Kalaburagi | ದಲಿತ, ದೃಷ್ಟಿವಿಕಲಚೇತನ ಅಧಿಕಾರಿಗೆ ಅನ್ಯಾಯ: ತಪ್ಪಿತಸ್ಥ ಅಧಿಕಾರಿಗಳ ಅಮಾನತಿಗೆ ಭೀಮ್ ಆರ್ಮಿ ಆಗ್ರಹ
ಕಲಬುರಗಿ: ನಿಷ್ಠಾವಂತ, ದಲಿತ ಹಾಗೂ ದೃಷ್ಟಿವಿಕಲಚೇತನ ಅಧಿಕಾರಿಯಾಗಿರುವ ಶ್ರೀನಿವಾಸ ಬಾಳುವಾಲೆ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ವ್ಯವಸ್ಥಿತವಾಗಿ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿರುವ ಭೀಮ್ ಆರ್ಮಿ ಜಿಲ್ಲಾ ಸಮಿತಿ, ಈ ಪ್ರಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಿ ನಿಷ್ಪಕ್ಷಪಾತ ಇಲಾಖಾ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದೆ.
ಭೀಮ್ ಆರ್ಮಿ ಜಿಲ್ಲಾ ಅಧ್ಯಕ್ಷ ಸೂರ್ಯಕಾಂತ ಜಿಡಗಾ ಅವರ ನೇತೃತ್ವದಲ್ಲಿ ಸಲ್ಲಿಸಿದ ಮನವಿಯಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ್, ಮಾಜಿ ಸಿಡಿಪಿಒಗಳಾದ ಶಿವಶರಣಪ್ಪ ಬುಶೆಟ್ಟಿ ಹಾಗೂ ಭೀಮರಾಯ ಕಣ್ಣೂರ ಅವರನ್ನು ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಲಾಗಿದೆ.
ಶ್ರೀನಿವಾಸ ಬಾಳುವಾಲೆ ಅವರು ಕಲಬುರಗಿ ನಗರ ಸಿಡಿಪಿಒ ಹುದ್ದೆ ವಹಿಸಿಕೊಳ್ಳುವ ಮುನ್ನ ನಡೆದ ನೇಮಕಾತಿ ಪ್ರಕ್ರಿಯೆಗಳಿಗೂ ಅವರ ಹೆಸರನ್ನು ಅನಗತ್ಯವಾಗಿ ಜೋಡಿಸಿ, ಇಲಾಖಾ ಕ್ರಮಕ್ಕೆ ಒಳಪಡಿಸುವ ಉದ್ದೇಶದಿಂದ ಪಿತೂರಿ ನಡೆಸಲಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಶ್ರೀನಿವಾಸ ಬಾಳುವಾಲೆ ಅವರ ವಿರುದ್ಧದ ಎಲ್ಲಾ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ಅವರಿಗೆ ನ್ಯಾಯ ಒದಗಿಸಬೇಕು. ಅಧಿಕಾರ ದುರ್ಬಳಕೆ, ದಾಖಲೆಗಳ ಅಕ್ರಮ ನಿರ್ವಹಣೆ ಹಾಗೂ ಸುಳ್ಳು ದೂರುಗಳ ಮೂಲಕ ಕಿರುಕುಳ ನೀಡಿದ ಆರೋಪದಡಿ ರಾಜಕುಮಾರ ರಾಠೋಡ್, ಶಿವಶರಣಪ್ಪ ಬುಶೆಟ್ಟಿ ಹಾಗೂ ಭೀಮರಾಯ ಕಣ್ಣೂರ ವಿರುದ್ಧ ಇಲಾಖಾ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭೀಮ್ ಆರ್ಮಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಭೀಮ್ ಆರ್ಮಿ ಜಿಲ್ಲಾ ಅಧ್ಯಕ್ಷ ಸೂರ್ಯಕಾಂತ ಜಿಡಗಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಬಂಗರಗಿ, ಜಿಲ್ಲಾ ಕಾರ್ಯದರ್ಶಿ ಸುಧೀರ ಹೊನ್ನಳ್ಳಿ, ಮುಖಂಡ ರಾಜಕುಮಾರ ಮೋಘಾ ಹಾಗೂ ಅಂಬೇಡ್ಕರ್ ಜನಪರ ವೇದಿಕೆಯ ಉಪಾಧ್ಯಕ್ಷ ಸಿದ್ಧಾರ್ಥ ಎಂ.ಕೆ. ಸೇರಿದಂತೆ ಹಲವರು ಉಪಸ್ಥಿತರಿದ್ದರು.