×
Ad

ಅಫಜಲಪುರ ಆಸ್ಪತ್ರೆಯಲ್ಲಿ ಖೋಟಾ ಬಿಲ್‌, ನಕಲಿ ರಶೀದಿಗಳ ಮೂಲಕ ಸರಕಾರಿ ಹಣ ದುರ್ಬಳಕೆ ಆರೋಪ

ಉನ್ನತ ಮಟ್ಟದ ತನಿಖೆಗೆ ಜೆಡಿಎಸ್ ಒತ್ತಾಯ

Update: 2026-07-08 21:30 IST

ಅಫಜಲಪುರ: ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಇಲಾಖೆಯಿಂದ ಒದಗಿಸಲಾಗುವ ಪತ್ಯಾಹಾರ ಪೂರೈಕೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಜೆಡಿಎಸ್ ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ ಶಿವಕುಮಾರ ನಾಟಿಕಾರ ಆರೋಪಿಸಿದರು.

ಖೋಟಾ ಬಿಲ್ ಹಾಗೂ ನಕಲಿ ರಸೀದಿಗಳನ್ನು ಸೃಷ್ಟಿಸಿ 15 ತಿಂಗಳ ಅವಧಿಯಲ್ಲಿ 77.71 ಲಕ್ಷ ರೂ. ಸರ್ಕಾರಿ ಹಣವನ್ನು ದುರ್ಬಳಕೆ ಮಾಡಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

2024ರ ಜನವರಿಯಿಂದ 2025ರ ಮಾರ್ಚ್‌ವರೆಗೆ ರೋಗಿಗಳಿಗೆ ಹಾಲು, ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಪೂರೈಸಿದಂತೆ ದಾಖಲೆ ಸೃಷ್ಟಿಸಿ ಅನುದಾನ ಪಡೆದುಕೊಳ್ಳಲಾಗಿದೆ ಎಂದು ಅವರು ದೂರಿದರು. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಶಾರದಾ ಗ್ರಾಮೀಣಾಭಿವೃದ್ಧಿ ಹಾಗೂ ವಿವಿಧೋದ್ದೇಶ ಅಭಿವೃದ್ಧಿ ಸಂಸ್ಥೆಯ ಹೆಸರಿನಲ್ಲಿ ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅಭಯಕುಮಾರ ಅವರು ಖೋಟಾ ಬಿಲ್‌ಗಳನ್ನು ಸೃಷ್ಟಿಸಿ ಹಣ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು.

ಆಸ್ಪತ್ರೆಯಲ್ಲಿ ಪತ್ಯಾಹಾರ ತಯಾರಿಸಲು ಕ್ಯಾಂಟಿನ್ ವ್ಯವಸ್ಥೆಯೇ ಇಲ್ಲ. ಆಹಾರ ತಯಾರಿಕೆ ಹಾಗೂ ವಿತರಣೆಗೆ ಸಂಬಂಧಿಸಿದ ಸ್ಪಷ್ಟ ದಾಖಲೆಗಳೂ ಇಲ್ಲದಿದ್ದರೂ ಆಹಾರ ಪೂರೈಕೆ ಮಾಡಿದಂತೆ ಬಿಲ್ ಸಲ್ಲಿಸಿ ಹಣ ಪಡೆದಿರುವುದು ತನಿಖೆಯಿಂದ ಬೆಳಕಿಗೆ ಬರಲಿದೆ ಎಂದು ನಾಟಿಕಾರ ಹೇಳಿದರು.

ಈ ಪ್ರಕರಣದಲ್ಲಿ ಶಾಸಕ ಎಂ.ವೈ. ಪಾಟೀಲ ಹಾಗೂ ಅವರ ಪುತ್ರ ಅರುಣಕುಮಾರ ಪಾಟೀಲ ಅವರ ಕೈವಾಡವೂ ಇರಬಹುದೆಂಬ ಅನುಮಾನ ವ್ಯಕ್ತಪಡಿಸಿದ ಅವರು, ಈ ಸಂಬಂಧದ 54 ಪುಟಗಳ ದಾಖಲೆಗಳನ್ನು ಶಾಸಕರ ನಿವಾಸ ಹಾಗೂ ಅಫಜಲಪುರ ಕಾಂಗ್ರೆಸ್ ಕಚೇರಿಗೆ ಅಂಚೆ ಮೂಲಕ ಕಳುಹಿಸುತ್ತಿರುವುದಾಗಿ ತಿಳಿಸಿದರು.

ಶಾಸಕರಿಗೆ ಈ ಪ್ರಕರಣದೊಂದಿಗೆ ಯಾವುದೇ ಸಂಬಂಧವಿಲ್ಲದಿದ್ದರೆ ಸ್ವತಃ ಉನ್ನತ ಮಟ್ಟದ ತನಿಖೆ ನಡೆಸಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಅವರ ಮೇಲಿನ ಅನುಮಾನ ಮತ್ತಷ್ಟು ಬಲಗೊಳ್ಳಲಿದೆ ಎಂದು ಸವಾಲು ಹಾಕಿದರು.

ಈ ಕುರಿತು ಸಂಬಂಧಿತ ಇಲಾಖೆಯ ಹಿರಿಯ ಅಧಿಕಾರಿಗಳು, ಲೆಕ್ಕಪರಿಶೋಧನಾ ಇಲಾಖೆ ಹಾಗೂ ಆಹಾರ ಇಲಾಖೆಯ ಆಯುಕ್ತರಿಗೆ ಈಗಾಗಲೇ ದೂರು ಸಲ್ಲಿಸಲಾಗಿದೆ. ಶೀಘ್ರ ತನಿಖೆ ಆರಂಭಿಸದಿದ್ದರೆ ತಾಲೂಕು ಸಾರ್ವಜನಿಕ ಆಸ್ಪತ್ರೆ ಎದುರು ಸತ್ಯಾಗ್ರಹ ಹಾಗೂ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಡಾ. ಅಭಯಕುಮಾರ ಅವರು ಆಡಳಿತ ವೈದ್ಯಾಧಿಕಾರಿಯಾಗಿ ಕರ್ತವ್ಯ ವಹಿಸಿಕೊಂಡ ಬಳಿಕವೇ ಹಣಕಾಸು ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ ನಾಟಿಕಾರ, ನಕಲಿ ಬಿಲ್ ಹಾಗೂ ರಸೀದಿಗಳ ಮೂಲಕ ಸರ್ಕಾರಕ್ಕೆ ವಂಚನೆ ಎಸಗಲಾಗಿದೆ. ಹಿರಿಯ ಅಧಿಕಾರಿಗಳಿಂದ ಸಮಗ್ರ ತನಿಖೆ ನಡೆಸಿ ಆರೋಪ ಸಾಬೀತಾದರೆ ಕ್ರಿಮಿನಲ್ ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಸಿಂಗೆ, ರಾಜು ಉಕಲಿ, ಮರೇಪ್ಪ ಜಮಾದಾರ, ಶ್ರೀಶೈಲ ಪಾಟೀಲ, ಅಮೂಲ ಮೊರೆ ಇದ್ದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News