Kalaburagi | ಎಐ ಮೇಲೆ ಅತಿಯಾದ ಅವಲಂಬನೆ ಬೇಡ: ಪ್ರೊ.ಬಟ್ಟುಸತ್ಯನಾರಾಯಣ

ಹೊಸ ಬೋಧನಾ ಸಿಬ್ಬಂದಿಗೆ ಗ್ರಂಥಾಲಯ ಇ-ಸಂಪನ್ಮೂಲಗಳ ಬಳಕೆ ಕುರಿತು ಜಾಗೃತಿ ಕಾರ್ಯಕ್ರಮ

Update: 2026-07-27 15:44 IST

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕ್ಯಾಂಪಸ್‌ನಲ್ಲಿ ಹೊಸದಾಗಿ ಸೇರ್ಪಡೆಗೊಂಡ ಬೋಧನಾ ಸಿಬ್ಬಂದಿಗಾಗಿ ಗ್ರಂಥಾಲಯದ ಡಾ. ಎಸ್.ಆರ್. ರಂಗನಾಥನ್ ಸೆಮಿನಾರ್ ಹಾಲ್‌ನಲ್ಲಿ “ಗ್ರಂಥಾಲಯ ಇ-ಸಂಪನ್ಮೂಲಗಳ ಬಳಕೆ ಕುರಿತು ಜಾಗೃತಿ ಕಾರ್ಯಕ್ರಮ” ಆಯೋಜಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ, ಶಿಕ್ಷಕರು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸಬೇಕು. ಆದರೆ ಶೈಕ್ಷಣಿಕ ಬರವಣಿಗೆ ಮತ್ತು ಸಂಶೋಧನೆಗಾಗಿ ಎಐ ಮೇಲೆ ಅತಿಯಾದ ಅವಲಂಬನೆ ಹೊಂದಬಾರದು ಎಂದು ಸಲಹೆ ನೀಡಿದರು.

ಗ್ರಂಥಾಲಯ, ಓದುವಿಕೆ ಹಾಗೂ ಮೂಲ ಸಂಶೋಧನೆಯ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಎಐ ಮೇಲಿನ ಅತಿಯಾದ ಅವಲಂಬನೆಯು ಸ್ವತಂತ್ರ ಚಿಂತನೆ, ವಿಶ್ಲೇಷಣಾತ್ಮಕ ಸಾಮರ್ಥ್ಯ ಮತ್ತು ಸೃಜನಶೀಲತೆಯನ್ನು ಕುಗ್ಗಿಸುವ ಸಾಧ್ಯತೆ ಇದೆ. ಶಿಕ್ಷಕರ ಜ್ಞಾನ, ಸೃಜನಶೀಲತೆ ಹಾಗೂ ಶೈಕ್ಷಣಿಕ ಪ್ರಾಮಾಣಿಕತೆಯೇ ಗುಣಮಟ್ಟದ ಶಿಕ್ಷಣದ ಅಡಿಪಾಯವಾಗಿದೆ ಎಂದು ಹೇಳಿದರು.

ಡಿಜಿಟಲ್ ಯುಗದಲ್ಲಿ ಗುಣಮಟ್ಟದ ಶೈಕ್ಷಣಿಕ ಸಂಪನ್ಮೂಲಗಳು ಸುಲಭವಾಗಿ ಲಭ್ಯವಾಗುತ್ತಿದ್ದು, ಅವುಗಳನ್ನು ಬೋಧನೆ, ಸಂಶೋಧನೆ ಮತ್ತು ನಾವೀನ್ಯತೆಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಸಂಶೋಧನೆಯಲ್ಲಿ ಕೃತಿಚೌರ್ಯವನ್ನು ಸಂಪೂರ್ಣವಾಗಿ ತಪ್ಪಿಸಿ, ಸ್ವಂತ ಸಂಶೋಧನಾ ಬರವಣಿಗೆಯ ಶೈಲಿಯನ್ನು ಬೆಳೆಸಿಕೊಳ್ಳುವಂತೆ ಅವರು ಕರೆ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ವಾಣಿಜ್ಯ ವಿಭಾಗದ ಮುಖ್ಯಸ್ಥ ಹಾಗೂ ವ್ಯವಹಾರ ಅಧ್ಯಯನ ನಿಕಾಯದ ಡೀನ್ ಪ್ರೊ. ಪಾಂಡುರಂಗ ವಿ., ಡಿಜಿಟಲ್ ಸಂಪನ್ಮೂಲಗಳಿಂದ ಸಂಶೋಧನಾ ಕಾರ್ಯ ಹಿಂದೆಂದಿಗಿಂತ ಸುಲಭವಾಗಿದೆ ಎಂದು ಹೇಳಿದರು.

ವಿಶ್ವವಿದ್ಯಾಲಯದ ಗ್ರಂಥಪಾಲಕ ಡಾ. ಪಿ.ಎಸ್. ಕಟ್ಟಿಮನಿ ಸ್ವಾಗತಿಸಿ, ಕೇಂದ್ರ ಗ್ರಂಥಾಲಯದ ಇ-ಜರ್ನಲ್‌ಗಳು, ಆನ್‌ಲೈನ್ ಡೇಟಾಬೇಸ್‌ಗಳು, ಕೃತಿಚೌರ್ಯ ಪತ್ತೆ ತಂತ್ರಾಂಶ, ವ್ಯಾಕರಣ ಪರಿಷ್ಕರಣೆ ತಂತ್ರಾಂಶ ಸೇರಿದಂತೆ ವಿವಿಧ ಡಿಜಿಟಲ್ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಾಗಾರದ ಅಂಗವಾಗಿ ಗ್ರಂಥಾಲಯ ಇ-ಸಂಪನ್ಮೂಲಗಳು, ONOS, ಕೃತಿಚೌರ್ಯ ಪತ್ತೆ ಪರಿಕರಗಳು ಹಾಗೂ ವಿವಿಧ ಡಿಜಿಟಲ್ ಸಂಶೋಧನಾ ಸೇವೆಗಳ ಪರಿಣಾಮಕಾರಿ ಬಳಕೆಯ ಕುರಿತು ತಾಂತ್ರಿಕ ಅವಧಿಗಳನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಿಂದ ಹೊಸದಾಗಿ ಸೇರ್ಪಡೆಗೊಂಡ ಅಧ್ಯಾಪಕರು ಭಾಗವಹಿಸಿದ್ದರು. ಗ್ರಂಥಾಲಯದ ಅಧಿಕಾರಿಗಳಾದ ಡಾ. ಸತೀಶ್ ವಿ. ತೋಟರ್, ಡಾ. ಜಿ. ಜೆ. ಪಿ. ದೀಕ್ಷಿತ್ ಹಾಗೂ ಸಿಬ್ಬಂದಿಗಳಾದ ರಾಜ್‌ಕುಮಾರ್ ಕಲ್ಯಾಣಿ, ರಾಜೇಶ್ ಸಿ. ದಾಸ್, ಬಸವರಾಜ್ ಯಾದವಾಡ, ನಿಂಗಣ್ಣ ಎಂ. ಜಿ., ಪ್ರಕಾಶ ಎಸ್. ಎನ್., ಸಾಗರ್ ಕಬಾಡೆ, ಸತೀಶ್ ಕುಮಾರ್ ಮತ್ತು ಶಿವಕುಮಾರ್ ಜಿ. ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News