿದೇಶದಲ್ಲಿ ವಾಸವಾಗಿರುವವರ ಹೆಸರನ್ನು ಹಾಜರಿಯಲ್ಲಿ ಹಾಕಿ ವ್ಯಾಪಕ ಭ್ರಷ್ಟಾಚಾರ ಎಸಗಲಾಗಿದೆ. ಕೇವಲ ತಮ್ಮ ಪಕ್ಷದ ಮುಖಂಡರ, ಕಾರ್ಯಕರ್ತರ ಹೊಲಗಳಲ್ಲಿ ಕಾಮಗಾರಿಗಳನ್ನು ಇಟ್ಟು ಕಾಮಗಾರಿಗಳನ್ನು ಮಾಡಲಾಗಿದೆ ಎಂದು ದೂರಲಾಗಿತ್ತು.

ಕಾಮಗಾರಿಗಳನ್ನು ಕೇವಲ ಕಾಗದದಲ್ಲಿ ತೋರಿಸಿ, ಹಣವನ್ನು ದುರುಪಯೋಗ ಮಾಡಲಾಗಿದೆ. ಇಂತಹ ಭ್ರಷ್ಟಾಚಾರವನ್ನು ತಡೆಯಲು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಾರ್ವಜನಿಕ ನಿಗಾವಳಿ ಮತ್ತು ಸಾಮಾಜಿಕ ಪರಿಶೀಲನೆಗಳನ್ನು ಪ್ರೋತ್ಸಾಹಿಸಲಾಗುತ್ತದೆ. ಸಾಮಾಜಿಕ ಪರಿಶೀಲನೆಗಳ ಮೂಲಕ ಯೋಜನೆಯ ಕಾರ್ಯಕ್ಷಮತೆ ಮತ್ತು ನಿಖರತೆಯನ್ನು ಪರಿಶೀಲಿಸಬೇಕು ಎಂದು ತನಿಖಾ ತಂಡಕ್ಕೆ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News