ಚಿತ್ತಾಪುರ | ಎರಡನೇ ಬಾರಿ ದಂಡೋತಿ ಗ್ರಾಮದ ಕಾಗಿಣಾ ನದಿ ಸೇತುವೆ ಮುಳುಗಡೆ
ಕಲಬುರಗಿ : ಚಿತ್ತಾಪುರ ತಾಲೂಕಿನಾದ್ಯಂದ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆಯಿಂದ ತಾಲೂಕಿನ ಕಾಗಿಣಾ ನದಿ ತುಂಬಿ ಹರಿದು ದಂಡೋತಿ ಗ್ರಾಮದ ಕಾಗಿಣಾ ಸೇತುವೆ ವಾರದಲ್ಲಿ ಎರಡನೇ ಭಾರಿ ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದ ವಾಹನ ಸಂಚಾರ ಸ್ಥಗಿತಗೊಂಡು ಸವಾರರು ಪರದಾಡಿದರು.
ಶುಕ್ರವಾರ ಬೆಳಗ್ಗೆ ಸಮಯದಿಂದ ನದಿಯಲ್ಲಿ ಪ್ರವಾಹ ವೇಗವಾಗಿ ಏರುಗತಿಯಲ್ಲಿ ಹೆಚ್ಚಾಗಿ ಸೇತುವೆ ಸಮನಾಗಿ ನೀರು ಹರಿಯುತ್ತಿತ್ತು. ಶನಿವಾರ ರಾತ್ರಿ ಸಮಯದಲ್ಲಿ ಸೇತುವೆಯ ಮೇಲಿಂದ ನೀರು ಹರಿಯುತ್ತಿದೆ.
ಕಾಗಿಣಾ ನದಿ ಮೇಲ್ಬಾಗದ ಸೇಡಂ, ಚಿಂಚೋಳಿ, ಕಾಳಗಿ ತಾಲೂಕುಗಳಲ್ಲಿ ಹಾಗೂ ಬೆಣ್ಣೆತೋರಾ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ನದಿಯಲ್ಲಿ ಪ್ರವಾಹ ಉಕ್ಕೇರಿ ಹರಿಯುತ್ತಿದೆ.
ಸೇತುವೆ ಮಾರ್ಗವಾಗಿ ನಿತ್ಯವೂ ಕಲಬುರಗಿಗೆ ಸಂಚರಿಸುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಸಂಚಾರವನ್ನು ರಾವೂರ್, ಶಹಾಬಾದ್ ಮಾರ್ಗಕ್ಕೆ ಬದಲಿಸಲಾಗಿದೆ. ಸರ್ಕಾರಿ ನೌಕರರು, ಸಾರ್ವಜನಿಕರು, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಪ್ರಯಾಣಿಕರು ಚಿತ್ತಾಪುರಕ್ಕೆ ಬರಲು ಮತ್ತು ಕಲಬುರಗಿಗೆ ಹೋಗಲು ಶಹಾಬಾದ್ ಮಾರ್ಗದ ಸಂಚಾರ ಅವಲಂಭಿಸಿದ್ದಾರೆ.
ಚಿತ್ತಾಪುರ ತಾಲೂಕಿನ ಮುಡಬೂಳ ಗ್ರಾಮದ ಹತ್ತಿರ ನಾಗಾವಿ ಹಳ್ಳದಲ್ಲಿ ಪ್ರವಾಹ ಹೆಚ್ಚಾಗಿ ಮತ್ತು ಕಾಗಿಣಾ ನದಿಯ ಪ್ರವಾಹದ ಹಿನ್ನೀರಿನಿಂದ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಮುಡಬೂಳ ಗ್ರಾಮವು ಚಿತ್ತಾಪುರದಿಂದ ಸಂಪರ್ಕ ಕಡಿದುಕೊಂಡಿದೆ. ಇವಣಿ ಗ್ರಾಮದ ಹತ್ತಿರ ಹರಿಯುವ ಹಳ್ಳದಲ್ಲಿ ಪ್ರವಾಹ ಬಂದು ಹಾಗೂ ಕಾಗಿಣಾ ನದಿಯ ಹಿನ್ನೀರು ಸೇರಿ ಸೇತುವೆ ಮುಳುಗಡೆಯಾಗಿದೆ. ಬೆಳಗುಂಪಾ ಗ್ರಾಮದ ಸುತ್ತಲೂ ಎರಡು ಹಳ್ಳಗಳ ಪ್ರವಾಹ ಹರಿಯುತ್ತಿದೆ.
ಮರಗೋಳ ಕ್ರಾಸ್, ದಂಡೋತಿ ಗ್ರಾಮ, ಮುಡಬೂಳ ಕ್ರಾಸ್ ಹತ್ತಿರ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಅವರ ಮಾರ್ಗದರ್ಶನದ ಮೇರೆಗೆ ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್'ಐ ಶ್ರೀಶೈಲ್ ಅಂಬಾಟಿ ಹಾಗೂ ಸಿಬ್ಬಂದಿಗಳು ಕಾಗಿಣ ನದಿಯ ಹತ್ತಿರ ಹೋಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದಾರೆ.
ನಿದ್ದೆಗೆಟ್ಟು ಅಧಿಕಾರಿಗಳ ಅಲೆದಾಟ :
ಚಿತ್ತಾಪುರ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆ ಮತ್ತು ಬೆಣ್ಣೆತೊರಾ, ಕಾಗಿಣಾ, ನದಿಗಳು ಪ್ರವಾಹದಿಂದ ತುಂಬಿ ಭೋರ್ಗರೆಯುತ್ತಿದ್ದು, ಸಾರ್ವಜನಿಕರು ಅಪಾಯಕ್ಕೆ ಸಿಲುಕದಂತೆ ಎಚ್ಚರ ವಹಿಸಿ ತಹಶೀಲ್ದಾರ್ ನಾಗಯ್ಯ ಹಿರೇಮಠ, ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಅವರು ನಿದ್ದೆಗೆಟ್ಟು ರಾತ್ರಿಯಿಡಿ ಅಲೆದಾಡಿದ್ದಾರೆ.
ಮುಳುಗಡೆಯಾಗುವ ಸೇತುವೆಗಳ ಸ್ಥಳಕ್ಕೆ ಹಾಗೂ ವಿವಿಧ ಹಳ್ಳಗಳ ನೀರು ನುಗ್ಗುವ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿ ಮಳೆ ಮತ್ತು ಪ್ರವಾಹದ ಸ್ಥಿತಿಗತಿ ಮೇಲಾಧಿಕಾರಿಗಳಿಗೆ ತಿಳಿಸುವ ಕೆಲಸ ಸುರಿಯುವ ಮಳೆಯಲ್ಲಿಯೆ ಮಾಡಿದ್ದಾರೆ.
ಬೆಳೆ ಸಂಪೂರ್ಣ ಹಾನಿ :
ಧಾರಾಕಾರ ಮಳೆಯಿಂದ ತಾಲೂಕಿನ ವಿವಿಧೆಡೆ ನದಿ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ದಂಡೋತಿ, ಭಾಗೋಡಿ, ಮುಡಬೂಳ, ಮರಗೋಳ, ಕದ್ದರಗಿ, ಹೊಸ್ಸೂರ್, ಭಂಕಲಗಾ, ಅಳ್ಳೋಳ್ಳಿ ಸೇರಿದಂತೆ ಇನ್ನಿತರ ಗ್ರಾಮದ ಹೊಲಗಳಲ್ಲಿ ಮಳೆ ನೀರು ಹೊಲಗಳಿಗೆ ನುಗ್ಗಿ ತೊಗರಿ ಬೆಳೆಗಳು ಹಾನಿಯಾಗಿವೆ.