×
Ad

ಬಸವಾದಿ ಶರಣರು ಪ್ರಜ್ಞಾಪೂರ್ವಕ ಸಮಾಜವನ್ನು ರೂಪಿಸಿದ್ದಾರೆ : ಡಾ. ವಿವೇಕಾನಂದ್ ಸಜ್ಜನ್

Update: 2026-06-06 21:33 IST

ಬೀದರ್ : ಕಲ್ಯಾಣವು ವೈಜ್ಞಾನಿಕ ಮತ್ತು ವೈಚಾರಿಕ ಪರಂಪರೆಯ ನೆಲವಾಗಿದ್ದು, ಬಸವಾದಿ ಶರಣರು ಪ್ರಜ್ಞಾಪೂರ್ವಕ ಸಮಾಜವನ್ನು ರೂಪಿಸಿದ್ದಾರೆ ಎಂದು ಬೆಂಗಳೂರು ಅಲಯನ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವಿವೇಕಾನಂದ್ ಸಜ್ಜನ್ ಹೇಳಿದರು.

ಬಸವಕಲ್ಯಾಣ ನಗರದ ಬಿಕೆಡಿಬಿ ಸಭಾ ಭವನದಲ್ಲಿ ಬಸವೇಶ್ವರ್ ಪದವಿ ಕಾಲೇಜು ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಅರಿವಿನ ಪಯಣ, ಸಾಹಿತ್ಯ ಮತ್ತು ವೈಜ್ಞಾನಿಕ ಚಿಂತನೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಚನಗಳು ಹೊಸ ಆಲೋಚನೆಗಳು ಹುಟ್ಟಿಸಿದ ಸಾಹಿತ್ಯವಾಗಿವೆ ಎಂದರು.

ಶಿಕ್ಷಣ ಅರಿವು ವಿಸ್ತರಿಸುವ ದಾರಿಯಾಗಿದೆ. ಅದು ಯಾವುದು ಸರಿ, ಯಾವುದು ತಪ್ಪು ಎಂಬ ಆಲೋಚನೆ ಕಟ್ಟಿಕೊಡುತ್ತದೆ. ಅಧ್ಯಯನ ವ್ಯಾಪ್ತಿ ಹೆಚ್ಚಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಬಸವಕಲ್ಯಾಣ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಾ. ಶ್ರೀಕಾಂತ್ ಮೋಹನರಾವ್ ಅವರು ಮಾತನಾಡಿ, ಶಿಕ್ಷಣದಿಂದ ವಿಚಾರ ಮಾಡುವ ಮತ್ತು ವಿಮರ್ಶಿಸುವ ಗುಣ ಬೆಳೆಯುತ್ತದೆ. ಹನ್ನೆರಡನೇ ಶತಮಾನದ ಶರಣರು ವೈಚಾರಿಕ ಕ್ರಾಂತಿಯಿಂದ ಸಾಮಾಜಿಕ ಬದಲಾವಣೆ ತಂದರು. ಜಗತ್ತಿನಲ್ಲಿ ವಚನಕಾರರು ಕಾಯಕ, ದಾಸೋಹದಂತಹ ಬಹುದೊಡ್ಡ ಫಿಲಾಸಫಿ ಕಟ್ಟಿಕೊಟ್ಟಿದ್ದಾರೆ. ಯೂರೋಪಿಗಿಂತ ಮೊದಲೇ ಕಲ್ಯಾಣದಲ್ಲಿ ವೈಚಾರಿಕ ಚಿಂತನೆ ನಡೆದಿದೆ ಎಂದು ಹೇಳಿದರು.

ಭೀಮಾಶಂಕರ್ ಬಿರಾದಾರ್ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಈ ಕಾಲದ ಅಗತ್ಯವಾಗಿದೆ. ಅದರ ಜೊತೆಗೆ ಮಾನವೀಯ ಮೌಲ್ಯಗಳು ಮುಖ್ಯವಾಗಿದೆ. ಕೃತಕ ಬುದ್ಧಿಮತ್ತೆ ಹಾಗೂ ಗಣಕಯಂತ್ರಗಳು ಯೋಚಿಸುವ ಶಕ್ತಿ ಹೊಂದಿಲ್ಲ. ಮನುಷ್ಯ ಮಾತ್ರ ಆಲೋಚಿಸುವ, ವಿವೇಚಿಸುವ, ಅಳುವ, ನಗುವ, ಸಂವೇದನೆ ಹೊಂದಿದ್ದಾನೆ. ಯಂತ್ರಕ್ಕಿಂತ ಮನುಷ್ಯನ ಬದುಕು ದೊಡ್ಡದು ಎಂದರು.

ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ್ ರಗಟೆ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನಗಳೇ ಈ ಕಾಲದ ಚಲನೆ ನಿರ್ಧರಿಸಿವೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲ್ಲದೆ ಇಂದಿನ ಕಾಲ ಊಹಿಸಲು ಸಾಧ್ಯವಿಲ್ಲ. ಹಾಗಾಗಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಕುರಕೋಟೆ, ಕಾರ್ಯದರ್ಶಿ ಅಶೋಕ್ ನಾಗರಾಳೆ, ಸಹ ಕಾರ್ಯದರ್ಶಿ ಸುನಿಲಕುಮಾರ್ ರಾಯವಾಡೆ, ನಿರ್ದೇಶಕ ಬಸವರಾಜ್ ತೊಂಡಾರೆ, ಪುಷ್ಪಾವತಿ ಮಾಮಾ, ಬಸವೇಶ್ವರ್ ಪಿಯು ಕಾಲೇಜು ಪ್ರಾಚಾರ್ಯೆ ರುದ್ರಮಣಿ ಮಠಪತಿ, ಅಕ್ಕಮಹಾದೇವಿ ಕಾಲೇಜಿನ ಪ್ರಾಚಾರ್ಯೆ ಮಾಯಾ ಮುರಾಳೆ ಹಾಗೂ ಬಸವೇಶ್ವರ್ ಪಿಜಿ ಪ್ರಾಚಾರ್ಯೆ ಶಾಂತಲಾ ಪಾಟೀಲ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News