ಕೇಂದ್ರ ಸರಕಾರ ಕಾಂಗ್ರೆಸ್ ಶಾಸಕರನ್ನೇ ಗುರಿಯಾಗಿಸಿ ಈಡಿ ದಾಳಿ ನಡೆಸುತ್ತಿದೆ: ಮಲ್ಲಿಕಾರ್ಜುನ್ ಖರ್ಗೆ
screengrab : x/@kharge
ಕಲಬುರಗಿ: ಕಾಂಗ್ರೆಸ್ ಪಕ್ಷವನ್ನು ಒಡೆಯಲು ಹಾಗು ಶಾಸಕರನ್ನು ವಿಭಜಿಸುವ ಉದ್ದೇಶದಿಂದ ಸಂಚು ಮಾಡಿ ಕೇಂದ್ರ ಸರಕಾರ ನಮ್ಮ ಶಾಸಕರನ್ನೇ ಗುರಿಯಾಗಿಸಿ ಈಡಿ ದಾಳಿ ನಡೆಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಬಳ್ಳಾರಿ ಸಂಸದ ಇ.ತುಕಾರಾಂ, ಶಾಸಕ ಭರತ್ ರೆಡ್ಡಿ, ಗಣೇಶ್ ಸೇರಿ ಕೈ ಮುಖಂಡರ ಮನೆ ಮೇಲೆ ಈಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಿಗಮದ ಹಣ ದುರ್ಬಳಕ್ಕೆ ವಿಚಾರ ಈಡಿಗೆ ಬಿಟ್ಟಿದ್ದು, ಚುನಾವಣೆ ವೇಳೆ ಸಾವಿರಾರು ಕೋಟಿ ರೂ. ಹಣ ಸೀಝ್ ಆಗಿದೆ. ಆದರೆ ಆ ಹಣ ಈಗ ಏಲ್ಲಿ ಹೋಗಿದೆ ಎಂದು ಪ್ರಶ್ನಿಸಿದ ಅವರು, ಚುನಾವಣೆಯಲ್ಲಿ ಯಾರು ಏಷ್ಟು ಖರ್ಚು ಮಾಡುತ್ತಾರೆ ಎನ್ನುವುದು ಗೊತ್ತಿದೆ ಎಂದರು.
ಹೊಸ ಮಂತ್ರಿ ಮಂಡಲ ರಚನೆ ಚರ್ಚೆ ಇಲ್ಲ:
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಜೊತೆಗೆ ಕಾಲ್ತುಳಿತ, ಜಾತಿಗಣತಿ ಸೇರಿ ನಾಲ್ಕು ವಿಷಯಗಳನ್ನು ಚರ್ಚಿಸಿದ್ದೇವೆ, ರಾಜ್ಯದಲ್ಲಿ ಹೊಸ ಮಂತ್ರಿ ಮಂಡಲ ರಚನೆ ಕುರಿತು ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಲ್ತುಳಿತ ಪ್ರಕರಣದಲ್ಲಿ ಸಿಎಂ ಮತ್ತು ಡಿಸಿಎಂ ಅವರ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕುಂಭಮೇಳದ ಘಟನೆಗೆ ಅಲ್ಲಿನ ಸಿಎಂ ಯೋಗಿ ರಾಜೀನಾಮೆ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದ ಅವರು, ಬೆಂಗಳೂರಿನ ಕಾಲ್ತುಳಿತ ಘಟನೆ ಅದು ಆಕಸ್ಮಿಕ. ಈಗ ಸಂಬಂಧಪಟ್ಟವರು ಕ್ಷಮೆಯೂ ಸಹ ಕೇಳಿದ್ದಾರೆ,ಈ ಘಟನೆ ನಡೆಯಬಾರದಿತ್ತು. ನೊಂದ ಕುಟುಂಬಗಳ ನೆರವಿಗೆ ನಿಲ್ಲಲು ರಾಹುಲ್ ಗಾಂಧಿ ಸೂಚಿಸಿದ್ದಾರೆ ಎಂದರು.
3ನೆಯ ಅವಧಿಗೂ ಡೆಪ್ಯೂಟಿ ಸ್ಪೀಕರ್ ಮಾಡಿಲ್ಲ:
ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಆಡಳಿತದ 3ನೇ ಅವಧಿಯಲ್ಲೂ ಲೋಕಸಭೆಯ ಡೆಪ್ಯೂಟಿ ಸ್ಪೀಕರ್ ಹುದ್ದೆ ಖಾಲಿ ಇಟ್ಟಿದ್ದಾರೆ. ಈ ಹುದ್ದೆ ಭರ್ತಿ ಮಾಡದ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಮೋದಿ ಆಗಿದ್ದಾರೆ. ವಿರೋಧ ಪಕ್ಷದ ನಾಯಕರೊಬ್ಬರನ್ನು ಈ ಸ್ಥಾನಕ್ಕೆ ನೇಮಕ ಮಾಡಬೇಕಿತ್ತು. ಅವರು ಮಾಡಿಲ್ಲ. ಇದು ಸಂವಿಧಾನ ವಿರೋಧಿ ನಡೆ. ನಮ್ಮ ಸರಕಾರವಿದ್ದಾಗ ನಾವು ಈ ಹುದ್ದೆಯನ್ನು ಕೊಟ್ಟಿದ್ದೇವೆ ಎಂದರು.