ಆಳಂದವನ್ನು ಬರಪೀಡಿತ ತಾಲೂಕು ಘೋಷಿಸುವಂತೆ ಬಿಜೆಪಿ ಆಗ್ರಹ

Update: 2026-07-27 17:01 IST

ಆಳಂದ: ತಾಲೂಕನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಏಕರಿಗೆ 50 ಸಾವಿರ ರೂ. ಪರಿಹಾರ ಮಂಜೂರು ಮಾಡಬೇಕು ಹಾಗೂ ಬಾಕಿ ಉಳಿದಿರುವ ಬೆಳೆ ವಿಮೆ ಮೊತ್ತವನ್ನು ತಕ್ಷಣ ರೈತರ ಖಾತೆಗೆ ಜಮಾ ಮಾಡಬೇಕು ಎಂದು ಮಾಜಿ ಶಾಸಕ ಸುಭಾಷ್ ಗುತ್ತೇದಾರ ಸರ್ಕಾರವನ್ನು ಆಗ್ರಹಿಸಿದರು.

ಸೋಮವಾರ ಆಳಂದ ಪಟ್ಟಣದ ಬಸ್ ನಿಲ್ದಾಣದ ಎದುರು ಆಳಂದ ಮಂಡಲ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸಮರ್ಪಕ ಮಳೆಯ ಕೊರತೆಯಿಂದ ತಾಲೂಕಿನಲ್ಲಿ ಬರದ ಛಾಯೆ ಆವರಿಸಿದ್ದು, ಬಿತ್ತನೆ ಮಾಡಿದ ಬೆಳೆಗಳು ಒಣಗಿ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ ಎಂದರು.

ಕೆರೆ-ಕಟ್ಟೆಗಳು, ಹಳ್ಳ-ಕೊಳ್ಳಗಳು ಹಾಗೂ ಇತರ ಜಲಮೂಲಗಳು ಬತ್ತುತ್ತಿದ್ದು, ಕುಡಿಯುವ ನೀರಿನ ಸಮಸ್ಯೆಯೂ ಗಂಭೀರವಾಗಿದೆ. ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಜೀವನ ನಿರ್ವಹಣೆಯೇ ದುಸ್ತರವಾಗಿದೆ ಎಂದು ಅವರು ಹೇಳಿದರು.

ಈ ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಕೃಷಿ ಚಟುವಟಿಕೆಗಳಿಗೆ ಭಾರೀ ಹೊಡೆತ ಬಿದ್ದಿದೆ. ಜೀವಜಲಕ್ಕಾಗಿ ಬೆಳೆಗಳು ಕಾಯುವಂತಾಗಿದ್ದು, ನಾಟಿ ಮಾಡಿದ ಹೊಲಗಳಲ್ಲಿ ಬೆಳೆ ನೆಲಕ್ಕಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಜೂನ್ 1ರಿಂದ ಜುಲೈ 13ರವರೆಗೆ ತಾಲೂಕಿನಾದ್ಯಂತ ನಿರೀಕ್ಷಿತ 218 ಮಿ.ಮೀ. ಮಳೆಯ ಪೈಕಿ ಕೇವಲ 192 ಮಿ.ಮೀ. ಮಳೆಯಷ್ಟೇ ದಾಖಲಾಗಿದ್ದು, ಹಲವು ಹೋಬಳಿಗಳಲ್ಲಿ ಮಳೆ ಕೊರತೆ ಗಂಭೀರವಾಗಿದೆ. ಪರಿಣಾಮ ಮುಂಗಾರು ಬಿತ್ತನೆ ಶೇ.43ರಷ್ಟು ಮಾತ್ರ ಪೂರ್ಣಗೊಂಡಿದೆ ಎಂದು ಕೃಷಿ ಇಲಾಖೆಯ ಅಂಕಿ-ಅಂಶಗಳನ್ನು ಉಲ್ಲೇಖಿಸಿದರು.

ಆಳಂದ ಹೋಬಳಿಯಲ್ಲಿ ಶೇ.42, ಖಜೂರಿ ಹೋಬಳಿಯಲ್ಲಿ ಶೇ.40ರಷ್ಟು ಮಳೆ ಕೊರತೆ ದಾಖಲಾಗಿದ್ದು, ನರೋಣಾ ವಲಯದಲ್ಲಿ ನಿರೀಕ್ಷಿತ 154 ಮಿ.ಮೀ. ಮಳೆಯ ಪೈಕಿ ಕೇವಲ 25 ಮಿ.ಮೀ. ಮಳೆಯಾಗಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ನಿಂಬರಗಾ ಹೋಬಳಿಯಲ್ಲೂ ಮಳೆ ಕೊರತೆ ತೀವ್ರವಾಗಿದೆ ಎಂದು ಹೇಳಿದರು.

ಬಿಜೆಪಿ ಮುಖಂಡ ಬಸವರಾಜ ಬಿರಾದಾರ ಮಾತನಾಡಿ, ತೇವಾಂಶದ ಕೊರತೆಯಿಂದ ಈಗಾಗಲೇ ಹಲವು ರೈತರ ಬೆಳೆ ಹಾನಿಗೊಳಗಾಗಿದೆ. ನೀರಾವರಿ ಸೌಲಭ್ಯ ಇರುವ ರೈತರು ಬೋರ್‌ವೆಲ್ ಹಾಗೂ ಬಾವಿಗಳ ನೀರನ್ನು ಬಳಸಿ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದು, ಮಳೆ ಆಶ್ರಿತ ರೈತರು ಮಾತ್ರ ಮಳೆಯ ನಿರೀಕ್ಷೆಯಲ್ಲೇ ದಿನ ಕಳೆಯುವಂತಾಗಿದೆ ಎಂದು ಹೇಳಿದರು.

ಸಂಜಯ ಮಿಸ್ಕಿನ್, ವೀರಣ್ಣಾ ಮಂಗಾಣೆ, ಹಣಮಂತ ಕಾಬಡೆ ಮಾತನಾಡಿದರು.

ಪ್ರತಿಭಟನೆಯಲ್ಲಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ರೈತ ಮೋರ್ಚಾ ಅಧ್ಯಕ್ಷ ನಾಗರಾಜ ಶೇಗಜಿ, ಹಿರಿಯ ಮುಖಂಡರಾದ ಮಲ್ಲಣ್ಣಾ ನಾಗೂರೆ, ಅಣ್ಣಾರಾವ ಪಾಟೀಲ ಕವಲಗಾ, ಶಿವಪ್ಪ ವಾರಿಕ, ಮಹಾದೇವಪ್ಪ ಪಾಟೀಲ, ಚಂದ್ರಕಾಂತ ಭೂಸನೂರ, ಆನಂದರಾವ ಪಾಟೀಲ ಕೋರಹಳ್ಳಿ, ಮಲ್ಲಿನಾಥ ಪರೇಣಿ, ನಾಗರಾಜ ದೇನಕ, ಹಣಮಂತ ಕಾಬಡೆ, ಆದಿನಾಥ ಹೀರಾ ಮಹಾದೇವಪ್ಪ ವಾಡೆ, ಕಲ್ಯಾಣಿ ದಾನಾಗೊಳ, ಪ್ರಕಾಶ ಸಣಮನಿ, ಮಾಣಿಕ ರಾಠೋಡ, ಶಿವಪ್ಪ ಘಂಟೆ, ವೀರಭದ್ರ ಖೂನೆ, ಕುಮಾರ ಬಂಡೆ, ಪ್ರಕಾಶ ಮಾನೆ, ಸೀತಾರಾಮ ಜಮಾದಾರ, ವೈಜನಾಥ ಜಿಡಗೆ, ಗುರು ಲಾವಣಿ, ಸುವರ್ಣಾ ಪಾಟೀಲ, ಉದಯ ಪಾಟೀಲ, ಗಣೇಶ ಓಣಮಶೆಟ್ಟಿ, ಬಸವರಾಜ ಹತ್ತರಕಿ, ಸುನೀಲ ಹಿರೋಳಿಕರ ಸೇರಿದಂತೆ ಬಿಜೆಪಿಯ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News