Kalaburagi | ಉದ್ಯಮಶೀಲತೆಯಿಂದ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಲಿ : ಮೋಹನ್ ಪಲೇಶ್
ಕಲಬುರಗಿ: ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಆತ್ಮವಿಶ್ವಾಸ, ಕೌಶಲ್ಯಾಭಿವೃದ್ಧಿ ಹಾಗೂ ನಿರಂತರ ಕಲಿಕೆಯ ಮನೋಭಾವ ಬೆಳೆಸಿಕೊಂಡರೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಆರ್ಐ ಜಿಲ್ಲೆ–3131ರ ಮಾಜಿ ಜಿಲ್ಲಾ ಗವರ್ನರ್ ಎರ್. ಮೋಹನ್ ಪಲೇಶ್ ಹೇಳಿದರು.
ನಗರದ ಸೂಪರ್ ಮಾರ್ಕೆಟ್ನಲ್ಲಿರುವ ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ (ಕೆಕೆಸಿಸಿಐ)ಯ ಶ್ರೀನಿವಾಸರಾವ್ ರಘೋಜಿ ಸಭಾಂಗಣದಲ್ಲಿ ಬುಧವಾರ ಡಾ. ಪಿ.ಎಸ್. ಶಂಕರ ಪ್ರತಿಷ್ಠಾನ, ಕೆಕೆಸಿಸಿಐ ಹಾಗೂ ಲಾಹೋಟಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಾಮೇಶಚಂದ್ರ ಲಾಹೋಟಿ ಸ್ಮಾರಕ ಉಪನ್ಯಾಸ–4 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಮತ್ತು ಜೀವನ್ ಜೀನೆ ಕಿ ಕಲಾ” ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಮಹಿಳೆಯರು ಕೇವಲ ಉದ್ಯೋಗ ಅರಸುವವರಾಗದೆ ಉದ್ಯೋಗ ಸೃಷ್ಟಿಸುವವರಾಗಬೇಕು. ಉದ್ಯಮಶೀಲತೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಮಾತ್ರವಲ್ಲ, ಸಮಾಜದ ಸಮಗ್ರ ಅಭಿವೃದ್ಧಿಗೂ ಪ್ರಮುಖ ಸಾಧನವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ, ಶ್ರೀಕಾಂತ್ ಲಾಹೋಟಿ, ಉಷಾ ಲಾಹೋಟಿ, ಅನುಶ್ರೀ ಲಾಹೋಟಿ, ನರೇಂದ್ರ ಬಡಶೇಷಿ, ಮಣಿಲಾಲ್ ಶಾ, ಉತ್ತಮ್ ಬಜಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.